* ಏರ್‌ಪೋರ್ಟಲ್ಲಿ ಕೃತಕ ಕಾಲು ಬಿಚ್ಚಿಸಿ ಕಲಾವಿದೆ ಸುಧಾ ಚಂದ್ರನ್‌ಗೆ ಅಪಮಾನ* ತಪಾಸಣೆ ನೆಪದಲ್ಲಿ ಸಿಐಎಸ್‌ಎಫ್‌ ಸಿಬ್ಬಂದಿಯಿಂದ ಈ ಕೆಲಸ* ಇಂಥ ಘಟನೆ ಸಂಭವಿಸಿದಂತೆ ತಡೆಯಿರಿ: ಮೋದಿಗೆ ನಟಿ ಮೊರೆ* ಇದರ ಬೆನ್ನಲ್ಲೇ ಸಿಐಎಸ್‌ಎಫ್‌ನಿಂದ ಕ್ಷಮೆಯಾಚನೆ

ಮುಂಬೈ(ಅ.23): ವಿಮಾನ ನಿಲ್ದಾಣವೊಂದರಲ್ಲಿ(Airport) ಖ್ಯಾತ ನಟಿ(Actress) ಹಾಗೂ ಭರತನಾಟ್ಯಂ ಕಲಾವಿದೆ(Bharatanatyam) ಸುಧಾ ಚಂದ್ರನ್‌(Sudha Chandran) ಅವರ ಕೃತಕ ಕಾಲುಗಳನ್ನು ಭದ್ರತಾ ಸಿಬ್ಬಂದಿ(CISF) ಬಿಚ್ಚಿಸಿ ಶೋಧ ನಡೆಸಿದ್ದಾರೆ. ಇದು ವಿವಾದಕ್ಕೀಡಾಗಿದೆ. ಈ ಬಗ್ಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗೆ ಸುಧಾ ದೂರು ನೀಡಿದ್ದು, ಇದರ ನಡುವೆಯೇ ಸಿಐಎಸ್‌ಎಫ್‌ ಕ್ಷಮೆಯಾಚಿಸಿದೆ.

Add Asianetnews Kannada as a Preferred SourcegooglePreferred

ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ನೋವು ತೋಡಿಕೊಂಡಿರುವ ಸುಧಾ ಚಂದ್ರನ್‌ ಅವರು, ‘ಮುಂದಿನ ದಿನಗಳಲ್ಲಿ ತಮ್ಮಂಥವರಿಗೆ ಇಂಥ ಘಟನೆಗಳು ಎದುರಾಗದಂತೆ ತಡೆಯಲು ಕೃತಕ ಅಂಗಾಂಗಳನ್ನು ಹೊಂದಿದ ತಮ್ಮಂಥವರಿಗೆ ವಿಶೇಷ ಕಾರ್ಡ್‌ಗಳನ್ನು ನೀಡಬೇಕು’ ಎಂದು ವಿನಂತಿಸಿಕೊಂಡಿದ್ದಾರೆ.

ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ(Instagram) ವಿಡಿಯೋ ಹಂಚಿಕೊಂಡಿರುವ ಸುಧಾ, ‘ನಾನು ಸುಧಾ ಚಂದ್ರನ್‌. ನಟಿ ಮತ್ತು ಭರತನಾಟ್ಯಂ ನೃತ್ಯಗಾರ್ತಿ. ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಇದು ನನ್ನ ವೈಯಕ್ತಿಕ ಮನವಿ. ಪ್ರತೀ ಬಾರಿ ವಿಮಾನ ಹತ್ತಲು ಹೋದಾಗ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ, ತಮ್ಮ ಕೃತಕ ಅಂಗಾಂಗಗಳನ್ನು ಬಿಚ್ಚಿಸಿ ಪರಿಶೀಲಿಸುತ್ತಾರೆ. ಇದರಿಂದ ಹಲವು ಬಾರಿ ಬೇಸರ ಮತ್ತು ದುಃಖವಾಗುತ್ತದೆ. ಹೀಗಾಗಿ ಇಟಿಡಿ ಪರೀಕ್ಷೆ ಮಾಡುವಂತೆ ಮಾತ್ರ ಸೂಚಿಸಬೇಕು ಎಂಬುದು ನನ್ನ ಕಳಕಳಿ. ಇಲ್ಲದಿದ್ದರೆ ಹಿರಿಯ ನಾಗರಿಕರಿಗೆ ನೀಡುವ ರೀತಿ ನಮಗೂ ಪಾಸ್‌ ರೀತಿಯ ಕಾರ್ಡ್‌ ನೀಡಬೇಕು’ ಎಂದು ಕೇಳಿಕೊಂಡಿದ್ದಾರೆ.

ಸಿಐಎಸ್‌ಎಫ್‌ ಕ್ಷಮೆ:

ಈ ಘಟನೆ ಕುರಿತಾಗಿ ಸುಧಾ ಚಂದ್ರನ್‌ ಅವರಿಗೆ ಆಗಿರುವ ತೊಂದರೆ ಬಗ್ಗೆ ಸಿಐಎಸ್‌ಎಫ್‌ ಕ್ಷಮೆ ಕೋರಿದೆ. ‘ಕೆಲವೇ ಸಂದರ್ಭಗಳಲ್ಲಿ ಮಾತ್ರ ಕೃತಕ ಅಂಗಾಂಗ ಬಿಚ್ಚಿಸಿ ಪರಿಶೀಲಿಸಲಾಗುತ್ತದೆ. ಭದ್ರತೆಗೆ ನಿಯೋಜಿಸಲಾಗಿದ್ದ ಯಾವ ಮಹಿಳಾ ಸಿಬ್ಬಂದಿ ಸುಧಾ ಅವರ ಅಂಗಾಂಗ ಬಿಚ್ಚಿಸಿ ತೋರಿಸಲು ಹೇಳಿದರು ಎಂಬ ಬಗ್ಗೆ ಪರಿಶೀಲಿಸಲಾಗುತ್ತದೆ’ ಎಂದು ಸಿಐಎಸ್‌ಎಫ್‌ ಹೇಳಿದೆ.

View post on Instagram

1981ರಲ್ಲಿ 16 ವರ್ಷದವರಿದ್ದಾಗಿ ನಡೆದ ಅಪಘಾತವೊಂದರಲ್ಲಿ ಸುಧಾ ಅವರು ತಮ್ಮ ಬಲಗಾಲು ಕಳೆದುಕೊಂಡಿದ್ದು, ಅವರಿಗೆ ಕೃತಕ ಕಾಲು ಅಳವಡಿಸಲಾಗಿದೆ. ಆದಾಗ್ಯೂ, ಅವರು ನೃತ್ಯ ಮಾಡುತ್ತಾರೆ.