ಬೆಂಗಳೂರು ಮೂಲದ ಚಿನ್ನದ ದೈತ್ಯ 'ರಾಜೇಶ್ ಎಕ್ಸ್‌ಪೋರ್ಟ್ಸ್' ₹15.15 ಲಕ್ಷ ಕೋಟಿ ಮೊತ್ತದ ನಕಲಿ ಆದಾಯ ಸೃಷ್ಟಿಸಿದ ಆರೋಪದ ಮೇಲೆ 'ಸೆಬಿ' ತನಿಖೆಗೆ ಒಳಗಾಗಿದೆ. ಬೃಹತ್ ಹಣಕಾಸು ಅಕ್ರಮದ ಹಿನ್ನೆಲೆಯಲ್ಲಿ, ಸೆಬಿಯು ಕಂಪನಿ ಮತ್ತು ಅದರ ಪ್ರವರ್ತಕ ರಾಜೇಶ್ ಮೆಹ್ತಾ ಅವರನ್ನು ಷೇರು ಮಾರುಕಟ್ಟೆಯಿಂದ ನಿಷೇಧಿಸಿದೆ.

ಬೆಂಗಳೂರು (ಜೂ.4): ದೇಶದ ಐಟಿ ರಾಜಧಾನಿ ಬೆಂಗಳೂರನ್ನು ಪ್ರಧಾನ ಕಚೇರಿಯನ್ನಾಗಿ ಮಾಡಿಕೊಂಡು, ಜಾಗತಿಕ ಮಟ್ಟದಲ್ಲಿ ಚಿನ್ನದ ದೈತ್ಯ ಸಾಮ್ರಾಜ್ಯವನ್ನು ಕಟ್ಟಿದ್ದ 'ರಾಜೇಶ್ ಎಕ್ಸ್‌ಪೋರ್ಟ್ಸ್' (Rajesh Exports) ಕಂಪನಿಯ ಯಶೋಗಾಥೆಗೆ ಈಗ ದೇಶದ ಅತಿ ದೊಡ್ಡ ಹಣಕಾಸು ಅಕ್ರಮದ ಕಲೆ ಅಂಟಿಕೊಂಡಿದೆ. ವರ್ಷಗಳಿಂದ ಭಾರತದ ಅತ್ಯಂತ ಯಶಸ್ವಿ ಕಂಪನಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದ ಚಿನ್ ಸಂಸ್ಕರಣಾ ಮತ್ತು ಆಭರಣ ರಫ್ತು ಸಂಸ್ಥೆ, ಈಗ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ 'ಸೆಬಿ' (SEBI) ತನಿಖೆಯ ಬಲೆಯಲ್ಲಿ ಸಿಲುಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೂನ್ 3 ರಂದು ಹೊರಡಿಸಿರುವ ತನ್ನ ಮಧ್ಯಂತರ ಆದೇಶದಲ್ಲಿ ಸೆಬಿ, ರಾಜೇಶ್ ಎಕ್ಸ್‌ಪೋರ್ಟ್ಸ್ ಕಂಪನಿ ಹಾಗೂ ಅದರ ಪ್ರವರ್ತಕ ಮತ್ತು ಅಧ್ಯಕ್ಷರಾದ ರಾಜೇಶ್ ಮೆಹ್ತಾ ಅವರ ಮೇಲೆ ಷೇರು ಮಾರುಕಟ್ಟೆ ಪ್ರವೇಶಿಸದಂತೆ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧ ಹೇರಿದೆ. ಕಂಪನಿಯು ಕಳೆದ 5 ಹಣಕಾಸು ವರ್ಷಗಳಲ್ಲಿ ಬರೋಬ್ಬರಿ ₹15.15 ಲಕ್ಷ ಕೋಟಿ ಮೊತ್ತದ ಆದಾಯವನ್ನು ನಕಲಿಯಾಗಿ ಸೃಷ್ಟಿಸಿ, ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿದೆ ಎಂದು ಸೆಬಿ ಅತ್ಯಂತ ಗಂಭೀರವಾಗಿ ಆರೋಪಿಸಿದೆ. ಈ ಮೊತ್ತ ಎಷ್ಟೊಂದು ಬೃಹತ್ ಆಗಿದೆಯೆಂದರೆ, ಜಗತ್ತಿನ ಹಲವು ಸಣ್ಣ ದೇಶಗಳ ವಾರ್ಷಿಕ ಆರ್ಥಿಕ ಉತ್ಪಾದನೆಗಿಂತಲೂ (GDP) ಇದು ಹೆಚ್ಚಾಗಿದೆ. ಈ ಆದೇಶ ಹೊರಬೀಳುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ಕಾರ್ಪೊರೇಟ್ ಆಡಳಿತ, ಆಡಿಟರ್‌ಗಳ ಜವಾಬ್ದಾರಿ ಹಾಗೂ ಹೂಡಿಕೆದಾರರ ಸುರಕ್ಷತೆಯ ಕುರಿತು ದೊಡ್ಡ ಪ್ರಶ್ನೆಗಳು ಎದ್ದಿವೆ.

