ನಟ ಚಿರಂಜೀವಿಗೆ ಕ್ಯಾನ್ಸರ್ ವದಂತಿ ವೈರಲ್: ಪ್ರತಿಕ್ರಿಯೆ ನೀಡಿದ ಮೆಗಾಸ್ಟಾರ್
ನಟ ಚಿರಂಜೀವಿಗೆ ಕ್ಯಾನ್ಸರ್ ಇದೆ ಎನ್ನುವ ವದಂತಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಬಗ್ಗೆ ಸ್ವತಃ ಚಿರಂಜೀವಿ ಅವರೇ ಪ್ರತಿಕ್ರಿಯೆ ನೀಡುವ ಮೂಲಕ ಅಭಿಮಾನಿಗಳ ಆತಂಕ ದೂರ ಮಾಡಿದ್ದಾರೆ.
ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಆನಾರೋಗ್ಯದ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಚಿರಂಜೀವಿ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದ್ದು ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ. ಕ್ಯಾನ್ಸರ್ ಸುದ್ದಿ ವೈರಲ್ ಆದ ಬೆನ್ನಲ್ಲೇ ನಟ ಚಿರಂಜೀವಿ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಕ್ಯಾನ್ಸರ್ ಇಲ್ಲ ಎಂದು ಬಹಿರಂಗ ಪಡಿಸಿದ್ದಾರೆ. ಚಿರಂಜೀವಿ ಮಾತು ಕೇಳಿ ಅಭಿಮಾನಿಗಳು ನಿಟ್ಟುಸಿರುಬಿಟ್ಟಿದ್ದಾರೆ. ಮೊದಲೇ ಎಚ್ಚೆತ್ತುಕೊಂಡು ಈಗಾಗಲೆ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದು ಕ್ಯಾನ್ಸರ್ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಚಿರಂಜೀವಿ ದೀರ್ಘವಾದ ಪೋಸ್ಟ್ ಅನ್ನು ತೆಲುಗಿನಲ್ಲಿ ಶೇರ್ ಮಾಡಿದ್ದಾರೆ.
'ಸ್ವಲ್ಪ ಸಮಯದ ಹಿಂದೆ ನಾನು ಕ್ಯಾನ್ಸರ್ ಕೇಂದ್ರವನ್ನು ಉದ್ಘಾಟಿಸುವಾಗ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯದ ಬಗ್ಗೆ ಮಾತನಾಡಿದ್ದೆ. ಆಗಾಗ ವೈದ್ಯಕೀಯ ಪರೀಕ್ಷೆ ಮಾಡಿಸಿದರೆ ಕ್ಯಾನ್ಸರ್ ತಡೆಗಟ್ಟಬಹುದು ಅಂತ ನಿಮಗೆ ಹೇಳಿದ್ದೆ. ನಾನೂ ಕೂಡ ಎಚ್ಚರಿಕೆ ವಹಿಸಿ, ಪರೀಕ್ಷೆ ಮಾಡಿಸಿದ್ದೆ. ನನ್ನಲ್ಲಿ ಕ್ಯಾನ್ಸರಸ್ ಅಲ್ಲದ ಊತ ಕಾಣಿಸಿತ್ತು. ಬಳಿಕ ಅದನ್ನು ತೆಗೆಯಲಾಯಿತು. ಆ ಪರೀಕ್ಷೆ ಮಾಡಿಸಿಕೊಳ್ಳದೇ ಇದ್ದಿದ್ದರೆ ಅದು ಕ್ಯಾನ್ಸರ್ ಆಗಿ ಬದಲಾಗುವ ಸಾಧ್ಯತೆ ಇತ್ತು. ಹಾಗಾಗಿಯೇ ಎಲ್ಲರೂ ಮುಂಜಾಗೃತೆ ವಹಿಸಿ, ಪರೀಕ್ಷೆ ಮಾಡಿಸಿಕೊಳ್ಳಬೇಕು ಅಂತ ಮಾತ್ರ ನಾನು ಹೇಳಿದ್ದೆ' ಎಂದು ಚಿರಂಜೀವಿ ಟ್ವೀಟ್ ಮಾಡಿದ್ದಾರೆ.
