ಕೆಲವು ಚಿತ್ರಗಳಲ್ಲಿ ನಟಿಸಿರುವ ನಟಿ ಭಾನು ಶ್ರೀ ಮೆಹ್ರಾ ಅವರು ನಟ ಅಲ್ಲು ಅರ್ಜುನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಏನದು?
ಭಾನುಶ್ರೀ ಮೆಹ್ರಾ ಹೆಸರು ಕೇಳಿದ ಕನ್ನಡಿಗರು ಬಹಳ ಕಡಿಮೆ ಇರಬಹುದು. ಆದರೆ ತೆಲುಗು ಚಿತ್ರರಂಗದವರಿಗೆ ಈಕೆ ಸಕತ್ ಫೇಮಸ್. ಬಹುಭಾಷಾ ತಾರೆಯಾಗಿರುವ ಭಾನು ಶ್ರೀ ಕನ್ನಡದಲ್ಲಿ ಕೋಮಲಕುಮಾರ್ ಅಭಿನಯದ `ಡೀಲ್ ರಾಜ' ಚಿತ್ರದಲ್ಲಿ ನಟಿಸಿ ಸ್ಯಾಂಡಲ್ವುಡ್ನಲ್ಲಿ ಕೆಲವು ಅಭಿಮಾನಿಗಳನ್ನು ಪಡೆದಿದ್ದಾರೆ. ಮೂಲತಃ ಪಂಜಾಬಿ ನಟಿ ಮತ್ತು ಮಾಡೆಲ್ ಆಗಿರುವ ಇವರು ಖ್ಯಾತಿ ಪಡೆದದ್ದು ನಟ ಅಲ್ಲು ಅರ್ಜುನ (Allu Arjun) ಅಭಿನಯದ `ವರಡು' ಚಿತ್ರದ ಮೂಲಕ. 2010ರಲ್ಲಿ ತೆರೆಕಂಡಿದ್ದ 'ವರುಡು' ಸಿನಿಮಾಗೆ ಈಕೆ ಅಲ್ಲು ಅರ್ಜುನ್ ಎದುರು ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದ ಮೂಲಕ ಭಾನು ಶ್ರೀ ಫೇಮಸ್ ಆದರೂ ಸಿನಿಮಾ ಯಾಕೋ ಹಿಟ್ ಆಗಲಿಲ್ಲ. ಬಾಕ್ಸ್ ಆಫೀಸ್ನಲ್ಲಿ ಹಿನ್ನಡೆ ಸಾಧಿಸಿತು. ಅದಾದ ಬಳಿಕ ಕೆಲವು ಚಿಕ್ಕ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡರು. ಭಾನು ಶ್ರೀ. ನಂತರ ತೆಲುಗಿನಲ್ಲೇ 'ಡಿಂಗ್ ಡಾಂಗ್ ಬೆಲ್','ಅಲಾ ಎಲಾ' ರಾಮ್ ಚರಣ್ ಸಿನಿಮಾ 'ಗೋವಿಂದುಡು ಅಂದರಿವಾಡೆಲೆ', 'ರನ್' ಮತ್ತು 'ಮಿಸ್ ಇಂಡಿಯಾ'ದಲ್ಲಿ ಕೀರ್ತಿ ಸುರೇಶ್ ಜೊತೆ ಚಿಕ್ಕ ಪಾತ್ರದಲ್ಲಿ ನಟಿಸಿದರು. 2020ರಲ್ಲಿ ತೆರೆಕಂಡಿದ್ದ ಎರಡು ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ನಂತರ ಮದುವೆಯಾಗಿ ತೆರೆಮರೆಗೆ ಸರಿದು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರೋ ಈ ನಟಿ ಇದೀಗ ದಿಢೀರ್ ಸದ್ದು ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಸೂಪರ್ಸ್ಟಾರ್ ಅಲ್ಲು ಅರ್ಜುನ್!
