ದೊಡ್ಡ ದೊಡ್ಡ ಸ್ಟಾರ್‌ಗಳ ಸಿನಿಮಾ ಮಾಡಿದರೆ ಅದು ಬಿಡುಗಡೆಯಾಗುತ್ತೋ ಇಲ್ಲವೋ ಎಂಬ ಆತಂಕವಿರುತ್ತೆ. ಆದರೆ "ಆರ್.ಜಿ.ವಿ ಒಬ್ಬ ಪಕ್ಕಾ ಶೋಮ್ಯಾನ್. ಅವರ ಸಿನಿಮಾ ಎಂದರೆ ಜನರಿಗೆ ಕುತೂಹಲ ಇದ್ದೇ ಇರುತ್ತದೆ. ಸಿನಿಮಾ ಥಿಯೇಟರ್‌ಗೆ ಬರುವುದು ಗ್ಯಾರಂಟಿ" ಎಂಬ ವಿಶ್ವಾಸ ನಿರ್ಮಾಪಕರದ್ದು.

ಹೊಸ ಹೆಜ್ಜೆಯಿಟ್ಟ ರಾಮ್ ಗೋಪಾಲ್ ವರ್ಮಾ

Add Asianetnews Kannada as a Preferred SourcegooglePreferred

ಭಾರತೀಯ ಚಿತ್ರರಂಗದಲ್ಲಿ ರಾಮ್ ಗೋಪಾಲ್ ವರ್ಮಾ (Ram Gopal Varma) ಅಂದರೆ ಕೇವಲ ಹೆಸರಲ್ಲ, ಅದೊಂದು ವಿವಾದ ಮತ್ತು ವೈವಿಧ್ಯದ ಬ್ರ್ಯಾಂಡ್. ಇಷ್ಟು ದಿನ 'ಶಿವ', 'ಸತ್ಯ', 'ಸರ್ಕಾರ್' ಅಂತಹ ಅದ್ಭುತ ಸಿನಿಮಾಗಳ ಮೂಲಕ ತೆರೆಯ ಹಿಂದೆ ನಿಂತು ಮ್ಯಾಜಿಕ್ ಮಾಡುತ್ತಿದ್ದ ಈ 'ಕ್ರೇಜಿ' ನಿರ್ದೇಶಕ, ಈಗ ತಾವೇ ಬಣ್ಣ ಹಚ್ಚಿ ತೆರೆಯ ಮುಂದೆ ಅಬ್ಬರಿಸಲು ಸಜ್ಜಾಗಿದ್ದಾರೆ. ಹೌದು, ನೀವು ಕೇಳುತ್ತಿರುವುದು ನಿಜ. ಆಕ್ಷನ್ ಮತ್ತು ಕಟ್ ಹೇಳುತ್ತಿದ್ದ ಆರ್.ಜಿ.ವಿ ಈಗ ಪೂರ್ಣ ಪ್ರಮಾಣದ ನಾಯಕ ನಟನಾಗಿ (Lead Actor) ಎಂಟ್ರಿ ಕೊಡುತ್ತಿದ್ದಾರೆ!

'ಶೋಮ್ಯಾನ್' ಆದ ವರ್ಮಾ: ಏನಿದು 'ಮ್ಯಾಡ್ ಮಾನ್ಸ್ಟರ್' ಅವತಾರ?

