ದಂಡ ಕಟ್ಟಿದರೂ ಕಪ್ಪುಹಣ ಇದ್ದವರಿಗಿನ್ನು ಉಳಿಗಾಲವಿಲ್ಲ!
ವಿದೇಶದಲ್ಲಿ ಕಪ್ಪುಹಣ ಇಟ್ಟವರು ಇನ್ನು ದಂಡ ಕಟ್ಟಿದ್ರೂ ಬಚಾವಿಲ್ಲ| ನಿನ್ನೆಯಿಂದ ಹೊಸ ತೆರಿಗೆ ನೀತಿ ಜಾರಿಗೆ| ದಂಡದ ಜೊತೆಗೆ ವಿಚಾರಣೆ ಎದುರಿಸಬೇಕು
ಮುಂಬೈ[ಜೂ.18]: ತೆರಿಗೆ ವಂಚಕರ ವಿರುದ್ಧದ ತನಿಖೆಗೆ ಅವಕಾಶ ನೀಡುವ ಕಾನೂನುಗಳನ್ನು ಕೇಂದ್ರ ಸರ್ಕಾರ ಜೂನ್ 17ರಿಂದಲೇ ಜಾರಿಗೆ ಬರುವಂತೆ ಮತ್ತಷ್ಟುಕಠಿಣಗೊಳಿಸಿದೆ. ಹೀಗಾಗಿ ಜೂನ್ 17ರ ಬಳಿಕ ಯಾವುದೇ ಭಾರತೀಯ ವ್ಯಕ್ತಿ ವಿದೇಶದಲ್ಲಿ ತಾನು ಹೊಂದಿರುವ ಆಸ್ತಿ, ಹಣದ ಕುರಿತು ಮಾಹಿತಿ ಬಹಿರಂಗ ಮಾಡದೇ ಇದ್ದಲ್ಲಿ ಅಥವಾ ಮಾಡಿದಲ್ಲಿ ದಂಡದ ಜೊತೆಗೆ ವಿಚಾರಣೆಯನ್ನೂ ಎದುರಿಸಬೇಕಾಗುತ್ತದೆ.
2014ರಲ್ಲಿ ಕೇಂದ್ರ ನೇರ ತೆರಿಗೆ ಮಂಡಳಿ ಜಾರಿಗೆ ತಂದಿದ್ದ ನಿಯಮಗಳ ಅನ್ವಯ, ಯಾವುದೇ ಭಾರತೀಯ ವ್ಯಕ್ತಿ ವಿದೇಶದಲ್ಲಿ ತಾನು ಹೊಂದಿರುವ ಬ್ಯಾಂಕ್ ಖಾತೆ ಮತ್ತು ವಿದೇಶ ಆಸ್ತಿಗಳ ಕುರಿತು ಸುಳ್ಳು ಮಾಹಿತಿ ನೀಡಿ ಸಿಕ್ಕಿಬಿದ್ದಿದ್ದರೆ, ಬಳಿಕ ಅದಕ್ಕೆ ಸೂಕ್ತ ತೆರಿಗೆ, ದಂಡ ಮತ್ತು ಬಡ್ಡಿ ಕಟ್ಟಿಬಚಾವ್ ಆಗಬಹುದಿತ್ತು. ತೆರಿಗೆ ವಿವಾದವನ್ನು ಚುಕ್ತಾ ಮಾಡಿಕೊಳ್ಳಬಹುದಿತ್ತು. ಆದರೆ ಕಪ್ಪು ಹಣ ತಡೆ ಕಾಯ್ದೆದಲ್ಲಿ ಇದಕ್ಕೆ ಅವಕಾಶ ಇರಲಿಲ್ಲ. ಆದರೆ ಸರ್ಕಾರ ನಿಗದಿಪಡಿಸಿದ ಕಾಲಮಿತಿಯಲ್ಲಿ ಇಂಥ ಬೇನಾಮಿ ಆಸ್ತಿ ಮತ್ತು ಕಪ್ಪುಹಣ ಘೋಷಣೆಗೆ ಅವಕಾಶವಿತ್ತು. ಆದರೆ ಇಂಥ ಯಾವುದೇ ತೆರಿಗೆ ವಿವಾದ ಚುಕ್ತಾಕ್ಕೆ ಅವಕಾಶ ನೀಡುವ ಎಲ್ಲಾ ಅಂಶಗಳನ್ನು ತೆಗೆದು ಹಾಕಿದ ಪರಿಷ್ಕೃತ ಕಾನೂನುಗಳನ್ನು ತೆರಿಗೆ ಸಿದ್ಧಪಡಿಸಿದ್ದು ಅದು ಜೂನ್ 17ರಿಂದ ಜಾರಿಗೆ ಬಂದಿದೆ.
ಹೀಗಾಗಿ ಇನ್ನು ಮುಂದೆ ವಿದೇಶಿ ಬ್ಯಾಂಕ್ ಖಾತೆ, ಆಸ್ತಿ ಪ್ರಕರಣಗಳ ಜೊತೆಗೆ ಬೇರೆಯವರಿಗೆ ತೆರಿಗೆ ವಂಚಿಸಲು ನೆರವು ನೀಡಿದ, ನಕಲಿ ಇನ್ವಾಯ್್ಸಗಳನ್ನು ಸೃಷ್ಟಿಸಿ ವಹಿವಾಟು ತೋರಿಸಿದ, ನಕಲಿ ಖರೀದಿ ದಾಖಲೆ ಸೃಷ್ಟಿಸಿದ ಪ್ರಕರಣಗಳು ತನಿಖೆಯ ವ್ಯಾಪ್ತಿಗೆ ಒಳಪಡಲಿದೆ.