ತನಿಖೆಯ ಕಿಡಿ ಹೊತ್ತಿಸಿದ್ದು ಹೇಗೆ?

ಈ ಇಡೀ ವಿವಾದದ ಆರಂಭವಾಗಿದ್ದು 2024ರ ಮಾರ್ಚ್ 11 ರಂದು ಸೆಬಿಗೆ ಬಂದ ಒಬ್ಬ ಸಾಮಾನ್ಯ ಷೇರುದಾರನ ದೂರಿನಿಂದ. ಕಂಪನಿಯು ತನ್ನ ಲೆಕ್ಕಪತ್ರದಲ್ಲಿ ತೋರಿಸಿದ್ದ ಬೃಹತ್ ಪ್ರಮಾಣದ 'ವ್ಯಾಪಾರ ಬಾಕಿ ಮೊತ್ತ' (Trade Receivables) ಕಳೆದ ಎರಡು ವರ್ಷಗಳಿಂದ ಹಾಗೇ ವಸೂಲಾಗದೆ ಉಳಿದಿರುವುದನ್ನು ಆ ದೂರುದಾರ ಪ್ರಶ್ನಿಸಿದ್ದ. ಸಾಮಾನ್ಯವಾಗಿ ಇಷ್ಟು ಸುದೀರ್ಘ ಕಾಲ ಹಣ ಬಾಕಿ ಉಳಿದಿರುವುದು ಕಂಪನಿಯ ವಸೂಲಾತಿ ಸಾಮರ್ಥ್ಯದ ಕೊರತೆ ಅಥವಾ ಲೆಕ್ಕಪತ್ರದಲ್ಲಿನ ಅಕ್ರಮದ ಮುನ್ಸೂಚನೆಯಾಗಿರುತ್ತದೆ.

ದೂರನ್ನು ಗಂಭೀರವಾಗಿ ಪರಿಗಣಿಸಿದ ಸೆಬಿ, 2024ರ ಅಕ್ಟೋಬರ್‌ನಲ್ಲಿ ತನಿಖಾ ಅಧಿಕಾರಿಯನ್ನು ನೇಮಿಸಿತು. ತದನಂತರ ಕಂಪನಿಯ ಪುಸ್ತಕಗಳು ಮತ್ತು ಆರ್ಥಿಕ ವರದಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು 'ಬಿಡಿಒ' (BDO) ಎಂಬ ಪ್ರಖ್ಯಾತ ಫಾರೆನ್ಸಿಕ್‌ ಆಡಿಟರ್‌ ಸಂಸ್ಥೆಯನ್ನು ಕಣಕ್ಕಿಳಿಸಿತು. ಇದರ ಫಲವಾಗಿ ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಸುದೀರ್ಘವಾದ ಕಾರ್ಪೊರೇಟ್ ತನಿಖೆ ಆರಂಭವಾಯಿತು.

