ಇದಾಗಲೇ ಸಲ್ಮಾನ್‌ ಖಾನ್‌ಗೆ ಹಲವು ಬಾರಿ ಕೊಲೆ ಬೆದರಿಕೆ ಹಾಕಿರುವ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ, ನಿನ್ನೆ ಮನೆಯ ಎದುರು ಗುಂಡಿನ ದಾಳಿ ನಡೆಸಿದರೂ ಸಲ್ಮಾನ್‌ ಅಪ್ಪ ಸಲೀಂ ಹೇಳ್ತಿರೋದೇನು?  

ನಿನ್ನೆ ಮುಂಜಾನೆ 4.55ರ ಸುಮಾರಿಗೆ ನಟ ಸಲ್ಮಾನ್​ ಖಾನ್​ (Salman Khan) ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗಡೆ ಗುಂಡಿನ ದಾಳಿ ನಡೆದು ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಇದರ ಬೆನ್ನಲ್ಲೇ ನಟ ಸಲ್ಮಾನ್‌ ಖಾನ್‌ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಿಸಿಟಿವಿ ಫುಟೇಜ್‌ ನೋಡಿದಾಗ ದಾಳಿಕೋರರು ಅಲ್ಲಿ ಗಲಾಟೆ ಮಾಡಿರುವುದು ಕಂಡುಬಂದಿದೆ. ಇದರ ಬೆನ್ನಲ್ಲೇ ಗ್ಯಾಂಗ್‌ಸ್ಟರ್‌ ಲಾರೆನ್ಸ್​ ಬಿಷ್ಣೋಯಿ ಕೂಡ ತಮ್ಮವರೇ ಇದನ್ನು ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಮಧ್ಯಾಹ್ನ 11.30 ಸುಮಾರಿಗೆ ಲಾರೆನ್ಸ್​ ಬಿಷ್ಣೋಯಿ ಫೇಸ್​ಬುಕ್​ನಲ್ಲಿ ಈ ಪೋಸ್ಟ್​ ಹಾಕಿದ್ದ. ಗುಂಡಿನ ದಾಳಿಯನ್ನು ನಡೆಸಿರುವುದು ತಮ್ಮವರೇ ಎಂದು ಹೇಳಿಕೊಂಡಿರುವ ಲಾರೆನ್ಸ್​, ಕೃಷ್ಣಮೃಗ ಬೇಟೆಯ ಬಗ್ಗೆ ಇದುವರೆಗೆ ಕ್ಷಮೆ ಕೋರದ ಸಲ್ಮಾನ್​ ಖಾನ್​ ವಿರುದ್ಧ ಹೀಗೆ ಹರಿಹಾಯ್ದಿದ್ದ. "ಓಂ" ಮತ್ತು "ಜೈ ಶ್ರೀ ರಾಮ್" ಎಂದು ಪ್ರಾರಂಭವಾಗಿರುವ ಈ ಪೋಸ್ಟ್​ನಲ್ಲಿ ನಮ್ಮ ಮನೆಯ ನಾಯಿಗಳಿಗೆ ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲ್ ಎಂದು ಹೆಸರು ಇಡಲಾಗಿದೆ. ಆದರೆ ನೀನು ಹಲವರ ಪಾಲಿಗೆ ದೇವರಾಗಿದ್ದಿ, ನಮಗೆ ಒಟ್ಟಿನಲ್ಲಿ ಶಾಂತಿ ಬೇಕು. ಅದಕ್ಕೆ ನೀನು ಒಪ್ಪದಿದ್ದರೆ ಮುಂದಿನ ಗುಂಡು ಮನೆಯ ಮೇಲೆ ಬೀಳುವುದಿಲ್ಲ ಎಂದಿದ್ದಾನೆ. ಈ ಪೋಸ್ಟ್​ನಲ್ಲಿ "ಲಾರೆನ್ಸ್ ಬಿಷ್ಣೋಯ್ ಗುಂಪು" ಮತ್ತು ಗ್ಯಾಂಗ್​ಸ್ಟರ್​ಗಳಾದ ಗೋಲ್ಡಿ ಬ್ರಾರ್, ರೋಹಿತ್ ಗೋಡಾರಾ ಮತ್ತು ಕಲಾ ಜಥಾರಿ ಅವರ ಹೆಸರುಗಳು ಇವೆ.

ಇದೀಗ ದಾಳಿಯ ಕುರಿತು ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌ ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟಕ್ಕೂ ಅವರು ಹೇಳಿರುವುದು ಏನೆಂದರೆ, ಇದರಲ್ಲಿ ಹೆದರುವಂಥದ್ದು ಏನೂ ಇಲ್ಲ, ಅವರಿಗೆ ಪ್ರಚಾರ ಬೇಕಷ್ಟೇ ಅದಕ್ಕೆ ಹೀಗೆಲ್ಲಾ ಮಾಡುತ್ತಿದ್ದಾರೆ. ಮತ್ತೇನೂ ಇಲ್ಲ ಎಂದು ಹೇಳಿದ್ದಾರೆ. ಇದರ ಹೊರತಾಗಿಯೂ ಸಲ್ಮಾನ್‌ ಖಾನ್‌ ಅಭಿಮಾನಿಗಳಿಗೆ ಆತಂಕ ಹೆಚ್ಚಾಗಿದೆ. ಇದಕ್ಕೆ ಕಾರಣ, ಲಾರೆನ್ಸ್‌ ಬಿಷ್ಣೋಯಿ ಫೇಸ್‌ಬುಕ್‌ನಲ್ಲಿ ಬರೆದಿರುವ ಬರಹ. 

