ಗುಜರಾತಿಗೆ ಕೊಟ್ಟಂತೆ ಮೊದಲು ಸಬ್ಸಿಡಿ ಕೊಡಿ. ಆ ನಂತರ ರಾಜ್ಯದ ಪಾಲಿನ ಶೇ.20ರಷ್ಟು ಸಬ್ಸಿಡಿ ಕೊಡುತ್ತೇವೆ. ಈ ಭರವಸೆಯಿಂದ ಕುಮಾರಸ್ವಾಮಿ ಹಿಂದೆ ಸರಿಯುವುದಿಲ್ಲ ಎನ್ನವ ವಿಶ್ವಾಸ ಕೂಡ ಇದೆ ಎಂದು ಹೇಳಿದ ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ  

ಬೆಂಗಳೂರು(ಜೂ.20): ಸೆಮಿಕಂಡಕ್ಟರ್‌ ಉದ್ಯಮದ ಅಭಿವೃದ್ಧಿಗೆ ಗುಜರಾತ್‌ ರಾಜ್ಯಕ್ಕೆ ಕೊಟ್ಟಿರುವಂತೆ ಶೇ.50ರಷ್ಟು ಸಬ್ಸಿಡಿಯನ್ನು ಕೇಂದ್ರ ಸರ್ಕಾರ ನೀಡಿದರೆ, ರಾಜ್ಯ ಸರ್ಕಾರ ಕೂಡ ತನ್ನ ಪಾಲಿನ ಶೇ.20ರಷ್ಟು ಸಬ್ಸಿಡಿ ಕೊಡಲು ಸಿದ್ಧವಿದೆ ಎಂದು ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

ಕೇಂದ್ರದ ಬೃಹತ್‌ ಕೈಗಾರಿಕೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು, ಗುಜರಾತ್‌ನಲ್ಲಿ ಅಮೆರಿಕಾದ ಮೈಕ್ರಾನ್‌ ಕಂಪನಿಗೆ ಕೇಂದ್ರ ಶೇ.50ರಷ್ಟು ಸಬ್ಸಿಡಿ ಕೊಟ್ಟಿದೆ. ಅಲ್ಲಿನ ಗುಜರಾತ್‌ ಸರ್ಕಾರ ಶೇ.20ರಷ್ಟು ಸಬ್ಸಿಡಿ ನೀಡಿದೆ. ಅದೇ ರೀತಿ ಕರ್ನಾಟಕ ಸರ್ಕಾರ ಸಬ್ಸಿಡಿ ಕೊಡಲು ಸಿದ್ಧವಿದೆಯಾ ಎಂದು ಸವಾಲು ಹಾಕಿದ್ದರು.

ಈ ವಲಯದಲ್ಲಿ ಭಾರತ ನಂ.1 ಆಗಲಿದೆ: ದೇಶದ 3 ಸೆಮಿಕಂಡಕ್ಟರ್‌ ಘಟಕಗಳಿಗೆ ಪ್ರಧಾನಿ ಶಂಕುಸ್ಥಾಪನೆ

ಇದಕ್ಕೆ ‘ಎಕ್ಸ್‌ ’ ಖಾತೆಯಲ್ಲಿ ಟ್ವೀಟ್‌ ಮಾಡಿ ಪ್ರತಿಕ್ರಿಯಿಸಿರುವ ಎಂ.ಬಿ.ಪಾಟೀಲ ಅವರು, ಗುಜರಾತಿಗೆ ಕೊಟ್ಟಂತೆ ಮೊದಲು ಸಬ್ಸಿಡಿ ಕೊಡಿ. ಆ ನಂತರ ರಾಜ್ಯದ ಪಾಲಿನ ಶೇ.20ರಷ್ಟು ಸಬ್ಸಿಡಿ ಕೊಡುತ್ತೇವೆ. ಈ ಭರವಸೆಯಿಂದ ಕುಮಾರಸ್ವಾಮಿ ಹಿಂದೆ ಸರಿಯುವುದಿಲ್ಲ ಎನ್ನವ ವಿಶ್ವಾಸ ಕೂಡ ಇದೆ ಎಂದು ಹೇಳಿದ್ದಾರೆ.

ಯಾವುದೇ ಉದ್ದಿಮೆ ಇರಲಿ, ಕೇಂದ್ರ ಸರಕಾರವು ಎಲ್ಲ ರಾಜ್ಯಗಳಿಗೂ ಸಮಾನ ನೀತಿ ಅನುಸರಿಸಬೇಕು ಎನ್ನುವುದು ಕರ್ನಾಟಕದ ಪ್ರತಿಪಾದನೆಯಾಗಿದೆ. ಇದು ಸಹಜನ್ಯಾಯದ ತತ್ವವಾಗಿದ್ದು, ಇದನ್ನು ಕುಮಾರಸ್ವಾಮಿ ಅವರು ಅರ್ಥ ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರ ಉದ್ಯಮ ಸ್ನೇಹಿ ನೀತಿಗಳನ್ನು ಅನುಸರಿಸುತ್ತಿದೆ. ಆದರೆ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರಣದಿಂದಾಗಿ ಗುಜರಾತ್ ಪರ ಧೋರಣೆ ತೋರಿಸುತ್ತಿದೆ. ನಾವು ಇದನ್ನಷ್ಟೇ ಪ್ರಶ್ನೆ ಮಾಡುತ್ತಿದ್ದೇವೆ ಎಂದು ವಿವರಿಸಿದ್ದಾರೆ.