ಏನಿದು ₹15.15 ಲಕ್ಷ ಕೋಟಿಯ ಮಹಾ ವಂಚನೆ

ಸೆಬಿ ಆದೇಶದ ಕೇಂದ್ರಬಿಂದುವೇ ಈ ಆದಾಯದ ವ್ಯತ್ಯಾಸ. ನಿಯಂತ್ರಕ ಸಂಸ್ಥೆಯ ಪ್ರಕಾರ, ಹಣಕಾಸು ವರ್ಷ 2021 ರಿಂದ 2025ರ ನಡುವೆ ರಾಜೇಶ್ ಎಕ್ಸ್‌ಪೋರ್ಟ್ಸ್ ತೋರಿಸಿದ ಒಟ್ಟು ಆದಾಯದ ಶೇ. 97 ರಿಂದ ಶೇ. 99 ರಷ್ಟು ಭಾಗ ಅದರ ವಿದೇಶಿ ಅಂಗಸಂಸ್ಥೆಗಳಿಂದಲೇ ಬಂದಿತ್ತು. ಇದರಲ್ಲಿ ಅತ್ಯಂತ ಪ್ರಮುಖವಾದದ್ದು ಸ್ವಿಟ್ಜರ್ಲೆಂಡ್ ಮೂಲದ ಗೋಲ್ಡ್ ರಿಫೈನರಿ ಕಂಪನಿ 'ವ್ಯಾಲ್ಕಂಬಿ ಎಸ್‌ಎ' (Valcambi SA). ಇದನ್ನು ರಾಜೇಶ್ ಎಕ್ಸ್‌ಪೋರ್ಟ್ಸ್ ವರ್ಷಗಳ ಹಿಂದೆ ಸ್ವಾಧೀನಪಡಿಸಿಕೊಂಡಿತ್ತು ಮತ್ತು ಇದುವೇ ಕಂಪನಿಯ ಅಂತರರಾಷ್ಟ್ರೀಯ ವ್ಯವಹಾರದ ಬೆನ್ನೆಲುಬಾಗಿತ್ತು.

ಆದರೆ, ವಿಧಿವಿಜ್ಞಾನ ಆಡಿಟರ್‌ಗಳು ವ್ಯಾಲ್ಕಂಬಿ ಹಾಗೂ ಇತರ ವಿದೇಶಿ ಅಂಗಸಂಸ್ಥೆಗಳ ಮೂಲ ದಾಖಲೆಗಳನ್ನು ಪರಿಶೀಲಿಸಿದಾಗ ಆಘಾತಕಾರಿ ಸತ್ಯ ಹೊರಬಂದಿದೆ. ಮುಖ್ಯ ಕಂಪನಿಯಾದ ರಾಜೇಶ್ ಎಕ್ಸ್‌ಪೋರ್ಟ್ಸ್ ಗ್ರೂಪ್ ಮಟ್ಟದಲ್ಲಿ ತೋರಿಸಿದ ಬೃಹತ್ ಆದಾಯಕ್ಕೂ, ಆಯಾ ಅಂಗಸಂಸ್ಥೆಗಳ ದಾಖಲೆಗಳಲ್ಲಿ ಕಂಡುಬಂದ ನೈಜ ಆದಾಯಕ್ಕೂ ಯಾವುದೇ ಸಾಮ್ಯತೆ ಇರಲಿಲ್ಲ. 5 ವರ್ಷಗಳ ಅವಧಿಯಲ್ಲಿ ಒಟ್ಟು ₹15.15 lakh ಕೋಟಿ ಆದಾಯಕ್ಕೆ ಯಾವುದೇ ಸೂಕ್ತ ಪುರಾವೆಗಳೇ ಸಿಗಲಿಲ್ಲ. ಅಂದರೆ, ಕಂಪನಿ ತೋರಿಸಿದ ಬಹುಪಾಲು ಆದಾಯ ಕೇವಲ ಕಾಗದದ ಮೇಲಷ್ಟೇ ಇತ್ತು. ಇದು ಸಾಬೀತಾದರೆ ಭಾರತದ ಕಾರ್ಪೊರೇಟ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಆದಾಯ ವಂಚನೆ ಪ್ರಕರಣವಾಗಲಿದೆ.

