ಚೋಕ್ಸಿ ಬೆನ್ನಲ್ಲೇ ಮಲ್ಯಗೂ ಹೆಚ್ಚಿದ ಸಂಕಷ್ಟ; UB ಷೇರು ಮಾರಾಟಕ್ಕೆ ಮುಂದಾದ ಬ್ಯಾಂಕ್
- ಭಾರತೀಯ ಬ್ಯಾಂಕ್ಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ
- ಮಲ್ಯ ಒಡೆತದಲ್ಲಿರುವ ಯುನೈಟೆಡ್ ಬ್ರಿವರಿಸ್ ಷೇರ್ ಮಾರಾಟಕ್ಕೆ ತಯಾರಿ
- 5,500 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿ ಹಣ ವಸೂಲಿಗೆ ಮುಂದಾದ ಬ್ಯಾಂಕ್
ನವದೆಹಲಿ(ಮೇ.30): ಪಿಎನ್ಬಿ ವಂಚನೆ ಪ್ರಕರಣದ ಪ್ರಮುಖ ಆರೋಪಿ, ಉದ್ಯಮಿ ಮೆಹುಲ್ ಚೋಕ್ಸಿ ಬಂಧನವಾಗುತ್ತಿದ್ದಂತೆ, ಇತ್ತ ವಿವಿಧ ಬ್ಯಾಂಕ್ಗಳಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯಗೆ ಸಂಕಷ್ಟ ಹೆಚ್ಚಾಗಿದೆ. ವಿಜಯ್ ಮಲ್ಯ ವಂಚಿಸಿರುವ ಹಣ ವಸೂಲಿಗೆ ಇದೀಗ ಭಾರತೀಯ ಬ್ಯಾಂಕ್ಗಳು ಮಲ್ಯ ಒಡೆತನದಲ್ಲಿರುವ ಯುಬಿ(United Breweries) ಷೇರು ಮಾರಾಟ ಮಾಡಲು ಸಜ್ಜಾಗಿದೆ.
ಮಲ್ಯ, ನೀರವ್, ಚೋಕ್ಸಿ; ಪರಾರಿಯಾದ ಉದ್ಯಮಿಗಳಿಗೆ ಭಾರತದ ಬಿಗಿ ಕಾನೂನು ಕುಣಿಕೆ!
ಉದ್ಯಮಿ, ಪಿಎನ್ಬಿ ವಂಚನೆ ಪ್ರಕರಣದ ರೂವಾರಿ ಮೆಹುಲ್ ಚೋಕ್ಸಿ ಡೋಮಿನಿಕಾದಲ್ಲಿ ಬಂಧನ ಹಾಗೂ ಹಸ್ತಾಂತರ ಪ್ರಕ್ರಿಯೆ ಆರಂಭಗೊಂಡಂತೆ ಭಾರತದಿಂದ ವಿದೇಶಕ್ಕೆ ಪಲಾಯನಗೊಂಡವರ ಕುರಿತು ಚರ್ಚೆ ಆರಂಭಗೊಂಡಿದೆ. ಇದರ ನಡುವೆ ವಿಜಯ್ ಮಲ್ಯ ಒಡೆತನದ ಬರೋಬ್ಬರಿ 5,500 ಕೋಟಿ ಮೌಲ್ಯದ ಯುಬಿ ಷೇರುಗಳನ್ನು ಬ್ಲಾಕ್ ಡೀಲ್ ಮೂಲಕ ಮಾರಾಟ ಮಾಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಎಸ್ಬಿಐ ಕ್ಯಾಪ್ಸ್ ಜೊತೆ ಮಾತುಕತೆ ನಡೆಸಿದೆ.
ಈ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕ್ಗೆ ವಿಜಯ್ ಮಲ್ಯ ಅವರಿಂದ ಬರಬೇಕಿರರುವ ಬಾಕಿ ಹಣ ವಸೂಲಿಗೆ ಷೇರು ಮಾರಾಟ ಮಾಡಲು ಮುಂದಾಗಿದೆ. ಶೀಘ್ರದಲ್ಲೇ ಬಾಕಿ ಹಣ ವಸೂಲಿ ಮಾಡುವ ವಿಶ್ವಾಸವನ್ನು ಬ್ಯಾಂಕ್ ವ್ಯಕ್ತಪಡಿಸಿದೆ. ಬ್ಯಾಂಕ್ಗಳಿಂದ ಸಾವಿರ ಸಾವಿರ ಕೋಟಿ ರೂಪಾಯಿ ಸಾಲ ಪಡೆಯಲು ವಿಜಯ್ ಮಲ್ಯ ಪ್ರಮುಖ ಆಧಾರವಾಗಿ ತಮ್ಮ ಒಡೆತನದಲ್ಲಿರುವ ಷೇರುಗಳನ್ನು ಬ್ಯಾಂಕ್ಗಳಲ್ಲಿ ಇಟ್ಟಿದ್ದರು. ಬ್ಲಾಕ್ ಡೀಲ್ ಮೂಲಕ ಈ ಷೇರುಗಳನ್ನು ಮಾರಾಟ ಮಾಡಲಾಗುತ್ತದೆ.
