ಡ್ರಗ್ ಕೇಸ್: ಸುಶಾಂತ್ ಗೆಳೆಯ ಸಿದ್ಧಾರ್ಥ್ ಫಿಥಾನಿಗೆ 10 ದಿನ ಪೆರೋಲ್ ಮೇಲೆ ಬಿಡುಗಡೆ
ಡ್ರಗ್ ಪ್ರಕರಣದಲ್ಲಿ ಬಂಧಿರಾಗಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ಗೆಳೆಯ ಸಿದ್ಧಾರ್ಥ ಪಿತಾನಿಗೆ ಮುಂಬಯಿ ಕೋರ್ಟ್ 10 ದಿನಗಳ ಕಾಲ ಪೆರೋಲ್ ನೀಡಿ, ಬಿಡುಗಡೆ ಮಾಡಿದೆ. ಮದುವೆಗಾಗಿ ಕೋರ್ಟ್ ಪೆರೋಲ್ ನೀಡಿದ್ದು, ಜು.2ಕ್ಕೆ ಶರಣಾಗುವಂತೆ ಸೂಚಿಸಿದೆ.
ಜೂನ್ 14,2020ರಂದು ಬಾಲಿವುಡ್ ನಟ ಸುಶಾಂತ್ ಸಿಂಗ್ ತಮ್ಮ ಬಾಂದ್ರಾ ಮನೆಯಲ್ಲಿ ನೇಣು ಬಿಗಿದುಕೊಂಡು, ಆತ್ಮಹತ್ಯೆಗೆ ಶರಣಾಗಿದ್ದರು. ಈ ವೇಳೆ ಸುಶಾಂತ್ ರೂಮಿನ ಬೀಗ ಒಡೆದು ಮೃತದೇಹವನ್ನು ಹಾಸಿಗೆ ಮೆಲೆ ಮಲಗಿಸಿದ್ದು, ಅದೇ ಮನೆಯಲ್ಲಿ ವಾಸವಿದ್ದ ಗೆಳೆಯ ಸಿದ್ಧಾರ್ಥ್ ಪಿಥಾನಿ. ನಂತರ ಸುಶಾಂತ್ ಸಾವಿನ ಸುತ್ತ ಹತ್ತು ಹಲವು ಅನುಮಾಗಳು ಸೇರಿ ಕೊಂಡವು. ಅಲ್ಲದೇ ಡ್ರಗ್ ನಂಟಿದೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಸುಶಾಂತ್ ಫ್ಲ್ಯಾಟ್ಮೇಟ್ ಸಿದ್ಧಾರ್ಥ್ ಅವರನ್ನು ಮಾದಕವಸ್ತು ನಿಯಂತ್ರಣ ಪಡೆ (NCB) ಹೈದರಾಬಾದ್ನಲ್ಲಿ ಕಳೆದ ಮೇ 26ರಂದು ಬಂಧಿಸಿತ್ತು.