ಐಕಾನ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಅಲ್ಲು ಅರ್ಜುನ್ ಅವರು ಪುಷ್ಪ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಜ್ಜೆ ಹಾಕಿದರು. ಅವರ ಸ್ಟೈಲ್ಗೆ ಜನರೆಲ್ಲ ಫಿದಾ ಆಗಿದ್ದಾರೆ. ಸದ್ಯ ಪುಷ್ಪಾ ಚಿತ್ರದ ಸೀಕ್ವೆಲ್ ಚಿತ್ರೀಕರಣದಲ್ಲಿ ಇವರು ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್ ತಮ್ಮ ವೃತ್ತಿ ಜೀವನದಲ್ಲಿ ಎಷ್ಟೋ ನಾಯಕಿಯರ ಜೊತೆ ಕೆಲಸ ಮಾಡಿದ್ದಾರೆ. ಕೆಲವರಿಗೆ ಸ್ಟಾರ್ ಸ್ಟೇಟಸ್ ಸಿಕ್ಕರೆ... ಇನ್ನು ಕೆಲವರು ಇಂಡಸ್ಟ್ರಿಗೆ ಗುಡ್ ಬೈ ಹೇಳಿದ್ದಾರೆ. ಕೆಲವರು ಮದುವೆಯಾಗಿ ಸೆಟಲ್ ಆಗಿದ್ದಾರೆ. ಇಂಥ ನಾಯಕಿಯರ ಪೈಕಿ ಕೆಲವರ ಬಗ್ಗೆ ಮಾಹಿತಿಯೂ ಸಿಗುವುದಿಲ್ಲ, ಇಂಥ ನಾಪತ್ತೆಯಾದವರಲ್ಲಿ ಒಬ್ಬರು ಈ ಭಾನು ಶ್ರೀ ಮೆಹ್ರಾ (Bhanushree Mehra). ಇವರು ಈಗ ಇದ್ದಕ್ಕಿದ್ದಂತೆಯೇ ಸುದ್ದಿಯಾಗಿರುವುದಕ್ಕೆ ಕಾರಣ, ತಾವು ನಾಯಕಿಯಾಗಿ ನಟಿಸಿದ್ದ ನಟ ಅಲ್ಲು ಅರ್ಜುನ್ ಅವರು, ತಮ್ಮನ್ನು ಅವರ ಟ್ವಿಟರ್ ಖಾತೆಯಿಂದ ಬ್ಲಾಕ್ ಮಾಡಿದ್ದಾರೆಂದು ಟ್ವೀಟ್ ಮಾಡಿದ್ದಾರೆ ಎಂದು ಸುದ್ದಿ ಹರಡಿಸಿದ್ದಾರೆ. ಇದು ಸದ್ಯ ಸಿನಿರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
Divya Shridhar: ಲವ್ ಜಿಹಾದ್ಗೆ ಸಿಲುಕಿದ ಕನ್ನಡದ ಖ್ಯಾತ ನಟಿ, ತುಂಬು ಗರ್ಭಿಣಿಯಾದರೂ ತಪ್ಪಿಲ್ಲ ಕಷ್ಟ
ಈ ಕುರಿತು ಟ್ವೀಟ್ ಮಾಡಿರುವ ಭಾನು ಶ್ರೀ, ' ಯಾವತ್ತಾದರೂ ನೀವು ಹಳಿಯಲ್ಲಿ ಸಿಕ್ಕಿಕೊಂಡಿದ್ದೀರಿ ಎಂದು ಭಾಸವಾಗಿದೆಯೆ? ಆದರೆ ನನಗೆ ಅಂಥ ಅನುಭವ ಆಗಿದೆ. ನಾನು ವರುಡು ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರೊಂದಿಗೆ ಕೆಲಸ ಮಾಡಿದ್ದರೂ, ನನಗೆ ಕೆಲಸ ಸಿಗುತ್ತಿಲ್ಲ ಎಂದು ನೆನಪು ಮಾಡಿಕೊಂಡಿದ್ದೇನೆ. ಆದರೆ, ನನ್ನ ಕಷ್ಟಗಳಿಂದಲೇ ಖುಷಿಯನ್ನು ಕಂಡುಕೊಳ್ಳಲು ಕಲಿತಿದ್ದೇನೆ. ಅದರಲ್ಲೂ ಅಲ್ಲು ಅರ್ಜುನ್ ಟ್ವಿಟರ್ನಲ್ಲಿ (Twitter) ನನ್ನನ್ನು ಬ್ಲಾಕ್ ಮಾಡಿದ್ದ ಮೇಲೆ ಕಲಿತುಕೊಂಡಿದ್ದೇನೆ' ಎಂದು ಟ್ವೀಟ್ ಮಾಡಿ ಮತ್ತೆ ಹೆಸರು ಮುನ್ನೆಲೆಗೆ ಬರುವಂತೆ ಮಾಡಿದ್ದಾರೆ.
ಆದರೆ ಅಸಲಿಗೆ ಆಗಿದ್ದೇನು ಎಂದರೆ, ಅದರ ಹಿಂದೆ ದೊಡ್ಡ ಕಥೆಯೇ ಇದೆ. ಮೊದಲೇ ಹೇಳಿದ ಹಾಗೆ ಭಾನು ಶ್ರೀ ಮೆಹ್ರಾ ಅವರಿಗೆ ಈಗ ಅವಕಾಶಗಳೇ ಇಲ್ಲ. ಚಿಕ್ಕಪುಟ್ಟ ಪಾತ್ರಗಳಲ್ಲಿ ನಟಿಸುತ್ತಿರೋ ನಟಿಯ ಕೈಯಲ್ಲಿ ದೊಡ್ಡ ಸಿನಿಮಾಗಳಿಲ್ಲ. ಹೀಗಾಗಿ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಇದರಲ್ಲಿ ಕೆಲವೊಂದು ವಿಷಯಗಳನ್ನು ಶೇರ್ ಮಾಡಿಕೊಳ್ಳುತ್ತಿರೋ ಅವರು, ಪ್ರತಿಬಾರಿ ವಿಡಿಯೋ ಮಾಡಿದಾಗಲೂ ಅದನ್ನು ಅಲ್ಲು ಅರ್ಜುನ್ಗೂ ಟ್ಯಾಗ್ ಮಾಡುತ್ತಿದ್ದರು ಎನ್ನಲಾಗಿದೆ. ಇದಕ್ಕಾಗಿಯೇ ಅಲ್ಲು ಅರ್ಜುನ್ ಅವರು ಈಕೆಯನ್ನು ಬ್ಲಾಕ್ (Block) ಮಾಡಿರಬಹುದು ಎಂದು ಅಲ್ಲು ಫ್ಯಾನ್ಸ್ ಹೇಳುತ್ತಿದ್ದರೂ, ನಟ ಈವರೆಗೆ ಯಾವುದೇ ಮಾತನಾಡಲಿಲ್ಲ.
