ನಟ ಸುಶಾಂತ್ ಸಿಂಗ್ ಸಾವಿಗೆ ದಾವೂದ್‌ ಗ್ಯಾಂಗ್‌ ಕಾರಣ ಎಂದು ಮಾಜಿ RAW ಅಧಿಕಾರಿ ಎಸ್‌ ಕೆ ಸೂದ್‌ ಆರೋಪಿಸಿದ್ದಾರೆ. ಸುಶಾಂತ್‌ರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂಬ ಬಗ್ಗೆ ತನಿಖೆ ನಡೆಯುತ್ತಿರುವಾಗಲೇ, ಇವರು ಮಾಡಿದ ಆರೋಪ ಮಹತ್ವ ಪಡೆದುಕೊಂಡಿದೆ.  

ಜೂನ್ 14ರಂದ ಬಾಂದ್ರಾ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣ ಬಾಲಿವುಡ್‌ನಲ್ಲಿ ಅನೇಕ ರೀತಿಯ ಚರ್ಚೆಗಳನ್ನು ಹುಟ್ಟು ಹಾಕಿದೆ. ಸುಶಾಂತ್ ಸಾವಿಗೆ ಕಾರಣವೇನೆಂದು ಮಾಹಿತಿ ಕಲೆ ಹಾಕುವ ಮುನ್ನ ಅನೇಕರ ಹೆಸರು ಕೇಳಿ ಬಂದಿತ್ತು. ಅವರು ಸಾವಿಗೆ ಕಾರಣವಾಗಿರಬಹುದಾದ ವಿವಿಧ ಆಯಾಮಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು, ಅದರಲ್ಲಿಯೂ ನೆಪೊಟಿಸಂ ಅಲೆ ಎಬ್ಬಿಸಿದ ಕಾರಣ ನೆಟ್ಟಿಗರು ಸುಶಾಂತ್ ಪರ ನಿಂತರು. ಈಗಾಗಲೇ ಸಾಕಷ್ಟು ತನಿಖೆ ನಡೆಸಿರುವ ಪೊಲೀಸರು, ಯಾವುದೇ ಮಾಹಿತಿಯನ್ನೂ ಬಹಿರಂಗ ಪಡಿಸಿರಲಿಲ್ಲ. ಈ ಬಗ್ಗೆ ಚಿತ್ರ ನಿರ್ಮಾಪಕರು, ನಟರು, ನಿರ್ದೇಶಕರು ಹಾಗೂ ಸುಶಾಂತ್ ಜೊತೆ ನಟಿಸಿದ ಸಹ ನಟರ ವಿಚಾರಣೆ ನಡೆಸುತ್ತಲೇ ಇದ್ದಾರೆ ಪೊಲೀಸರು. ಈ ಮಧ್ಯೆಯೇ ಮಾಜಿ ರಾ ಅಧಿಕಾರಿಯೊಬ್ಬರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Add Asianetnews Kannada as a Preferred SourcegooglePreferred

ಅಧಿಕಾರಿ ಮಾತು:
ಮಾಜಿ ರಾ ಆಧಿಕಾರಿ ಎಸ್‌ ಕೆ ಸೂದ್‌ ಅವರ ವಿಡಿಯೋ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಕಾರಣ ಸೂದ್‌ ಬಿ-ಟೌನ್‌‌ನ ಮತ್ತೊಂದು ಕರಾಳ ಮುಖವನ್ನು ಬಯಲು ಮಾಡಿದ್ದಾರೆ. 'ಸುಶಾಂತ್ ಸಾವಿಗೆ ದಾವೂದ್ ಇಬ್ರಾಹಿಂ ಗ್ಯಾಂಗ್‌ ಕಾರಣ, ಬೇರೆ ಯಾರೂ ಅಲ್ಲ. ದಾವೂದ್‌ ಗ್ಯಾಂಗ್‌‌ನವರು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದರು, ಈ ಕಾರಣಕ್ಕೆ ಸುಶಾಂತ್ 50 ಸಿಮ್‌ಗಳನ್ನು ಬದಲಾಯಿಸಿದ್ದರು. ಈ ಗ್ಯಾಂಗ್‌ನ ನಿರಂತರ ಕಾಟದಿಂದ ಸುಶಾಂತ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ದಾವೂದ್‌ ಗ್ಯಾಂಗ್‌ಗೆ ಸುಶಾಂತ್‌ ಬಾಲಿವುಡ್‌ ಕೆಲವು ಆಪ್ತರು ಕೂಡ ಸಾಥ್ ನೀಡಿದ್ದಾರೆ,' ಎಂದು ರಾ ಆಧಿಕಾರಿ ಆರೋಪಿಸಿದ್ದಾರೆ.

