ಆಹಾರ ಸಂಸ್ಕರಣಾ ಘಟಕಗಳಿಗೂ ಪ್ರೋತ್ಸಾಹಧನ| ಕೇಂದ್ರದಿಂದ ಉತ್ಪಾದನೆ ಆಧರಿತ ಪ್ರೋತ್ಸಾಹಧನ ಯೋಜನೆ ಘೋಷಣೆ| 10900 ಕೋಟಿ ನೆರವು| ರೈತರ ಆದಾಯ ಹೆಚ್ಚಳಕ್ಕೂ ಅನುಕೂಲ| ಇದರಿಂದ ದೇಶದ ಆಹಾರ ಸಂಸ್ಕರಣೆ ವಲಯ ‘ಗ್ಲೋಬಲ್‌’| ಆತ್ಮನಿರ್ಭರ ಭಾರತ ಕನಸಿಗೆ ಪೂರಕವಾಗಿ ಮತ್ತೊಂದು ಯೋಜನೆ

ನವದೆಹಲಿ(ಏ.01): ಆತ್ಮನಿರ್ಭರ ಭಾರತ ಮಂತ್ರ ಜಪಿಸುತ್ತಿರುವ ಕೇಂದ್ರ ಸರ್ಕಾರ ಮೊಬೈಲ್‌, ಟೆಲಿಕಾಂ ಉಪಕರಣ, ಕಂಪ್ಯೂಟರ್‌ ಹಾರ್ಡ್‌ವೇರ್‌ ಸೇರಿದಂತೆ ಈಗಾಗಲೇ 6 ವಲಯಗಳಿಗೆ ಘೋಷಣೆ ಮಾಡಿದ್ದ ಉತ್ಪಾದನೆ ಆಧರಿತ ಪ್ರೋತ್ಸಾಹಧನ ಯೋಜನೆಯನ್ನು ಇದೀಗ ಆಹಾರ ಸಂಸ್ಕರಣೆ ವಲಯಕ್ಕೂ ವಿಸ್ತರಣೆ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅಂಗೀಕಾರ ನೀಡಲಾಗಿದೆ. ಯೋಜನೆಗೆ 10900 ಕೋಟಿ ರು. ಅನುದಾನ ಮೀಸಲಿಡಲಾಗಿದ್ದು, 2.5 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಜಾಗತಿಕ ಮಟ್ಟದಲ್ಲಿ ಆಹಾರ ಉತ್ಪನ್ನಕ್ಕೆ ಭಾರೀ ಬೇಡಿಕೆ ಇದೆ. ಹೀಗಾಗಿ ರಫ್ತು ಉತ್ತೇಜಿಸುವುದರ ಜತೆಗೆ ಗ್ರಾಹಕರಿಗೆ ವಿಶಾಲ ಶ್ರೇಣಿಯ ಮೌಲ್ಯವರ್ಧಿತ ಉತ್ಪನ್ನಗಳು ಲಭ್ಯವಾಗುವಂತೆ ಈ ಯೋಜನೆ ನೋಡಿಕೊಳ್ಳುತ್ತದೆ. ಭಾರತದ ಸಂಸ್ಕರಿತ ಆಹಾರ ಉತ್ಪನ್ನಗಳ ಮೌಲ್ಯ 33,494 ಕೋಟಿ ರು.ಗೆ ಏರಲಿದೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.

ಬಜೆಟ್‌ನಲ್ಲಿ 12ರಿಂದ 13 ವಲಯಗಳಿಗೆ ಉತ್ಪಾದನೆ ಆಧರಿತ ಪ್ರೋತ್ಸಾಹಧನ ಯೋಜನೆ ಘೋಷಿಸಲಾಗಿತ್ತು. ಈಗಾಗಲೇ 6 ವಲಯಗಳಿಗೆ ಅದನ್ನು ಪ್ರಕಟಿಸಲಾಗಿದೆ. ಇದೀಗ ಆಹಾರ ಸಂಸ್ಕರಣೆ ವಲಯಕ್ಕೂ ಘೋಷಿಸಲಾಗಿದೆ ಎಂದು ವಾರ್ತಾ ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ.

ಏನಿದು ಯೋಜನೆ?:

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಆಹಾರ ಬ್ರ್ಯಾಂಡ್‌ಗಳಿಗೆ ನೆರವಾಗಲು ಹಾಗೂ ಭಾರತದ ನೈಸರ್ಗಿಕ ಸಂಪನ್ಮೂಲಕ್ಕೆ ಅನುಗುಣವಾಗಿ ಜಾಗತಿಕ ಆಹಾರ ಸಂಸ್ಕರಣಾ ಉದ್ದಿಮೆ ಸ್ಥಾಪನೆಗೆ ನೆರವಾಗುವುದು ಯೋಜನೆಯ ಉದ್ದೇಶ. ಸರ್ಕಾರ ಸೂಚಿಸುವ ನಿರ್ದಿಷ್ಟಪ್ರಮಾಣದ ಬಂಡವಾಳ ಹೂಡುವ ಕಂಪನಿಗಳಿಗೆ ಪ್ರೋತ್ಸಾಹ ಧನ ಸಿಗುತ್ತದೆ. ಈ ಯೋಜನೆಯಿಂದ ಕೃಷಿಯಿಂದ ಹೊರಗೆ ಹೆಚ್ಚಿನ ಉದ್ಯೋಗವಕಾಶಗಳು ದೊರೆಯಲಿವೆ. ರೈತರ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಸಿಗಲಿದೆ. ತನ್ಮೂಲಕ ರೈತರಿಗೆ ಹೆಚ್ಚಿನ ಆದಾಯ ಲಭ್ಯವಾಗಲಿದೆ. ಈ ಯೋಜನೆಯಲ್ಲಿ ಪ್ರೋತ್ಸಾಹಧನವನ್ನು ಆರು ವರ್ಷಗಳ ಕಾಲ ನೀಡಲಾಗುತ್ತದೆ. 2021-22ರಿಂದ 2026-27ರವರೆಗೆ ಒಟ್ಟು ಆರು ವರ್ಷಗಳ ಕಾಲ ಯೋಜನೆ ಚಾಲ್ತಿಯಲ್ಲಿರುತ್ತದೆ.