ತೀವ್ರ ಸ್ವರೂಪ ಪಡೆದ ಆರ್ ಬಿಐ-ಕೇಂದ್ರ ಸರ್ಕಾರದ ನಡುವಿನ ಜಟಾಪಟಿ! ಆರ್‌ಬಿಐ ಗರ್ವನರ್ ಊರ್ಜಿತ್ ಪಟೇಲ್ ರಾಜೀನಾಮೆ ವದಂತಿ! ಕೇಂದ್ರ ಸರ್ಕಾರದ ಒತ್ತಡಕ್ಕೆ ರೋಸಿ ಹೋದ ಊರ್ಜಿತ್ ಪಟೇಲ್?!ರಾಜೀನಾಮೆ ವದಂತಿ ತಳ್ಳಿ ಹಾಕಿದ ಆರ್‌ಬಿಐ, ಹಣಕಾಸು ಇಲಾಖೆ! ಡಾಲರ್ ಎದುರು ಮಕಾಡೆ ಮಲಗಿದ ರೂಪಾಯಿ ಮೌಲ್ಯ      

ಮುಂಬೈ(ಅ.31): ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರದ ನಡುವಿನ ಸಂಘರ್ಷ ತಾರಕಕ್ಕೇರಿದೆ. ಆರ್ ಬಿಐ ಕರ್ತವ್ಯ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಅನಗತ್ಯ ಹಸ್ತಕ್ಷೇಪ ಮಾಡುತ್ತಿದೆ ಎಂಬ ಉನ್ನತ ಅಧಿಕಾರಿಗಳ ಆರೋಪ ಮತ್ತು ಆರ್‌ಬಿಐ ನೀತಿ ನಿರೂಪಣೆ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯದ ಅಸಮಾಧಾನ ದಿನದಿಂದ ದಿನಕ್ಕೆ ಉಲ್ಭಣಗೊಳ್ಳುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇ ವೇಳೆ ಆರ್‌ಬಿಐ ಗರ್ವನರ್ ಊರ್ಜಿತ್ ಪಟೇಲ್ ಕೂಡ ಸರ್ಕಾರದ ಒತ್ತಡದಿಂದ ರೋಸಿ ಹೋಗಿದ್ದು, ಇಂದು ತಮ್ಮ ಸ್ಥಾನಕ್ಕೆ ರಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ನಿನ್ನೆಯಷ್ಟೇ ಆರ್‌ಬಿಐ ಹೆಚ್ಚುವರಿ ಸಾಲ ನೀಡಿಕೆಯ ನೀತಿಯನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಟೀಕಿಸಿದ್ದರು. ಇದಕ್ಕೂ ಮೊದಲು ಆರ್‌ಬಿಐ ಉಪ ಗರ್ವನರ್ ವಿರಾಲ್ ಆಚಾರ್ಯ ಸಂಸ್ಥೆಯ ಕಾರ್ಯ ಚಟುವಟಿಕೆಯಲ್ಲಿ ಕೇಂದ್ರ ಸರ್ಕಾರ ಅನಗತ್ಯ ಹಸ್ತಕ್ಷೇಪ ನಡೆಸುತ್ತಿದೆ ಎಂದು ಆರೋಪಿಸಿದ್ದರು.

ಈ ಎಲ್ಲ ಬೆಳವಣಿಗೆಗಳಿಂದ ರೋಸಿ ಹೋಗಿರುವ ಆರ್‌ಬಿಐ ಗರ್ವನರ್ ಊರ್ಜಿತ್ ಪಟೇಲ್ ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಲಿದ್ದಾರೆ ಎಂಬ ಗುಲ್ಲು ಎದ್ದಿದೆ. ಆದರೆ ಕೇಂದ್ರ ಹಣಕಾಸು ಇಲಾಖೆ ಮತ್ತು ಆರ್‌ಬಿಐ ಮೂಲಗಳು ಇದನ್ನು ತಳ್ಳಿ ಹಾಕಿವೆ.

ಈ ಮಧ್ಯೆ ಊರ್ಜಿತ್ ಪಟೇಲ್ ರಾಜೀನಾಮೆ ವದಂತಿ ಹಬ್ಬುತ್ತಿದ್ದಂತೇ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿತ ಕಂಡಿದೆ. ಈ ಮೊದಲು ಡಾಲರ್ ಎದುರು 73.66 ರೂ. ಇದ್ದ ರೂಪಾಯಿ ಮೌಲ್ಯ, ರಾಜೀನಾಮೆ ವದಂತಿಯಿಂದಾಗಿ 73.99 ರೂ.ಗೆ ಏರಿಕೆಯಾಯಿತು.