* ಸಾಕ್ಷಿಯ ಆಪ್ತ ಪ್ರಭಾಕರ್ ಸೈಲ್ ಗಂಭೀರ ಆರೋಪ* ಶಾರುಖ್‌ ಪುತ್ರನ ಕೇಸ್‌ ಮುಚ್ಚಲು 25 ಕೋಟಿ ಡೀಲ್‌?* ವಾಂಖೇಡೆಯಿಂದ ಭಾರಿ ಹಣಕ್ಕೆ ಬೇಡಿಕೆ* ಸಾಕ್ಷಿಯ ಆಪ್ತನಿಂದ ಸ್ಫೋಟಕ ಆರೋಪ

ಮುಂಬೈ(ಅ.25): ನಟ ಶಾರುಖ್‌ ಖಾನ್‌(Shah Rukh Khan) ಪುತ್ರ ಆರ್ಯನ್‌ ಖಾನ್‌(Aryan Khan) ಡ್ರಗ್ಸ್‌ ಪ್ರಕರಣಕ್ಕೆ(Drugs Case) ಭಾನುವಾರ ಮಹತ್ವದ ತಿರುವು ಸಿಕ್ಕಿದೆ. ಶಾರುಖ್‌ ಪುತ್ರನನ್ನು ಬಂಧಿಸಿರುವ ಮಾದಕ ವಸ್ತು ನಿಗ್ರಹ ದಳ (ಎನ್‌ಸಿಬಿ) ಮುಖ್ಯಸ್ಥ ಸಮೀರ್‌ ವಾಂಖೇಡೆ(Sameer Wankhede), ಈ ಪ್ರಕರಣವನ್ನು ಮುಚ್ಚಿಹಾಕಲು ಖಾಸಗಿ ಗುಪ್ತಚರ ಕೆ.ಪಿ.ಗೋಸಾವಿ ಮೂಲಕ 25 ಕೋಟಿ ರು.ಗೆ ಬೇಡಿಕೆ ಇರಿಸಿದ್ದರು ಎಂಬ ಆರೋಪವನ್ನು ಗೋಸಾವಿ ಸಹಚರ ಪ್ರಭಾಕರ ಸೈಲ್‌ ಆರೋಪಿಸಿದ್ದಾನೆ.

Add Asianetnews Kannada as a Preferred SourcegooglePreferred

ಗೋಸಾವಿ ಈ ಪ್ರಕರಣದಲ್ಲಿ ಸಾಕ್ಷಿಯಾಗಿದ್ದು, ಈತನ ಅಂಗರಕ್ಷಕ ಸೈಲ್‌(Prabhakar sail) ನೋಟರಿ ಅಫಿಡವಿಟ್‌ನಲ್ಲಿ ಈ ಆರೋಪ ಮಾಡಿದ್ದಾನೆ. ಆದರೆ ಈ ಆರೋಪವನ್ನು ಎನ್‌ಸಿಬಿ ತಳ್ಳಿಹಾಕಿದ್ದು, ಇದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದಿದೆ. ಗೋಸಾವಿ, ಎನ್‌ಸಿಬಿ ವಶದಲ್ಲಿದ್ದ ಶಾರುಖ್‌ ಪುತ್ರನ ಜತೆ ಸೆಲ್ಫಿ ತೆಗೆದುಕೊಂಡು ಇತ್ತೀಚೆಗೆ ಸುದ್ದಿಯಾಗಿದ್ದ.