ಸುಶಾಂತ್ ಸಿಂಗ್ ಸಾವಿನ ತನಿಖೆ; ಅಖಾಡಕ್ಕೆ ಇಳಿದ ಸುಬ್ರಮಣಿಯನ್ ಸ್ವಾಮಿ

ನಟ ಸುಶಾಂತ್ ಸಿಂಗ್ ಮತ್ತು ದಾವೂದ್‌ ಸಂಬಂಧ ಇರುವ ವಿಚಾರವನ್ನು ನೆಟ್ಟಿಗರು ಕೇಳಿ ಅಚ್ಚರಿ ಪಟ್ಟಿದ್ದಾರೆ. ಅಷ್ಟೇ ಅಲ್ಲ ಯಾವ ರೀತಿಯ ಸಂಬಂಧವಿದು, ಎಂದು ತಿಳಿದುಕೊಳ್ಳಲು ಕುತೂಹಲ ವ್ಯಕ್ತ ಪಡಿಸಿದ್ದಾರೆ.

ಗ್ಯಾಂಗ್‌ ಪ್ಲಾನ್:
ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಅಲ್ಲ, ಇದು ಆತ್ಮಹತ್ಯೆ ಅಲ್ಲ, ಇದು ಯೋಜಿತ ಕೊಲೆ. ಸುಶಾಂತ್ ಆತ್ಮಹತ್ಯೆ ಒಂದು ದಿನ ಮುನ್ನ ಇಡೀ ಅಪಾರ್ಟ್‌ಮೆಂಟ್‌ ಸಿಸಿಟಿವಿ ಕ್ಯಾಮೆರಾಗಳು ಆಫ್‌ ಆಗಿದ್ದವು. ಕೆಲವರು ಸುಶಾಂತ್ ಮನೆಗೆ ಬಂದು ತೊಂದರೆ ನೀಡುತ್ತಿದ್ದರು, ಈ ಕಾರಣ ಸುಶಾಂತ್ ಅನೇಕ ಬಾರಿ ತನ್ನ ಕಾರಿನಲ್ಲೇ ಮಲಗಿಕೊಳ್ಳುತ್ತಿದ್ದರು. ದಾವೂದ್‌ ತಂಡದಿಂದ ಸುಶಾಂತ್‌ಗೆ ತೊಂದರೆ ಆಗುತ್ತಿರುವ ವಿಚಾರ ಆತನ ಆಪ್ತರು, ಅದರಲ್ಲಿಯೂ ಸುಶಾಂತ್ ಮನೆ ಕೆಲಸದವರು ಮತ್ತು ರಿಯಾ ಚಕ್ರವರ್ತಿಗೆ ತಿಳಿದಿತ್ತು. ಆದರೆ, ಸಹಾಯ ಮಾಡಲು ಯಾರೂ ಒಪ್ಪಿರಲಿಲ್ಲ. ಇದರಲ್ಲಿ ದಾವೂದ್‌ ಜೊತೆ ಕೈ ಜೋಡಿರುವ ಗಣ್ಯರು ಪ್ರಕರಣ ತಿರುಚಿ ಹಾಕಲು, ಬೇರೆ ಬೇರೆ ವ್ಯಕ್ತಿಗಳ ಮೇಲೆ ಆರೋಪ ಮಾಡುತಿದ್ದಾರೆ. ಮುಂಬೈ ಪೊಲೀಸರು ವಿಚಾರಣೆ ಮಾಡುವ ರೀತಿ ನಟಿಸುತ್ತಿದ್ದಾರೆ. ಆದರೆ, ಸಾವಿಗೆ ನೈಜ ಕಾರಣರಾದ ಕೆಲವು ವ್ಯಕ್ತಿಗಳನ್ನು ಈ ವಿಚಾರಣೆ ಎಂಬ ನಾಟಕ ರಕ್ಷಿಸುತ್ತದೆ, ' ಎಂದೂ ಸೂದ್ ಆರೋಪಿಸಿದ್ದಾರೆ.

ಸುಶಾಂತ್ ಆತ್ಮಹತ್ಯೆ: ಕರಣ್, ಸಲ್ಮಾನ್ ಖಾನ್ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾ 

ಎಂ.ಎಸ್.ಧೋನ್, ದಿ ಅನ್‌ಟೋಲ್ಡ್ ಸ್ಟೋರಿ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಸುಶಾಂತ್, ಮೊದಲು ಕಿರುತೆರೆಯ ಪವಿತ್ರಾ ರಿಶ್ತಾ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಲಾ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಆಗಲೇ ಅಪಾರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದರು. ಇದೀಗ ಅವರ ಸಾವಿನ ನಂತರ ದಿಲ್ ಬೇಚಾರ ಚಿತ್ರ ತೆರೆ ಕಾಣುತ್ತಿದ್ದು, ಟೀಸರ್ ಬಿಡುಗಡೆಯಾಗುತ್ತಲೇ ಸಿಕ್ಕಾಪಟ್ಟೆ ವ್ಯೂಸ್ ಪಡೆದುಕೊಂಡಿದೆ. ಸಾವಿನ ದವಡೆಯಲ್ಲಿರುವ ಕ್ಯಾನ್ಸರ್ ರೋಗಿ ಗರ್ಲ್ ಫ್ರೆಂಡ್‌ನ ಮನೋಸ್ಥೈರ್ಯ ಹೆಚ್ಚಿಸುವ, ಧನಾತ್ಮಕ ಮನಸ್ಥಿತಿ ಸೃಷ್ಟಿಸುವಂತಿರುವ ಈ ಸಿನಿಮಾ ನೋಡಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.