Asianet Suvarna News Asianet Suvarna News

ಮಥುರಾಕ್ಕೆ ಹೇಮಾ ಮಾಲಿನಿ ಫಿಕ್ಸ್​! ಕಂಗನಾ ರಣಾವತ್​ ಕಥೆ ಏನು? ಬಿಜೆಪಿ ಪಟ್ಟಿ ಹೇಳ್ತಿರೋದೇನು?

ಬಿಜೆಪಿ ಮೊದಲ ಪಟ್ಟಿ ರಿಲೀಸ್​ ಮಾಡಿದೆ. ಅದರಲ್ಲಿ ಹೇಮಾ ಮಾಲಿನಿಯವರು ಪುನಃ ಮಥುರಾದಿಂದ ಕಣಕ್ಕೆ ಇಳಿಯಲಿದ್ದಾರೆ. ಆದರೆ ಕಂಗನಾ ರಣಾವತ್​?
 

Hema Malini will again enter the fray from Mathura what about Kangana Ranaut suc
Author
First Published Mar 2, 2024, 9:56 PM IST

ಲೋಕಸಭೆ ಚುನಾವಣೆ ಇನ್ನೇನು ಹತ್ತಿರವಾಗುತ್ತಿದೆ. ಇಂದು ಬಿಜೆಪಿ 197 ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್​ ಮಾಡಿದೆ. 16 ರಾಜ್ಯ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಿಂದ 195 ಸೀಟುಗಳಿಗೆ ಹೆಸರು ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ ವಾರಣಾಸಿ ಕ್ಷೇತ್ರ ಸೇರಿದಂತೆ 34 ಸಚಿವರು ಕಣದಲ್ಲಿದ್ದಾರೆ. ಅದರಲ್ಲಿ ಬಾಲಿವುಡ್ ನಟಿ ಹೇಮಾ ಮಾಲಿನಿ  ಲೋಕಸಭೆ ಚುನಾವಣೆ ಅಖಾಡಕ್ಕೆ ಪುನಃ ಎಂಟ್ರಿ ಕೊಟ್ಟಿದ್ದಾರೆ. 2ನೇ ಬಾರಿ ಲೋಕಸಭೆ ಚುನಾವಣೆಗೆ ಮಥುರಾದಿಂದ ಕಣಕ್ಕೆ ಇಳಿಯಲಿದ್ದು, ಅವರ ಹೆಸರು ಬಿಡುಗಡೆ ಮಾಡಲಾಗಿದೆ. ಅಂದಹಾಗೆ 1999ರಿಂದಲೂ ಹೇಮಾ ಮಾಲಿನಿ ರಾಜಕೀಯದಲ್ಲಿ ಗುರುತಿಸಿಕೊಂಡವರು. ಆರಂಭದಲ್ಲಿ ಅಂದಿನ ಬಾಲಿವುಡ್​ ಸೂಪರ್​ ಸ್ಟಾರ್​  ವಿನೋದ್ ಖನ್ನಾ ಪರವಾಗಿ  ಪ್ರಚಾರ ಮಾಡಿದ್ದರು. 2004ರಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರಿದರು. 10 ವರ್ಷಗಳ ಬಳಿಕ ಅಂದರೆ 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಜಯಂತ್ ಚೌಧರಿ ಅವರನ್ನು ಸೋಲಿಸಿ  ಮಥುರಾದಲ್ಲಿ ಗೆದ್ದು ಬೀಗಿದ್ದರು. ಇದೀಗ 2ನೇ ಬಾರಿ ಇದೇ  ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.  

ಈ ಹಿಂದೆ ಕೂಡ  ಹೇಮಾ ಮಾಲಿನಿ ಇದೇ ಮಾತನ್ನು ಹೇಳಿದ್ದರು.  ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಮಥುರಾದಿಂದ ಮಾತ್ರ ಸ್ಪರ್ಧಿಸುತ್ತೇನೆ ಹೊರತು ಬೇರೆ ಯಾವುದೇ ಕ್ಷೇತ್ರದಿಂದಲ್ಲ ಎಂದು ಹೇಳಿದ್ದರು. ಅದರಂತೆಯೇ ಅವರ ಹೆಸರು ಅನೌನ್ಸ್ ಆಗಿದೆ. ಮಥುರಾದಿಂದ ಮಾತ್ರ ಸ್ಪರ್ಧಿಸುವ ತನ್ನ ನಿರ್ಧಾರವನ್ನು ವಿವರಿಸಿದ ಅವರು, ಭಗವಾನ್ ಕೃಷ್ಣ ಮತ್ತು ಆತನ ಭಕ್ತರ ಬಗ್ಗೆ ಅಪಾರ ಪ್ರೀತಿ ಹೊಂದಿದ್ದೇನೆ ಮತ್ತು ಅವರ ಸೇವೆಯನ್ನು ಮುಂದುವರಿಸಲು ಬಯಸುತ್ತೇನೆ ಎಂದು ಹೇಳಿದ್ದರು. ಹೇಮಾ ಮಾಲಿನಿ ಅವರು 2014 ಮತ್ತು 2019 ರಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಸತತ ಎರಡು ಬಾರಿ ಮಥುರಾ ಲೋಕಸಭಾ ಕ್ಷೇತ್ರವನ್ನು ಗೆದ್ದಿದ್ದಾರೆ. ಅದಕ್ಕೂ ಮುನ್ನ ಅವರು ರಾಜ್ಯಸಭಾ ಸದಸ್ಯೆಯಾಗಿದ್ದರು.