ಸದಾ ಏನಾದರೊಂದು ಹೊಸ ಬಾಂಬ್ ಸಿಡಿಸುವ ವರ್ಮಾ, ಈ ಬಾರಿ 'ಶೋಮ್ಯಾನ್' (Showman) ಎಂಬ ಗ್ಯಾಂಗ್‌ಸ್ಟರ್ ಡ್ರಾಮಾ ಸಿನಿಮಾದ ಮೂಲಕ ನಾಯಕನಾಗುತ್ತಿದ್ದಾರೆ. ಈ ಚಿತ್ರಕ್ಕೆ 'ಮ್ಯಾಡ್ ಮಾನ್ಸ್ಟರ್' (Mad Monster) ಎಂಬ ಟ್ಯಾಗ್ ಲೈನ್ ಇಡಲಾಗಿದ್ದು, ಇದು ವರ್ಮಾ ಅವರ ವ್ಯಕ್ತಿತ್ವಕ್ಕೆ ಹೇಳಿ ಮಾಡಿಸಿದಂತಿದೆ. ನೂತನ್ ಎಂಬ ಹೊಸ ಪ್ರತಿಭೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ವರ್ಮಾ ಅವರ ಆಪ್ತ ಮತ್ತು ಹಿರಿಯ ನಿರ್ಮಾಪಕ ರಾಮ ಸತ್ಯನಾರಾಯಣ ಬಂಡವಾಳ ಹೂಡುತ್ತಿದ್ದಾರೆ.

ಚಿರಂಜೀವಿ, ಬಾಲಯ್ಯ ಡೇಟ್ಸ್ ಸಿಗಲಿಲ್ಲ, ಅದಕ್ಕೆ ಆರ್‌ಜಿವಿ ಹೀರೊ!

ಈ ಸಿನಿಮಾಗೆ ವರ್ಮಾ (RGV) ಅವರೇ ಯಾಕೆ ಹೀರೋ ಆದರು ಎಂಬುದರ ಹಿಂದಿನ ಕಥೆ ಬಲು ರೋಚಕವಾಗಿದೆ. ನಿರ್ಮಾಪಕ ರಾಮ ಸತ್ಯನಾರಾಯಣ ಅವರು ಹೇಳುವ ಪ್ರಕಾರ, ಈ ಕಥೆಗೆ ಟಾಲಿವುಡ್‌ನ ಘಟಾನುಘಟಿ ನಾಯಕರೇ ಬೇಕಿದ್ದರಂತೆ. "ನಾನು ಮೊದಲು ಮೆಗಾಸ್ಟಾರ್ ಚಿರಂಜೀವಿ, ನಂದಮೂರಿ ಬಾಲಕೃಷ್ಣ, ಅಕ್ಕಿನೇನಿ ನಾಗಾರ್ಜುನ ಮತ್ತು ವೆಂಕಟೇಶ್ ಅವರಂತಹ ಸ್ಟಾರ್‌ಗಳನ್ನು ಸಂಪರ್ಕಿಸಿದೆ. ಆದರೆ ಅವರೆಲ್ಲರೂ ಬ್ಯುಸಿ ಇದ್ದ ಕಾರಣ ಡೇಟ್ಸ್ ಸಿಗಲಿಲ್ಲ. ಹಾಗಾಗಿ ನಾನು ನನ್ನ ಪಾಲಿನ ದೇವರು, ರಾಮ್ ಗೋಪಾಲ್ ವರ್ಮಾ ಅವರನ್ನೇ ನಾಯಕನನ್ನಾಗಿ ಮಾಡಲು ನಿರ್ಧರಿಸಿದೆ" ಎಂದು ನಿರ್ಮಾಪಕರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ದೊಡ್ಡ ದೊಡ್ಡ ಸ್ಟಾರ್‌ಗಳ ಸಿನಿಮಾ ಮಾಡಿದರೆ ಅದು ಬಿಡುಗಡೆಯಾಗುತ್ತೋ ಇಲ್ಲವೋ ಎಂಬ ಆತಂಕವಿರುತ್ತೆ. ಆದರೆ "ಆರ್.ಜಿ.ವಿ ಒಬ್ಬ ಪಕ್ಕಾ ಶೋಮ್ಯಾನ್. ಅವರ ಸಿನಿಮಾ ಎಂದರೆ ಜನರಿಗೆ ಕುತೂಹಲ ಇದ್ದೇ ಇರುತ್ತದೆ. ಸಿನಿಮಾ ಥಿಯೇಟರ್‌ಗೆ ಬರುವುದು ಗ್ಯಾರಂಟಿ" ಎಂಬ ವಿಶ್ವಾಸ ನಿರ್ಮಾಪಕರದ್ದು.

