Asianet Suvarna News Asianet Suvarna News

ದೇಶದಲ್ಲಿ ಕೆಜಿಗೆ 300 ರೂಪಾಯಿ ದಾಟಿದ ನಿಂಬೆಹಣ್ಣು ಬೆಲೆ, ಕೈಗೆ ಸಿಗದ ತರಕಾರಿ, ಹೀಗೆ ಇದ್ರೆ ಕಷ್ಟ ಎಂದ ಆರ್ ಬಿಐ!

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಅಗತ್ಯ ವಸ್ತುಗಳ ಮೇಲೂ ಆಗಿದ್ದು, ದೇಶದ ವಿವಿಧ ಪ್ರದೇಶಗಳಲ್ಲಿ 1 ಕೆಜಿ ಹೀರೇಕಾಯಿ, ಬೆಂಡೆಕಾಯಿ ಹಾಗೂ ಹಾಗಲಕಾಯಿಗೆ ತಲಾ 100 ರೂಪಾಯಿ ದಾಟಿದೆ. ಬೇಸಿಗೆ ಕಾಲದಲ್ಲಿ ವ್ಯಾಪಕ ಬೇಡಿಕೆ ಪಡೆದುಕೊಳ್ಳುವ ನಿಂಬೆಹಣ್ಣು ಕೆಜಿಗೆ 3000 ರೂಪಾಯಿ ದಾಟಿದೆ. ಕಚ್ಚಾ ತೈಲದ ಬೆಲೆ ಹೀಗೆ ಮುಂದುವರಿದರೆ, ಮುಂದೆ ಬೆಲೆ ಇನ್ನಷ್ಟು ಏರಿಕೆಯಾಗಲಿದೆ ಎಂದು RBI ಎಚ್ಚರಿಸಿದೆ.
 

Vegetable prices on the sky lemons cross 300 per kg RBI Says Inflation To Hit Household Further Petrol Price san
Author
Bengaluru, First Published Apr 8, 2022, 5:34 PM IST

ನವದೆಹಲಿ (ಏ.8): ಕಳೆದ ಕೆಲವು ದಿನಗಳಿಂದ ಅಗತ್ಯ ವಸ್ತುಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಒಂದೆಡೆ ಪೆಟ್ರೋಲ್ (Petrol), ಡೀಸೆಲ್ (Diesel), ಗ್ಯಾಸ್ (Gas) ಬೆಲೆಯಲ್ಲಿ ಏರಿಕೆ, ಕಟ್ಟಡ ಸಾಮಗ್ರಿಗಳ ಬೆಲೆ ಏರಿಕೆಯ ಬೆನ್ನಲ್ಲಿಯೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವ ಕಾರಣ ಸಾಮಾನ್ಯ ಜನ ಎಲ್ಲಾ ಕಡೆಯಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರಕುಗಳ ಈ ಹಣದುಬ್ಬರ ಕಾರು, ಮನೆ, ಸಿಮೆಂಟ್ ಗೆ ಮಾತ್ರವೇ ಸೀಮಿತವಾಗಿಲ್ಲ. ತರಕಾರಿಯಿಂದ ಹಿಡಿದು ಇಂಧನದವರೆಗಿನ ಹಣದುಬ್ಬರದಿಂದ ಸಾಮಾನ್ಯ ಬವಣೆ ಪಡುವಂತಾಗಿದೆ. ಬೇಸಿಗೆಯಲ್ಲಿ ನಿಂಬೆ ಹಣ್ಣಿನ (Lemon) ಬೆಲೆ ಗಗನ ಮುಟ್ಟಿದ್ದು, ದೇಶದ ಬಹುತೇಕ ಕಡೆಗಳಲ್ಲಿ ಕೆಜಿಗೆ 300-400 ರೂಪಾಯಿ ವರೆಗೆ ತಲುಪಿದೆ.

ತರಕಾರಿಗಳು (Vegetable), ಲೋಹಗಳು (Metal) ಮತ್ತು ಹಾಲಿನಂತಹ (Milk) ಪ್ರಮುಖ ಸರಕುಗಳ ಬೆಲೆಗಳು ಹೆಚ್ಚಾಗಿರುವ ನಡುವೆ ಪ್ರಸ್ತುತ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ನಡುವೆ ಅಂತರರಾಷ್ಟ್ರೀಯ ತೈಲ ಬೆಲೆಗಳು ಏರಿಕೆ ಆಗಿರುವುದು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI)  ಶುಕ್ರವಾರ ಹೇಳಿದೆ. ಪ್ರತಿ ಬ್ಯಾರೆಲ್‌ಗೆ  100 ಅಮೆರಿಕನ್ ಡಾಲರ್ ಬೇಸ್‌ಲೈನ್‌ಗಿಂತ 10 ಪ್ರತಿಶತದಷ್ಟು ಬೆಲೆ ಏರಿದೆ. ಇದು ಹೀಗೇ ಮುಂದುವರಿದಲ್ಲಿ ದೇಶೀಯ ಹಣದುಬ್ಬರವು ಇನ್ನೂ ಹೆಚ್ಚಾಗಬಹುದು ಎಂದು ಎಚ್ಚರಿಕೆ ನೀಡಿದೆ.