ದಾಖಲೆಗಳನ್ನು ಬಚ್ಚಿಟ್ಟು ತನಿಖೆಗೆ ಅಸಹಕಾರ

ಈ ತನಿಖೆ ಇಷ್ಟೊಂದು ಕಠಿಣವಾಗಲು ಕಂಪನಿಯ ನಡವಳಿಕೆಯೇ ಕಾರಣ ಎಂದು ಸೆಬಿ ಹೇಳಿದೆ. ತನಿಖಾಧಿಕಾರಿಗಳು ಮತ್ತು ವಿಧಿವಿಜ್ಞಾನ ಆಡಿಟರ್‌ಗಳು ಕೇಳಿದ ಪ್ರಮುಖ ಗ್ರಾಹಕರ ವಿವರಗಳು, ವೆಂಡರ್ಸ್ ಮಾಹಿತಿ ಹಾಗೂ ಪ್ರಮುಖ ಅಂಗಸಂಸ್ಥೆಗಳ ಹಣಕಾಸು ವರದಿಗಳನ್ನು ನೀಡಲು ಕಂಪನಿ ನಿರಾಕರಿಸಿತು. ಅಪೂರ್ಣ ಮಾಹಿತಿ, ಹಾದಿ ತಪ್ಪಿಸುವ ವರದಿಗಳು ಹಾಗೂ ತನಿಖೆಗೆ ಅಸಹಕಾರ ತೋರಿದ್ದರಿಂದ ಆಡಿಟರ್‌ಗಳು ಲಭ್ಯವಿದ್ದ ಅರೆಬರೆ ದಾಖಲೆಗಳಲ್ಲೇ ವರದಿ ಸಿದ್ಧಪಡಿಸಬೇಕಾಯಿತು. ಇದರಿಂದಾಗಿ ಕಂಪನಿಯ ಹಲವು ನಗದು ವರ್ಗಾವಣೆಗಳ ಸತ್ಯಾಸತ್ಯತೆಯನ್ನು ಪತ್ತೆಹಚ್ಚುವುದು ಕಷ್ಟವಾಯಿತು.