ಸೈಲ್‌ ಹೇಳಿದ್ದೇನು?:

‘ಗೋಸಾವಿ ಈ ಪ್ರಕರಣದಲ್ಲಿ ಮಧ್ಯವರ್ತಿಯಂತೆ ಕೆಲಸ ಮಾಡಿದ್ದಾರೆ. ಗೋಸಾವಿ ಹಾಗೂ ಸ್ಯಾಮ್‌ ಎಂಬ ಇನ್ನೊಬ್ಬ ವ್ಯಕ್ತಿ, ಶಾರುಖ್‌ ಖಾನ್‌(Shah Rukh Khan) ಮ್ಯಾನೇಜರ್‌ ಪೂಜಾ ದಡ್ಲಾನಿಯನ್ನು ದಾಳಿ ನಡೆದ ಮಧ್ಯರಾತ್ರಿ ಭೇಟಿ ಮಾಡಿದ್ದರು. ಈ ವೇಳೆ ಗೋಸಾವಿ 25 ಕೋಟಿ ರು. ಕೊಟ್ಟರೆ ಪ್ರಕರಣ ಇತ್ಯರ್ಥ ಮಾಡಿಸುವೆ ಎಂದು ಸಮೀರ್‌ ವಾಂಖೇಡೆ ಪರವಾಗಿ ಆಫರ್‌ ಇಟ್ಟ. ಕೊನೆಗೆ 18 ಕೋಟಿ ರು.ಗೆ ‘ಡೀಲ್‌ ಓಕೆ’ ಆಯಿತು. ಇದರಲ್ಲಿ 8 ಕೋಟಿ ರು. ವಾಂಖೇಂಡೆಗೆ ನೀಡಲಾಗುವುದು ಹಾಗೂ 10 ಕೋಟಿ ರು.ಗಳನ್ನು ತಮ್ಮ ನಡುವೆ ಹಂಚಿಕೊಳ್ಳೋಣ ಎಂದು ಗೋಸಾವಿ ಹೇಳಿದ’ ಎಂದು ಸೈಲ್‌ ಆರೋಪಿಸಿದ್ದಾನೆ.

‘ಇದರ ಮುಂಗಡ ಹಣವಾಗಿ ಮರುದಿನ ಮುಂಜಾನೆ 50 ಲಕ್ಷ ರು.ಗಳನ್ನು ಕೊಡಲಾಗಿತ್ತು. ಇದರಲ್ಲಿ 12 ಲಕ್ಷ ರು.ಗಳನ್ನು ತಾನು ಇರಿಸಿಕೊಂಡ ಗೋಸಾವಿ, ಉಳಿದಿದ್ದನ್ನು ನನ್ನ ಮುಖಾಂತರ ಸ್ಯಾಮ್‌ಗೆ ತಲುಪಿಸಿದ್ದ’ ಎಂದೂ ಹೇಳಿದ್ದಾನೆ.

‘ಇನ್ನು ಎನ್‌ಸಿಬಿ ನನ್ನ ಕಡೆಯಿಂದ 6-7 ಖಾಲಿ ಕಾಗದದಲ್ಲಿ ಪಂಚನಾಮೆಗೆ ಸಹಿ ಹಾಕಿಸಿಕೊಂಡಿದೆ. ಈ ನಡುವೆ, ಗೋಸಾವಿ ನಿಗೂಢವಾಗಿ ನಾಪತ್ತೆಯಾಗಿದ್ದಾನೆ. ನನ್ನ ಜೀವಕ್ಕೆ ಕೂಡ ಎನ್‌ಸಿಬಿಯಿಂದ ಭಯ ಇದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾನೆ.

ವಿಡಿಯೋ ವೈರಲ್‌:

ಪ್ರಭಾಕರ ಸೈಲ್‌, ಎನ್‌ಸಿಬಿ(NCB) ದಾಳಿಯ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾನೆ. ಇದರಲ್ಲಿ ಗೋಸಾವಿ ಸ್ಪೀಕರ್‌ ಆನ್‌ ಇರಿಸಿ ಯಾರಿಗೋ ಫೋನ್‌ ಮಾಡಿ ಮೊಬೈಲ್‌ ಹಿಡಿದಿಕೊಂಡಿದ್ದು, ‘ಇದರಲ್ಲಿ ಮಾತನಾಡು’ ಎಂದು ಆರ‍್ಯನ್‌ಗೆ ಹೇಳುತ್ತಿರುವುದು ಕಂಡುಬರುತ್ತದೆ. ಈ ವಿಡಿಯೋ ಈಗ ವೈರಲ್‌ ಆಗಿದೆ.