ಉದ್ಯಾವನಕ್ಕೆಂದು ಜಾಗ ಬಿಟ್ಟರೆ ಅಲ್ಲಿಯೇ ಮನೆ ಕಟ್ಟಿದ ನಗರಸಭೆ ಸದಸ್ಯ..!
ಪಬ್ಲಿಕ್ ಪಾರ್ಕ್ ನಿರ್ಮಾಣಕ್ಕೆಂದು ಮೀಸಲಿಟ್ಟ ಸ್ಥಳದಲ್ಲಿ ನಗರ ಸಭೆ ಸದಸ್ಯನೊಬ್ಬ ಮನೆ ನಿರ್ಮಿಸಿಕೊಂಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಉದ್ಯಾನವನದಲ್ಲಿ ನಗರಸಭೆ ಸದಸ್ಯ ಮಹದೇವಯ್ಯ ಅವರ ಪತ್ನಿ ಮತ್ತು ತಮ್ಮನಿಗೂ ಮನೆ ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಚಾಮರಾಜನಗರ(ಅ.19): ನಗರಸಭೆಯ 30ನೇ ವಾರ್ಡಿನಲ್ಲಿ ಉದ್ಯಾನವನಕ್ಕೆ ಮೀಸಲಾಗಿರುವ ಜಾಗದಲ್ಲಿ ಅಕ್ರಮವಾಗಿ ನಗರಸಭೆ ಸದಸ್ಯ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಆದಿಜಾಂಬವ ಮಹಾಸಭಾ ಕಾರ್ಯಾಧ್ಯಕ್ಷ ಲಿಂಗಯ್ಯ ಆರೋಪಿಸಿದ್ದಾರೆ.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆಯ 30ನೇ ವಾರ್ಡಿನಲ್ಲಿ ಸ್ಲಂ ಬೋರ್ಡ್ನಿಂದ ಹಂಚಿಕೆ ಮಾಡಿರುವ 92 ನಿವೇಶನ ಜೊತೆಗೆ ಉದ್ಯಾನವನಕ್ಕೆ ಜಾಗವನ್ನು ಮೀಸಲಿಡಲಾಗಿದೆ. ಅದೇ ಉದ್ಯಾನವನದಲ್ಲಿ ನಗರಸಭೆ ಸದಸ್ಯ ಮಹದೇವಯ್ಯ ಅವರ ಪತ್ನಿ ಮತ್ತು ತಮ್ಮನಿಗೂ ಮನೆ ನಿರ್ಮಿಸಿಕೊಂಡಿದ್ದಾರೆ ಎಂದಿದ್ದಾರೆ.
ಪ್ರಪಂಚದ ಏಕೈಕ ಸಸ್ಯಾಹಾರಿ ಬುಡಕಟ್ಟು ಜನಾಂಗ 'ಬೇಡಗಂಪಣರು'!
ಸ್ಲಂ ಬೋರ್ಡಿನಿಂದ 92 ನಿವೇಶನ ಹಂಚಿಕೆಯಾಗಿರುವ ಪೈಕಿ 71 ಮನೆಗಳು ನಿರ್ಮಾಣ ಮಾಡಲಾಗಿದ್ದು, 21 ನಿವೇಶನಗಳು ಖಾಲಿ ಬಿದ್ದಿವೆ. ಅದರಲ್ಲಿ ನಗರಸಭೆ ಸದಸ್ಯ ಮಹದೇವಯ್ಯ ಅವರ ಹೆಂಡತಿ ಮತ್ತು ತಮ್ಮನಿಗೂ ನಿವೇಶನ ನೀಡಲಾಗಿದೆ. ನಿವೇಶನದಲ್ಲಿ ಮನೆ ನಿರ್ಮಿಸಿಕೊಳ್ಳಲು ನಗರಸಭೆಯಿಂದ ಸಾಲ ಪಡೆದು ಹಂಚಿಕೆಯಾಗಿರುವ ನಿವೇಶನದಲ್ಲಿ ಮನೆ ನಿರ್ಮಿಸದೇ ಉದ್ಯಾನವನದಲ್ಲಿ ಮನೆ ನಿರ್ಮಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಗ್ರಾಮದಲ್ಲಿ ರಸ್ತೆ, ಚರಂಡಿ ಸೇರಿ ಮೂಲ ಸೌಕರ್ಯಗಳೇನೂ ಇಲ್ಲ..!.
ಉದ್ಯಾನವನದ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿರುವುದನ್ನು ತೆರವುಗೊಳಿಸಿ ನಗರಸಭೆ ಸದಸ್ಯತ್ವವನ್ನು ವಜಾಗೊಳಿಸಬೇಕು ಎಂದು ನಗರಸಭೆ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಹಿನ್ನೆಲೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದು, ಇದುವರೆಗೂ ಕ್ರಮ ಜರುಗಿಸಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಾಬು ಜಗಜೀವನರಾಂ ಯುವಕರ ಸಂಘದ ಅಧ್ಯಕ್ಷ ರಾಚಯ್ಯ, ಮುಖಂಡರಾದ ನಾರಾಯಣ, ಸುಬ್ಬಣ್ಣ, ಶಿವಕುಮಾರ್ ಇದ್ದರು.