ಆಫ್ರಿಕನ್ ಚಿನ್ನದ ಗಣಿ ಮತ್ತು ಅಫ್ಲುಯೆನ್ಸ್ ಶೇರ್ಸ್ ರಹಸ್ಯ

ಕೇವಲ ಆದಾಯವಷ್ಟೇ ಅಲ್ಲದೆ ಸೆಬಿ ತನಿಖೆಯಲ್ಲಿ ಇನ್ನೂ ಎರಡು ಪ್ರಮುಖ ಅಕ್ರಮಗಳು ಪತ್ತೆಯಾಗಿವೆ

ಆಫ್ರಿಕನ್ ಚಿನ್ನದ ಗಣಿ ಹೂಡಿಕೆ: ಆಫ್ರಿಕಾದಲ್ಲಿರುವ ಚಿನ್ನದ ಗಣಿಗಾರಿಕೆ ಆಸ್ತಿಗಳ ಮೇಲೆ ತಾನು ₹1,035 ಕೋಟಿ ಹೂಡಿಕೆ ಮಾಡಿರುವುದಾಗಿ ರಾಜೇಶ್ ಎಕ್ಸ್‌ಪೋರ್ಟ್ಸ್ ಹೇಳಿಕೊಂಡಿತ್ತು. ಆದರೆ ಈ ಹೂಡಿಕೆಯ ಅಸ್ತಿತ್ವ, ಮೌಲ್ಯಮಾಪನ ವರದಿ ಅಥವಾ ಯಾವುದೇ ಪೂರಕ ಪುರಾವೆಗಳನ್ನು ನೀಡಲು ಕಂಪನಿ ವಿಫಲವಾಗಿದೆ. ಇದರಿಂದ ಕಂಪನಿಯ ಬ್ಯಾಲೆನ್ಸ್ ಶೀಟ್‌ನಲ್ಲಿ ಆಸ್ತಿಗಳ ಮೌಲ್ಯವನ್ನು ಸುಳ್ಳಾಗಿ ಹೆಚ್ಚಿಸಿ ತೋರಿಸಲಾಗಿದೆಯೇ ಎಂಬ ಸಂಶಯ ಮೂಡಿದೆ.

ಅಫ್ಲುಯೆನ್ಸ್ ಶೇರ್ಸ್ ವಹಿವಾಟು: ಕಂಪನಿಯು 'ಅಫ್ಲುಯೆನ್ಸ್ ಶೇರ್ಸ್ ಅಂಡ್ ಸ್ಟಾಕ್ಸ್ ಪ್ರೈವೇಟ್ ಲಿಮಿಟೆಡ್' (Affluence Shares and Stocks Pvt. Ltd.) ಎಂಬ ಸಂಸ್ಥೆಯೊಂದಿಗೆ ₹11,487 ಕೋಟಿ ಮೌಲ್ಯದ ಮಾರಾಟ ಮತ್ತು ₹11,488 ಕೋಟಿ ಮೌಲ್ಯದ ಖರೀದಿ ವಹಿವಾಟು ನಡೆಸಿರುವುದಾಗಿ ಲೆಕ್ಕ ತೋರಿಸಿತ್ತು. ಆದರೆ ತನಿಖೆ ವೇಳೆ ಅಫ್ಲುಯೆನ್ಸ್ ಸಂಸ್ಥೆಯು, "ರಾಜೇಶ್ ಎಕ್ಸ್‌ಪೋರ್ಟ್ಸ್ ನಮಗೆ ಗ್ರಾಹಕರೇ ಅಲ್ಲ, ನಮ್ಮ ನಡುವೆ ಅಂತಹ ಯಾವುದೇ ಒಪ್ಪಂದ ನಡೆದಿಲ್ಲ" ಎಂದು ಹೇಳಿಕೆ ನೀಡಿ ಕಂಪನಿಯ ಮುಖವಾಡ ಕಳಚಿದೆ.

ಜೊತೆಗೆ, ಕಂಪನಿಯ ₹7.4 ಕೋಟಿ ಹಣವನ್ನು ಬೋರ್ಡ್ ಅನುಮತಿಯಿಲ್ಲದೆ ಪ್ರವರ್ತಕ ರಾಜೇಶ್ ಮೆಹ್ತಾ ಅವರ ವೈಯಕ್ತಿಕ ಖಾತೆಗೆ ವರ್ಗಾಯಿಸಿ, ಅದನ್ನು ಅವರ ವೈಯಕ್ತಿಕ ಷೇರು ಮಾರುಕಟ್ಟೆ ಟ್ರೇಡಿಂಗ್‌ಗೆ (Derivative Trading) ಬಳಸಲಾಗಿತ್ತು ಎಂಬ ಗಂಭೀರ ಆರೋಪವೂ ಇದೆ.

ರಾಜೇಶ್ ಎಕ್ಸ್‌ಪೋರ್ಟ್ಸ್ ನೀಡಿದ ಸ್ಪಷ್ಟನೆ ಏನು?

ಈ ಎಲ್ಲಾ ಆರೋಪಗಳನ್ನು ರಾಜೇಶ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್ ಸಂಪೂರ್ಣವಾಗಿ ತಳ್ಳಿಹಾಕಿದೆ. ಕಂಪನಿ ಪ್ರಕಟಣೆ ಹೊರಡಿಸಿ, "ಸೆಬಿ ನೀಡಿರುವುದು ಕೇವಲ ಮಧ್ಯಂತರ ಆದೇಶವಾಗಿದ್ದು, ಸಂಸ್ಥೆಯು ಘೋಷಿಸಿರುವ ಆದಾಯವೆಲ್ಲವೂ ನೂರಕ್ಕೆ ನೂರು ಸರಿಯಾಗಿದೆ. ಆದಾಯವನ್ನು ಹೆಚ್ಚಿಸಿ ತೋರಿಸಲಾಗಿಲ್ಲ. ಸೆಬಿ ಮತ್ತು ಕಂಪನಿಯ ನಡುವೆ ಕಮ್ಯುನಿಕೇಷನ್ ಗ್ಯಾಪ್ (ಮಾಹಿತಿ ಕೊರತೆ) ಹಾಗೂ ಗೊಂದಲ ಉಂಟಾಗಿದೆ. ಶೀಘ್ರದಲ್ಲೇ ಅಗತ್ಯವಿರುವ ಎಲ್ಲಾ ಮೂಲ ದಾಖಲೆಗಳನ್ನು ಸೆಬಿಗೆ ಸಲ್ಲಿಸಿ ನಮ್ಮ ಮೇಲಿನ ಎಲ್ಲಾ ಗೊಂದಲಗಳನ್ನು ಪರಿಹರಿಸಿಕೊಳ್ಳಲಿದ್ದೇವೆ" ಎಂದು ತಿಳಿಸಿದೆ.

ಷೇರು ಮಾರುಕಟ್ಟೆಯಲ್ಲಿ ತೀವ್ರ ಪೆಟ್ಟು

ಸೆಬಿ ಆದೇಶ ಹೊರಬೀಳುತ್ತಿದ್ದಂತೆ ರಾಜೇಶ್ ಎಕ್ಸ್‌ಪೋರ್ಟ್ಸ್ ಷೇರುಗಳು ಶೇ. 5 ರಷ್ಟು ಲೋವರ್ ಸರ್ಕ್ಯೂಟ್ ತಲುಪಿದವು. ಕಳೆದ 3 ವರ್ಷಗಳಿಂದಲೇ ಕಂಪನಿಯ ಷೇರುಗಳು ಶೇ. 80 ಕ್ಕಿಂತ ಹೆಚ್ಚು ಮೌಲ್ಯವನ್ನು ಕಳೆದುಕೊಂಡು ತೀವ್ರ ಒತ್ತಡದಲ್ಲಿದ್ದವು. ಸದ್ಯಕ್ಕೆ ಇದು ಮಧ್ಯಂತರ ಆದೇಶವಾಗಿದ್ದು, ಅಂತಿಮ ತೀರ್ಪು ಬರಲು ಸಮಯ ಹಿಡಿಯಬಹುದು. ಕಂಪನಿಗೆ ತನ್ನ ರಕ್ಷಣೆ ಮಾಡಿಕೊಳ್ಳಲು ಅವಕಾಶವಿದೆ. ಆದರೆ ಒಂದು ವೇಳೆ ಸೆಬಿ ಹೊರಿಸಿರುವ ಆರೋಪಗಳು ಅಂತಿಮ ತನಿಖೆಯಲ್ಲಿ ಸಾಬೀತಾದರೆ, ಕಂಪನಿಗೆ ಬೃಹತ್ ದಂಡ, ಕಠಿಣ ಮಾರುಕಟ್ಟೆ ನಿಷೇಧ ಹಾಗೂ ಕ್ರಿಮಿನಲ್ ಕಾನೂನು ಕ್ರಮ ಎದುರಿಸಬೇಕಾಗಬಹುದು.