ಜೀರಿಗೆ, ಕೊತ್ತಂಬರಿ, ಮೆಣಸಿನಕಾಯಿ ತುಂಬಾ ದುಬಾರಿ: ಇತ್ತೀಚಿನ ದಿನಗಳಲ್ಲಿ ಜೀರಿಗೆ, ಕೊತ್ತಂಬರಿ ಸೊಪ್ಪು ಮತ್ತು ಮೆಣಸಿನಕಾಯಿ ದರದಲ್ಲಿ ಶೇ.40-60ರಷ್ಟು ಜಿಗಿತ ಕಂಡುಬಂದಿದೆ. ಅದೇ ಸಮಯದಲ್ಲಿ ಬೀನ್ಸ್ ಬೆಲೆ ಕೆಜಿಗೆ 120 ರೂ.ಗೆ ತಲುಪಿದೆ. ಕೆಲ ದಿನಗಳ ಹಿಂದಿನವರೆಗೆ ಕೆಜಿಗೆ 40 ರೂ.ನಂತೆ ಮಾರಾಟವಾಗುತ್ತಿದ್ದ ಹೂಕೋಸು ಬೆಲೆ ಇದೀಗ 80 ರೂ.ಗೆ ತಲುಪಿದೆ. ದೇಶದ ವಿವಿಧ ಪ್ರದೇಶಗಳಲ್ಲಿ 1 ಕೆಜಿ ಹೀರೇಕಾಯಿ, ಬೆಂಡೆಕಾಯಿ ಹಾಗೂ ಹಾಗಲಕಾಯಿಗೆ ತಲಾ 100 ರೂಪಾಯಿ ದಾಟಿದೆ.  ಮೆಣಸಿನಕಾಯಿ ಕೆಜಿಗೆ 70 ರೂಪಾಯಿ ಆಗಿದ್ದರೆ, ಆಲೂಗೆಡ್ಡೆ, ಈರುಳ್ಳಿ ಬೆಲೆ ಇನ್ನೂ ನಿಯಂತ್ರಣದಲ್ಲಿದ್ದು, ಇದರಿಂದ ಜನಸಾಮಾನ್ಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಬಜೆಟ್ ಹಾಳು ಮಾಡಿದ ಹಾಲಿನ ಬೆಲೆ:  ಸಾಮಾನ್ಯ ಜನರ ಸಮಸ್ಯೆಗಳು ತರಕಾರಿ ಬೆಲೆ ಏರಿಕೆಗೆ ಸೀಮಿತವಾಗಿಲ್ಲ. ಹಾಲಿನ ದರ ಏರಿಕೆಯಿಂದ ಜನಸಾಮಾನ್ಯರ ಸಂಕಷ್ಟವೂ ಹೆಚ್ಚಿದೆ. ಕಳೆದ ತಿಂಗಳಿನಿಂದ ಅಮುಲ್, ಮದರ್ ಡೈರಿಯ ಹಾಲು ಲೀಟರ್‌ಗೆ 2 ರೂಪಾಯಿ ಏರಿಕೆಯಾಗಿದ್ದರೆ, ಕರ್ನಾಟಕದಲ್ಲಿ ಕೆಎಂಎಫ್ ನಂದಿನಿ ಹಾಲಿನ ಬೆಲೆಯಲ್ಲಿ 5 ರೂಪಾಯಿ ಏರಿಕೆ ಮಾಡಬೇಕು ಎಂದು ಶಿಫಾರಸು ಕೂಡ ಮಾಡಲಾಗಿದೆ.

CPI Inflation: 8 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೇರಿದ ಚಿಲ್ಲರೆ ಹಣದುಬ್ಬರ; ಜನಸಾಮಾನ್ಯರ ಜೇಬಿಗೆ ಹೆಚ್ಚಿದ ಹೊರೆ!