ಮಲ್ಯಗೆ ಇಡಿ ಶಾಕ್, ಫ್ರಾನ್ಸ್ನಲ್ಲಿ ಬಚ್ಚಿಟ್ಟಿದ್ದ ದೊಡ್ಡ ಮೊತ್ತದ ಆಸ್ತಿಯೂ ಜಪ್ತಿ
ಮನಿ ಲಾಂಡರಿಂಗ್ ತಡೆ ಕಾಯ್ದೆ (PMLA) ಪ್ರಕಾರ ಮುಂಬೈ ನ್ಯಾಯಾಲಯವು ಮಲ್ಯ ಅವರಿಂದ ಜಾರಿ ನಿರ್ದೇಶನಾಲಯ (ED) ವಶಪಡಿಸಿಕೊಂಡ ಆಸ್ತಿಯನ್ನು ಲಿಕ್ಕರ್ ದೊರೆಗೆ ಮಂಜೂರು ಮಾಡಿದ ಬ್ಯಾಂಕುಗಳಿಗೆ ವಶಕ್ಕೆ ಒಪ್ಪಿಸಿತ್ತು. ಮನಿ ಲಾಂಡರಿಂಗ್ಗೆ ಸಂಬಂಧಿಸಿದಂತೆ ಮಾಜಿ ಯುಬಿ ಸಮೂಹದ ಅಧ್ಯಕ್ಷ ವಿಜಯ್ ಮಲ್ಯ ಅವರಿಂದ 9,000 ಕೋಟಿ ರೂ.ಗಳ ಆಸ್ತಿಯನ್ನು ಇಡಿ ವಶಪಡಿಸಿಕೊಂಡಿದೆ.
ಮಲ್ಯ ಅವರಿಂದ ವಶಪಡಿಸಿಕೊಂಡ ಆಸ್ತಿ ಹಾಗೂ ಷೇರು ಮಾರಾಟಕ್ಕೆ ಬ್ಯಾಂಕ್ ಆಗ್ರಹಿಸಿತ್ತು. ಆದರೆ ಇದಕ್ಕೆ ಇಡಿ ವಿರೋಧ ವ್ಯಕ್ತಪಡಿಸಿತ್ತು. ಆದರೆ ಪಿಎಂಎಲ್ಎ ನ್ಯಾಯಾಲಯವು ಬ್ಯಾಂಕ್ ಪರವಾಗಿ ಆದೇಶ ಹೊರಡಿಸಿತ್ತು. ಬಳಿಕ ಇಡಿ ಕೂಡ ಆದೇಶದ ಪರವಾಗಿ ನಿಂತಿತ್ತು. ಕಿಂಗ್ಫಿಶರ್ ಏರ್ಲೈನ್ ಬ್ಯಾಂಕ್ ಸಾಲ ಮರುಪಾವತಿಸಲು ವಿಫಲಗೊಂಡಿತ್ತು. ಇದರ ಪರಿಣಾಣ ಇಡಿ ತನಿಖೆ ಎದುರಿಸಬೇಕಾಗಿ ಬಂದಿತ್ತು. ಇಡಿ ಹಾಗೂ ಸಿಬಿಐ ತನಿಖೆ ಆರಂಭಿಸಿದಾಗ ವಿಜಯ್ ಮಲ್ಯ ಭಾರತದಿಂದ ಪಲಾಯನ ಮಾಡಿ ಲಂಡನ್ ಸೇರಿಕೊಂಡರು.
ಹೊಸ ವರಸೆ ತೆಗೆದ ಮದ್ಯ ದೊರೆ ವಿಜಯ್ ಮಲ್ಯ, ಏನಂತೀಗ?.
ಒಂದು ವೇಳೆ ಮಲ್ಯ ಆರೋಪಗಳಿಂದ ಮುಕ್ತರಾದರೆ ಬ್ಯಾಂಕ್ಗಳು ಬಾಕಿ ಹಣ ವಸೂಲಿ ಮಾಡಲು ಮಾರಾಟ ಮಾಡಿದ ಷೇರುಗಳು, ಆಸ್ತಿಗಳನ್ನು ಮಲ್ಯಗೆ ಹಿಂತಿರುಗಿಸಬೇಕು ಎಂದು ಪಿಎಂಎಲ್ಎ ನ್ಯಾಯಾಲಯ ಹೇಳಿದೆ.
ಕಿಂಗ್ಫಿಶರ್ ಏರ್ಲೈನ್ ನಷ್ಟದ ಪರಿಣಾಮ 2013ರಲ್ಲಿ ಎಸ್ಬಿಐ ಬ್ಯಾಂಕ್ 6,000 ಕೋಟಿ ರೂಪಾಯಿ ಸಾಲ ಮರುಪಾವತಿಸುವಂತೆ ಸೂಚಿಸಿತ್ತು. ಆದರೆ ಇಡಿ ಹಾಗೂ ಸಿಬಿಐ ತನಿಖೆ ಎದುರಿಸಬೇಕಾಗಿ ಬಂದ ಮಲ್ಯ ವಿದೇಶಕ್ಕೆ ಪರಾರಿಯಾದರು. ಇನ್ನು 2016ರ ವೇಳೆ ಮಲ್ಯ ಸಾಲ ಮರುಪಾವತಿ ಮೊತ್ತ ಬಡ್ಡಿ ಸೇರಿ 9,000 ಕೋಟಿ ರೂಪಾಯಿಗಳಾಗಿತ್ತು. ಇದೀಗ ಈ ಮೊತ್ತ 12,000ಕ್ಕೂ ಅಧಿಕ ಎಂದು ಅಂದಾಜಿಸಲಾಗುತ್ತಿದೆ.