ದರೋಡೆಕೋರ ಲಾರೆನ್ಸ್ ಬಿಷ್ಣೋಯಿಗೂ ಸಲ್ಮಾನ್ ಖಾನ್ಗೂ ಏನ್ ಸಂಬಂಧ? ಯಾರೀತ?
ಅದೇನೆ ಇದ್ದರೂ ಈಗ ಅಲ್ಲು ಅರ್ಜುನ್ ವಿರುದ್ಧ ಮಾತನಾಡಿರುವ ನಟಿ ಟ್ರೋಲ್ಗೆ ಒಳಗಾಗುತ್ತಿದ್ದಾರೆ. ಕೆಲವರು ಚೆಕ್ ಮಾಡಿದಾಗ ಅಲ್ಲು ಅರ್ಜುನ್ ಬ್ಲಾಕ್ ಮಾಡದಿದ್ದುದು ಕಂಡುಬಂದಿದೆ. ಅದನ್ನು ಕೆಲವು ನೆಟ್ಟಿಗರು ಪ್ರಶ್ನಿಸಿದಾಗ ನಟಿ, ಎರಡು ಗಂಟೆ ಬ್ಲಾಕ್ ಮಾಡಿದ್ದರು. ನಾನು ಈ ಟ್ವೀಟ್ (Tweet) ಮಾಡುತ್ತಲೇ ಅನ್ಬ್ಲಾಕ್ ಮಾಡಿದ್ದಾರೆ ಎಂದಿದ್ದಾರೆ. ಇದು ಸತ್ಯವೋ, ಸುಳ್ಳೋ ಗೊತ್ತಿಲ್ಲ. ಒಟ್ಟಿನಲ್ಲಿ ನಟಿಯನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇದರ ನಡುವೆಯೇ ಅನ್ಬ್ಲಾಕ್ ಮಾಡಿರುವುದು ಸಿಹಿ ಸುದ್ದಿ ಎಂದು ನಟಿ ಶೇರ್ ಮಾಡಿಕೊಂಡಿದ್ದಾರೆ. 'ಸಿಹಿ ಸುದ್ದಿ, ಅಲ್ಲು ಅರ್ಜುನ್ ನನ್ನನ್ನು ಅನ್ಬ್ಲಾಕ್ ಮಾಡಿದ್ದಾರೆ. ನನ್ನ ವೃತ್ತಿ ಜೀವನದಲ್ಲಿ ಹಿನ್ನೆಡೆಯಾಗಿದ್ದಕ್ಕೆ ನಾನು ಎಂದಿಗೂ ಅವರನ್ನು ದೂಷಿಸಿಲ್ಲ. ನನ್ನ ಕಷ್ಟಗಳಲ್ಲೇ ಖುಷಿಯನ್ನು ಕಂಡುಕೊಳ್ಳುತ್ತಿದ್ದೇನೆ. ನನ್ನನ್ನು ಬೆಂಬಲಿಸಿದ್ದಕ್ಕಾಗಿ ಧ್ಯನವಾದಗಳು' ಎಂದಿದ್ದಾರೆ. ಒಟ್ಟಿನಲ್ಲಿ ಅಟೆನ್ಷನ್ ಸೀಕಿಂಗ್ ನಟಿ ಎಂದು ಅಲ್ಲು ಫ್ಯಾನ್ಸ್ ನಟಿಯ ವಿರುದ್ಧ ಕಮೆಂಟ್ ಹಾಕುತ್ತಿದ್ದರೆ, ಬ್ಲಾಕ್ ಮಾಡಿರುವ ಕುರಿತು ಸ್ಕ್ರೀನ್ಷಾಟ್ ಕೂಡ ಭಾನು ಶ್ರೀ ಹಾಕಿರುವ ಕಾರಣ, ಅಲ್ಲು ಅರ್ಜುನ್ ಅವರು ಬ್ಲಾಕ್ ಮಾಡಿದ್ದು ನಿಜ ಎಂದು ಕೆಲವರು ಈಕೆಯ ಪರ ನಿಂತಿದ್ದಾರೆ.