ಇಂಧನ ದರದಲ್ಲಿ ವಿಪರೀತ ಏರಿಕೆ:
ಕಳೆದ ಕೆಲ ದಿನಗಳಿಂದ ಇಂಧನ ಬೆಲೆ ಏರಿಕೆಯಿಂದಾಗಿ ಉಳಿದ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. 18 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 10-10 ರೂ.ಗಳಷ್ಟು ಏರಿಕೆಯಾಗಿದೆ. ಇದಲ್ಲದೆ, ಸಿಎನ್‌ಜಿ ಬೆಲೆಗಳು ಗಮನಾರ್ಹವಾಗಿ ಹೆಚ್ಚಾಗಿದೆ. ಇದರಿಂದ ಸರಕು ಸಾಗಣೆ ವೆಚ್ಚವೂ ಏರಿಕೆಯಾಗಿದೆ.

Reasons for inflation: ದಿನದಿಂದ ದಿನಕ್ಕೆ ಜೀವನ ನಿರ್ವಹಣಾ ವೆಚ್ಚ ದುಬಾರಿ; ಜಾಗತಿಕ ಹಣದುಬ್ಬರಕ್ಕೆ ಏಳು ಕಾರಣಗಳು!

ಸ್ಟೀಲ್, ಸೈಕಲ್ ಬೆಲೆ ಏರಿಕೆ: ಕಳೆದ ಕೆಲವು ದಿನಗಳಲ್ಲಿ ಉಕ್ಕಿನ ಬೆಲೆ ಪ್ರತಿ ಟನ್‌ಗೆ 2,500-3,000 ರೂ ಏರಿಕೆಯಾಗಿದೆ. ಇದರಿಂದ ಉತ್ಪಾದನೆ ಮತ್ತು ನಿರ್ಮಾಣ ವೆಚ್ಚ ಹೆಚ್ಚಾಗಿದೆ. ಅದೇ ಸಮಯದಲ್ಲಿ, ಉಕ್ಕಿನ ಬೆಲೆಯಿಂದಾಗಿ, ಸೈಕಲ್‌ಗಳು ಹಾಗೂ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಶೇಕಡಾ 30-35 ರಷ್ಟು ಏರಿಕೆಯಾಗಿದೆ. ರಷ್ಯಾ ಉಕ್ಕಿನ ಪ್ರಮುಖ ಉತ್ಪಾದಕರಲ್ಲಿ ಒಂದಾಗಿದೆ ಮತ್ತು ರಷ್ಯಾ-ಉಕ್ರೇನ್ ಯುದ್ಧವು ಸರಬರಾಜಿನ ಮೇಲೆ ಭಾರಿ ಪರಿಣಾಮ ಬೀರಿದೆ.

ಕೋಲ್ಕತ್ತದಲ್ಲಿ ಮೀನಿನ ಬೆಲೆಯಲ್ಲಿ ಏರಿಕೆ: ದೇಶಾದ್ಯಂತ ಇಂಧನ ದರ ಏರಿಕೆಯಾಗುತ್ತಿದ್ದಂತೆ ಕೋಲ್ಕತ್ತಾದಲ್ಲಿ ಮೀನಿನ ಬೆಲೆಯೂ ಏರಿಕೆಯಾಗಿದೆ. ಹಣ್ಣು, ತರಕಾರಿ, ಮಾಂಸದ ಬೆಲೆಯಲ್ಲಿ ಏರಿಕೆಯಾಗಿದೆ. ಕಟ್ಲ, ರಾಹು ಮುಂತಾದ ಮೀನುಗಳ ಬೆಲೆ ಕೆ.ಜಿ.ಗೆ 50 ರೂ. ಏರಿಕೆಯಾಗಿದೆ. ಇದೇ ವೇಳೆ ಶ್ಯಾಂಬಜಾರ್ ಮಾರುಕಟ್ಟೆಯಲ್ಲಿ ಕಳೆದ ವಾರ 180-200 ರೂ.ಗೆ ಮಾರಾಟವಾಗುತ್ತಿದ್ದ ಕಟ್ಲ ಮೀನು ಈಗ ಕೆಜಿಗೆ 250 ರೂ.ಗೆ ಜಿಗಿದಿದೆ. ಅದೇ ರೀತಿ ನಿನ್ನೆ ಪಬ್ಡಾ ಮೀನು ಕೆಜಿಗೆ 360 ರೂ.ಗೆ ಮಾರಾಟವಾಗಿದ್ದರೆ, ಕಳೆದ ವಾರ 400 ರೂ.ಗೆ ಮಾರಾಟವಾಗಿದ್ದ ಭೆಟ್ಕಿ ಮೀನು ಕೆಜಿಗೆ 500 ರೂಪಾಯಿ ಆಗಿದೆ.

Follow Us:
Download App:
  • android
  • ios