50 ಕೋಟಿ ಸಂಭಾವನೆಯ ಮೌಲ್ಯದ ನಟ!

ಇನ್ನು ಸಂಭಾವನೆ ವಿಷಯಕ್ಕೆ ಬಂದರೆ ಅಲ್ಲಿಯೂ ಒಂದು ಟ್ವಿಸ್ಟ್ ಇದೆ. ನಿರ್ಮಾಪಕರು ಹೇಳುವಂತೆ, "ಆರ್.ಜಿ.ವಿ ಅವರು 50 ಕೋಟಿ ರೂ. ಸಂಭಾವನೆಗೆ ಅರ್ಹರು. ಆದರೆ ಸದ್ಯಕ್ಕೆ ಅವರು ಈ ಸಿನಿಮಾಗಾಗಿ ನಯಾಪೈಸೆ ಪಡೆದಿಲ್ಲ. ಸಿನಿಮಾ ಪೂರ್ತಿಯಾದ ಬಳಿಕವಷ್ಟೇ ಅವರು ತಮ್ಮ ಪಾಲನ್ನು ಪಡೆಯಲಿದ್ದಾರೆ" ಎಂದಿದ್ದಾರೆ. ಇದು ಸಿನಿಮಾದ ಮೇಲಿರುವ ಅವರ ನಂಬಿಕೆಯನ್ನು ತೋರಿಸುತ್ತದೆ.

ಶಿವಾಜಿ ಚಿತ್ರದಂತೆ ಅಬ್ಬರಿಸಲಿದ್ದಾರೆ ಸುಮನ್:

ಈ ಗ್ಯಾಂಗ್‌ಸ್ಟರ್ ಸಿನಿಮಾದಲ್ಲಿ ಹೀರೋ ಎಷ್ಟು ಪವರ್‌ಫುಲ್ ಆಗಿದ್ದಾರೋ, ವಿಲನ್ ಕೂಡ ಅಷ್ಟೇ ಖತರ್ನಾಕ್ ಆಗಿರಲಿದ್ದಾರೆ. ಹಿರಿಯ ನಟ ಸುಮನ್ (Suman) ಈ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ರಜನಿಕಾಂತ್ ಅವರ ಬ್ಲಾಕ್‌ಬಸ್ಟರ್ ಸಿನಿಮಾ 'ಶಿವಾಜಿ'ಯಲ್ಲಿ ಸುಮನ್ ಅವರು ತೋರಿಸಿದ ಖದರ್ ಮತ್ತು ಅಬ್ಬರವನ್ನು ಪ್ರೇಕ್ಷಕರು ಮತ್ತೆ ಈ ಚಿತ್ರದಲ್ಲಿ ನೋಡಬಹುದು ಎಂದು ಚಿತ್ರತಂಡ ಭರವಸೆ ನೀಡಿದೆ.

ಮುಂಬೈ ಭೂಗತ ಲೋಕದ ಕರಾಳ ಸತ್ಯಗಳನ್ನು ಈ ಸಿನಿಮಾ ಒಳಗೊಂಡಿರಲಿದ್ದು, ಈಗಾಗಲೇ ಮುಂಬೈನಲ್ಲಿ ಶೂಟಿಂಗ್ ಭರದಿಂದ ಸಾಗುತ್ತಿದೆ. ಸದ್ಯದಲ್ಲೇ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಒಟ್ಟಿನಲ್ಲಿ, ನಿರ್ದೇಶಕರಾಗಿ ಭೂಗತ ಲೋಕವನ್ನು ಅನಾವರಣ ಮಾಡಿದ್ದ ವರ್ಮಾ, ಈಗ ತಾವೇ ಗನ್ ಹಿಡಿದು ನಿಂತರೆ ಹೇಗಿರಬಹುದು ಎಂಬ ಕುತೂಹಲ ಸಿನಿಪ್ರಿಯರಲ್ಲಿ ಮನೆಮಾಡಿದೆ.