ಇದೀಗ ಮದುವೆ ನೆಪವೊಡ್ಡಿ ಜಾಮೀನು ಅರ್ಜಿ ಸಲ್ಲಿಸಿದ್ದ ಸಿದ್ಧಾರ್ಥ್ಗ್ಗೆ ಮುಂಬೈ ಕೋರ್ಟ್ 10 ದಿನಗಳ ಪೆರೋಲ್ ಮೇಲೆ ಬಿಡುಗಡೆ ಮಾಡಲು ಅನುಮತಿ ನೀಡಿದೆ. ನಂತರ ಶರಣಾಗುವಂತೆ ಸೂಚಿಸಿದೆ. ಜೂನ್ 26ಕ್ಕೆ ಸಿದ್ಧಾರ್ಥ್ ಮದುವೆ ನಿಶ್ಚಯವಾಗಿದ್ದು, ಜುಲೈ 2ಕ್ಕೆ ಮತ್ತೆ ಶರಣಾಗುವಂತೆ ಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಸುಶಾಂತ್ ಆತ್ಮಹತ್ಯೆ ನಂತರ ಬಹು ದಿನಗಳ ಕಾಲ ತೆಲೆ ಮರೆಸಿಕೊಂಡಿದ್ದ ಸಿದ್ಧಾರ್ಥ್ ವಿರುದ್ಧ ಹಲವು ಆರೋಪಗಳಿವೆ. ಕಳೆದ ವರ್ಷ ಜೂನ್ 14ರಂದು ಸುಶಾಂತ್ ತಮ್ಮ ಫ್ಲ್ಯಾಟ್ ಬಾಗಿಲು ತೆಗೆಯದೇ ಹೋದಾಗ, ಮನೆಯ ಕೆಲಸದವಳು ಸಿದ್ಙಾರ್ಥ್ಗೆ ಫೋನ್ ಮಾಡಿದ್ದರು. ಈ ಸಂಬಂಧ ಪೊಲೀಸರ ಗಮನಕ್ಕೂ ತಾರದೇ ಸಿದ್ಧಾರ್ತ್ ಬಾಗಿಲು ಒಡೆದು, ಸುಶಾಂತ್ ಮೃತ ದೇಹವನ್ನು ಕೆಳಗಿಳಿಸಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಸುಶಾಂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ, ಶೌವಿಕ್ ಚಕ್ರವರ್ತಿ ಮತ್ತು ಇತರೆ 33 ಮಂದಿ ವಿರುದ್ಧ NCB 12 ಸಾವಿರ ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಪ್ರಕರಣಕ್ಕೆ ಸಂಬಂಧಸಿದಂತೆ ಸುಶಾಂತ್ ಮನೆ ಕೆಲಸದವರಾದ ನೀರಜ್ ಹಾಗೂ ಕೇಶವ್ ಅವರನ್ನೂ ವಿಚಾರಣೆಗೆ ಒಳಪಡಿಸಿತ್ತು.
ಸುಶಾಂತ್ ಶರೀರ ಮೊದಲು ನೋಡಿದ್ದವಗೆ ಡ್ರಗ್ಸ್ ಕಂಟಕ, NCB ವಿಚಾರಣೆ ಮುಗಿಯಿತು!
ಸುಶಾಂತ್ ಸಾವಿನ ತನಿಖೆಯನ್ನು ಮೊದಲು ಮುಂಬಯಿ ಪೊಲೀಸರು ನಡೆಸುತ್ತಿದ್ದರು. ಆದರೆ, ರಿಯಾ ಚಕ್ರವರ್ತಿ ಮತ್ತು ಇತರರ ವಿರುದ್ಧ ಸುಶಾಂತ್ ತಂದೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸಿಬಿಐ ತನಿಖೆಗೆ ಕೇಂದ್ರ ತನಿಖಾ ಸಂಸ್ಥೆ ಆದೇಶಿಸಿತ್ತು. ಈ ಬೆನ್ನಲ್ಲೇ ತನಿಖೆ ತೀವ್ರಗೊಂಡು ಡ್ರಗ್ಸ್ ಘಾಟಿನ ಸಂಬಂಧವಾಗಿಯೂ ವಿಚಾರಣೆ ಮುಂದುವರಿದಿತ್ತು. ಬಾಲಿವುಡ್ನ ಅನೇಕ ನಟ, ನಟಿಯರಿಗೂ ಡ್ರಗ್ಸ್ ಕೇಸ್ ಅಂಟಿಕೊಳ್ಳುವ ಸಾಧ್ಯತೆ ಇರುವಾಗಲೇ ತನಿಖೆಯ ಪ್ರಗತಿ ಕುಂಠಿತವಾಯಿತು. ಕೆಲವ ದಿನಗಳ ಕಾಲ ರಿಯಾ ಚಕ್ರವರ್ತಿಯೂ ಕಂಬಿ ಎಣಿಸಿದ್ದು, ನಂತರ ಜಾಮೀನು ಮೇಲೆ ಬಿಡುಗಡೆಯಾಗಿದ್ದರು.