ನಿನಗೆ ಯುದ್ಧವೇ ಬೇಕಿದ್ರೆ ಇದು ಟ್ರೇಲರ್​ ಅಷ್ಟೇ, ಇನ್ನು ಗುಂಡು ಗೋಡೆಗೆ ಬೀಳಲ್ಲ- ಜೈ ಶ್ರೀರಾಮ್​: ಲಾರೆನ್ಸ್​ ಬಿಷ್ಣೋಯಿ

ಅಷ್ಟೇ ಅಲ್ಲದೇ, ಲಾರೆನ್ಸ್​ ಬಿಷ್ಣೋಯ್​ ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಇದಾಗಲೇ ಹಲವಾರು ಬಾರಿ ಬೆದರಿಕೆ ಹಾಕಿದ್ದಾನೆ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ (Blackbuck poaching case) ಸಲ್ಮಾನ್ ಖಾನ್ ತಪ್ಪಿತಸ್ಥ ಎಂದು ಸಾಬೀತಾಗಿದ್ದೇ ಈ ಬೆದರಿಕೆಗೆ ಕಾರಣ. ಈ ಪ್ರಕರಣದಲ್ಲಿ ಸಲ್ಮಾನ್​ ಸದ್ಯ ಜಾಮೀನಿನ ಮೇಲೆ ಇದ್ದರೂ, ಬಿಷ್ಣೋಯ್ ಸಮುದಾಯವರು ಮಾತ್ರ ನಟನ ಬೆನ್ನ ಬಿದ್ದಿದ್ದಾನೆ. ಏಕೆಂದರೆ, ಕೃಷ್ಣಮೃಗಗಳನ್ನು ಬಿಷ್ಣೋಯ್ ಸಮುದಾಯವು ಪವಿತ್ರವೆಂದು ಪರಿಗಣಿಸುತ್ತದೆ. ಅದಕ್ಕಾಗಿಯೇ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಸಲ್ಮಾನ್ ಖಾನ್ ಅವರನ್ನು ಟಾರ್ಗೆಟ್ ಮಾಡಿದ್ದಾನೆ.

ಕೊಲೆ ಬೆದರಿಕೆ ಒಡ್ಡಿರುವ ಆರೋಪ ಹೊತ್ತ ಲಾರೆನ್ಸ್ ಬಿಷ್ಣೋಯ್ ಜೈಲಿನಲ್ಲಿ ಇದ್ದು, ಈಗ ಪದೇ ಪದೇ ಮತ್ತೆ ಬೆದರಿಕೆ ಹಾಕುತ್ತಲೇ ಇದ್ದಾನೆ. ಅಷ್ಟಕ್ಕೂ ಆತನ ಬೇಡಿಕೆ ಎಂದರೆ ಕೃಷ್ಣಮೃಗವನ್ನು ಕೊಂದಿರುವುದಕ್ಕೆ ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು ಎನ್ನುವುದು. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರ ಭವಿಷ್ಯವನ್ನು ಯಾವುದೇ ನ್ಯಾಯಾಲಯ ನಿರ್ಧರಿಸುವುದಿಲ್ಲ ಎಂದು ಲಾರೆನ್ಸ್ ಬಿಷ್ಣೋಯ್ ಇದಾಗಲೇ ಹೇಳಿದ್ದಾನೆ. ಪೊಲೀಸರ ಮುಂದೆ ನೀಡಿದ ಹೇಳಿಕೆಯಲ್ಲಿ, ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಈ ವಿಷಯದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರೆ (Apology) ತಮ್ಮ ಮನಸ್ಸು ಕೂಡ ಬದಲಾಗಬಹುದು ಎಂದು ಲಾರೆನ್ಸ್ ಬಿಷ್ಣೋಯ್ ಈ ಹಿಂದೆ ಹೇಳಿದ್ದ. ಇದರ ಹೊರತಾಗಿಯೂ ಸಲ್ಮಾನ್​ ಖಾನ್​ ಕ್ಷಮೆ ಕೋರಿಲ್ಲ ಎನ್ನುವುದು ಅವರಿಗೆ ಇರುವ ಆಕ್ರೋಶ. ಕ್ಷಮೆ ಕೋರದೇ ಹೋದರೆ ಪರಿಣಾಮ ಎದುರಿಸಲು ಸಿದ್ಧ ಇರಿ ಎಂದು ಗ್ಯಾಂಗ್​ ಎಚ್ಚರಿಕೆ ನೀಡುತ್ತಲೇ ಇದೆ. ಕ್ಷಮೆ ಕೋರದ ಸಲ್ಮಾನ್ ಅವರ ಅಹಂಕಾರವನ್ನು ಮುರಿಯುತ್ತೇವೆ ಎಂದಿದ್ದಾನೆ. ಇದರ ಬೆನ್ನಲ್ಲೇ ಕೊಲೆ ಬೆದರಿಕೆ, ಗುಂಡಿನ ದಾಳಿ ನಡೆಯುತ್ತಿದೆ. 
ಸಲ್ಮಾನ್​ ಬೆಂಬಲಿಗ ಗಿಪ್ಪಿ ಮನೆ ಮೇಲೂ ಗುಂಡಿನ ದಾಳಿ, ರಾಖಿಗೂ ಬೆದರಿಕೆ: ಅಷ್ಟಕ್ಕೂ ನಟನ ಮೇಲೆ ಏಕಿಷ್ಟು ಕೋಪ?