Breaking: ಮಿಷನ್‌ 400 ಗುರಿ, 195 ಕ್ಷೇತ್ರಗಳಿಗೆ ಬಿಜೆಪಿ ಮೊದಲ ಪಟ್ಟಿ ರಿಲೀಸ್‌!

ಆದರೆ ಇದೀಗ ನಟಿ ಕಂಗನಾ ರಣಾವತ್​ ಅವರ ಬಗ್ಗೆ ಚರ್ಚೆ ಶುರುವಾಗಿದೆ. ಏಕೆಂದರೆ 197 ಕ್ಷೇತ್ರಗಳ ಮೊದಲ ಪಟ್ಟಿಯಲ್ಲಿ ಕಂಗನಾ ಅವರ ಹೆಸರು ಇಲ್ಲ. ತೇಜಸ್ ಚಿತ್ರದ ಬಿಡುಗಡೆಯ ನಂತರ  ಗುಜರಾತ್‌ನ  ದ್ವಾರಕಾದ ಜಗತ್ ಮಂದಿರಕ್ಕೆ ತೆರಳಿದ್ದ ನಟಿ  ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವು ನೀಡಿದ್ದರು. ಮುಂದಿನ ದಿನಗಳಲ್ಲಿ ಶ್ರೀಕೃಷ್ಣನ ಆಶೀರ್ವಾದವಿದ್ದರೆ ನಾನೂ ಕೂಡ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದಿದ್ದರು. ಬಳಿಕ ನಟಿ  ಹಿಮಾಚಲ ಪ್ರದೇಶಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಭೇಟಿ ನೀಡಿದ್ದರು. ಈ ಸಭೆಯ ನಂತರ, ಆಕೆಯ ತಂದೆ ಅಮರ್‌ದೀಪ್ ರಣಾವತ್​ ಸ್ವತಃ ಇದನ್ನು ಖಚಿತಪಡಿಸಿದ್ದರು. 2024 ರ ಲೋಕಸಭೆ ಚುನಾವಣೆಯಲ್ಲಿ ಕಂಗನಾ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದರು.

ರಾಜಕೀಯಕ್ಕೆ ಹೇಳಿ ಮಾಡಿಸಿದಂತಿರುವ ಕಂಗನಾ, ಇದೀಗ ಇಂದಿರಾಗಾಂಧಿ ರೋಲ್‌ನಲ್ಲಿ ಮಿಂಚುತ್ತಿರುವ ನಡುವೆಯೇ, ಅವರಿಗೆ ಪ್ರಶ್ನೆಯೊಂದು ಎದರುರಾಗಿತ್ತು.  ಈ ಪ್ರಶ್ನೆಯನ್ನು  ತೆಲುಗು ಚಿತ್ರ ರಜಾಕರ್ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕೇಳಲಾಗಿತ್ತು.  ‘ನೀವು ದೇಶದ ಪ್ರಧಾನಿಯಾಗಲು ಇಷ್ಟಪಡುತ್ತೀರಾ?’ ಎಂಬ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ್ದರು. ಅದಕ್ಕೆ ನಟಿ ಜೋರಾಗಿ ನಗುತ್ತಲೇ,   ಇತ್ತೀಚೆಗಷ್ಟೇ  ಎಮರ್ಜೆನ್ಸಿ ಸಿನಿಮಾದಲ್ಲಿ ಇಂದಿರಾಗಾಂಧಿ ರೋಲ್‌ ಮಾಡಿದ್ದೇನೆ. ಇನ್ನೇನು ಅದು ಬಿಡುಗಡೆಯಾಗಲಿದೆ.  ಅದನ್ನು ನೋಡಿದ ನಂತರ ನಾನು ಪ್ರಧಾನಿಯಾಗುವುದು ಯಾರಿಗೂ ಇಷ್ಟವಾಗುವುದಿಲ್ಲ ಎಂದು ತಮಾಷೆಯಾಗಿ ಹೇಳುತ್ತಲೇ ಜೋರಾಗಿ ನಕ್ಕಿದ್ದರು. ಇದೀಗ ಮೊದಲ ಪಟ್ಟಿಯಲ್ಲಿ ಹೆಸರು ಇಲ್ಲದೇ ಇರುವುದರಿಂದ ಎರಡನೆಯ ಪಟ್ಟಿಯಲ್ಲಿ ಹೆಸರು ಇರಬಹುದಾ ಅಥವಾ ಈ ವರ್ಷ ನಟಿಗೆ ಅದೃಷ್ಟ ಕೈಕೊಡಲಿದೆಯಾ ಎನ್ನುವುದು ತಿಳಿಯಬೇಕಿದೆ. 

ಕಂಗನಾಗೆ ನಿಜವಾಗಿಯೂ ಪ್ರಧಾನಿಯಾಗೋ ಆಸೆ ಇದ್ಯಾ? ’ಎಮರ್ಜೆನ್ಸಿ’ ನಟಿಗೆ ಪ್ರಶ್ನೆ ಕೇಳಿದ್ರೆ ಹೀಗೆ ಹೇಳೋದಾ?


 
 

Follow Us:
Download App:
  • android
  • ios