'ಕೆಲ ಮಾಧ್ಯಮ ಸಂಸ್ಥೆಗಳು ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ನನಗೆ ಕ್ಯಾನ್ಸರ್ ಇದೆ, ಚಿಕಿತ್ಸೆಯಿಂದ ಬದುಕುಳಿದಿದ್ದೇನೆ ಎಂದು ಸುದ್ದಿ ಬಿತ್ತರಿಸಿವೆ, ಕೆಲವು ವೆಬ್ ಲೇಖನಗಳನ್ನು ಮಾಡಿದ್ದಾರೆ. ಇದರಿಂದ ಅನಗತ್ಯ ಗೊಂದಲ ಉಂಟಾಗಿದೆ. ಹಲವು ಹಿತೈಷಿಗಳು ನನ್ನ ಬಗ್ಗೆ ಸಂದೇಶ ಕಳುಹಿಸುತ್ತಿದ್ದಾರೆ. ಅವರೆಲ್ಲರಿಗಾಗಿ ಈ ಸ್ಪಷ್ಟನೆ. ಪತ್ರಕರ್ತರಲ್ಲಿಯೂ ಒಂದು ಮನವಿ. ವಿಷಯ ಅರ್ಥ ಮಾಡಿಕೊಳ್ಳದೆ ಅಸಂಬದ್ಧವಾಗಿ ಬರೆಯಬೇಡಿ. ಇದರಿಂದ ಅನೇಕರಿಗೆ ಭಯ ಮತ್ತು ನೋವಾಗಿದೆ' ಎಂದು ಹೇಳಿದ್ದಾರೆ.
ಆಸ್ಕರ್ ಗೆದ್ದು ಭಾರತಕ್ಕೆ ಬರುತ್ತಿದ್ದಂತೆ ಕೇಂದ್ರ ಸಚಿವ ಅಮಿತ್ ಶಾ ಭೇಟಿಯಾದ ರಾಮ್ ಚರಣ್
ಚಿರಂಜೀವಿ ಪೋಸ್ಟ್ಗೆ ಅಭಿಮಾನಿಗಳು ಸ್ಪಷ್ಟನೆ ನೀಡಿದ್ದು ಒಳ್ಳೆದಾಯಿತು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಚಿರಂಜೀವಿ ಆರೋಗ್ಯವಾಗಿರಲಿ, ಮತ್ತಷ್ಟು ಉತ್ತಮ ಸಿನಿಮಾಗಳನ್ನು ಮಾಡಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಸ್ವತಃ ಚಿರಂಜೀವಿ ಅವರೇ ಪ್ರತಿಕ್ರಿಯೆ ನೀಡಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.
'ಮೆಗಾ' ಕುಟುಂಬದಲ್ಲಿ ಮತ್ತೊಂದು ವಿಚ್ಛೇದನ ವದಂತಿ; ಪತಿಯನ್ನು ಅನ್ಫಾಲೋ ಮಾಡಿ ಫೋಟೋ ಡಿಲೀಟ್ ಮಾಡಿದ ನಿಹಾರಿಕಾ
ಚಿರಂಜೀವಿ ಸಿನಿಮಾ ವಿಚಾರಕ್ಕೆ ಬರುವುದಾದರೆ ಭೋಲಾ ಶಂಕರ ಚಿತ್ರದಲ್ಲಿ ನಟಿಸಿದ್ದು ರಿಲೀಸ್ಗೆ ಎದುರು ನೋಡುತ್ತಿದ್ದಾರೆ. ಈ ಚಿತ್ರಕ್ಕೆ ಮೆಹರ್ ರಮೇಶ್ ನಿರ್ದೇಶನ ಮಾಡಿದ್ದು ಚಿರಂಜೀವಿ ಜೊತೆ ತಮನ್ನಾ ಮತ್ತು ಕೀರ್ತಿ ಸುರೇಶ್ ನಟಿಸಿದ್ದಾರೆ. ಸದ್ಯದಲ್ಲೇ ಭೋಲಾ ಶಂಕರ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಚಿರಂಜೀವಿ.