ಬಿಡದೇ ಸುರಿದ ಮಳೆಗೆ ಅಡಕೆ ಮರಗಳು ಧರೆಗೆ ಉರುಳಿದ್ದವು. ಜೊತೆಗೆ ಬೆಳೆಯೂ ಪೂರ್ತಿ ನಾಶವಾಗಿತ್ತು. ಮೂರು ತಿಂಗಳು ಮಾಡಬೇಕಾದ ಅಡಕೆ ಕುಯ್ಲು ಒಂದೂವರೇ ತಿಂಗಳಲ್ಲಿ ಮುಗಿಯುವಷ್ಟು ಫಸಲು ಕಮ್ಮಿಯಾಗಿದೆ. ಹೇಗಪ್ಪಾ ಜೀವನ ನಡೆಸುವುದು ಎಂಬ ಆತಂಕದಲ್ಲಿದ್ದ ಅಡಕೆ ಬೆಳೆಗಾರರಿಗೆ ಇಲ್ಲೊಂದು ತುಸು ರಿಲ್ಯಾಕ್ಸ್ ನೀಡುವ ಸುದ್ದಿ ಇದೆ.

ಶಿವಮೊಗ್ಗ (ಫೆ.4) ಬಹುತೇಕ ಕಳೆದೊಂದು ವರ್ಷದಿಂದ ಕ್ವಿಂಟಲ್‌ಗೆ 35 ಸಾವಿರ ಆಸುಪಾಸಿನಲ್ಲಿರುವ ರಾಶಿ ಇಡಿ ಅಡಕೆ ಧಾರಣೆ ಇದೀಗ ಒಂದೇ ವಾರದಲ್ಲಿ ದಿಢೀರನೆ 2 ಸಾವಿರ ಹೆಚ್ಚಳವಾಗಿದ್ದು, 37 ಸಾವಿರ ಗಡಿ ದಾಟಿದೆ. ಹೀಗಾಗಿ ಶೀಘ್ರದಲ್ಲಿಯೇ ಶಿವಮೊಗ್ಗದಲ್ಲಿ ಕ್ವಿಂಟಲ್‌ಗೆ 40 ಸಾವಿರ ಗಡಿ ದಾಟುವ ಸಾಧ್ಯತೆಯೂ ಇದೆ. ರೈತರ ಬೆಳೆ ಕೈಗೆ ಬರುವ ವೇಳೆಯಲ್ಲಿ ಈ ಧಾರಣೆ ಏರಿಕೆ ನಿಜಕ್ಕೂ ರೈತರಿಗೆ ವರದಾನವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏಪ್ರಿಲ್‌, ಮೇನಲ್ಲಿ ಧಾರಣೆ ಏರಿಕೆ ಸಾಮಾನ್ಯ. ಆಗ ಬಹುತೇಕ ಸಣ್ಣ ರೈತರು ಅಡಕೆಯನ್ನು ಮಾರಾಟ ಮಾಡಿರುತ್ತಾರೆ. ಉಳ್ಳವರು ಮಾತ್ರ ವರ್ಷದ ಕೊನೆಯವರೆಗೂ ಉಳಿಸಿಕೊಂಡು ಲಾಭ ಮಾಡಿಕೊಳ್ಳುತ್ತಾರೆ. ಆದರೆ, ಈ ಬಾರಿ ರೈತರಿಗೆ ಫಸಲು ಕೈಗೆ ಬರುವ ವೇಳೆಯಲ್ಲೇ ಧಾರಣೆ ಏರಿಕೆ ಹೊಸ ಹರುಷ ಮೂಡಿದೆ.

ಅಡಕೆ ಕೂಯ್ಲಲು ಬಂದಿದೆ ಹೈಟೆಕ್ ದೋಟಿ

ಈ ಬಾರಿ ಭಾರೀ ಮಳೆಯಿಂದ ಬಹುತೇಕ ಅಡಕೆ ತೋಟ ಕೊಳೆ ರೋಗಕ್ಕೆ ತುತ್ತಾಗಿದ್ದವು. ಕಳೆದ ಬೇಸಿಗೆಯಲ್ಲಿ ಬಿರು ಬಸಿಲಿನಿಂದ ಹರಳು ಉದುರಿತ್ತು. ಇದೆಲ್ಲದರ ಒಟ್ಟಾರೆ ಪರಿಣಾಮ ಈ ಬಾರಿ ಸಾಮಾನ್ಯವಾಗಿ ಎಲ್ಲ ತೋಟಗಳಲ್ಲಿಯೂ ಫಸಲು ಕಡಿಮೆ ಇದೆ. ಇದರಿಂದ ರೈತರು ಆತಂಕದಲ್ಲಿಯೇ ಇದ್ದರು. ಇತ್ತ ಫಸಲೂ ಇಲ್ಲ, ಧಾರಣೆಯೂ ಇಲ್ಲ ಎನ್ನುವಂತಹ ಪರಿಸ್ಥಿತಿಯಲ್ಲಿದ್ದರು.

ಭಾರೀ ಮಳೆಯಿಂದಾಗಿ ಉತ್ಪಾದನೆಯಲ್ಲಿ ಕುಸಿತ, ವಿದೇಶದಿಂದ ಆಮದಾಗುತ್ತಿದ್ದ ಅಡಕೆ ನಿಲುಗಡೆ ಮತ್ತು ಗುಟ್ಕಾ ವ್ಯಾಪಾರಿಗಳಲ್ಲಿ ಸ್ಟಾಕ್‌ ಕಡಿಮೆಯಾಗಿದ್ದು ಈ ಅಡಕೆ ಬೆಳೆ ಹೆಚ್ಚಳಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಮಲೆನಾಡಲ್ಲಿ ಉದ್ಯೋಗ ಸೃಷ್ಟಿಗೆ ಹೊಸ ಕಲ್ಪನೆ