ಮೊದಲ ದಿನದ ಬ್ಯಾಂಕ್ ಮುಷ್ಕರ: ಬ್ಯಾಂಕಿಂಗ್ ಸೇವೆ ಸಂಪೂರ್ಣ ಸ್ತಬ್ಧ!
ಮೊದಲ ದಿನದ ಬ್ಯಾಂಕ್ ಮುಷ್ಕರ: ಬ್ಯಾಂಕಿಂಗ್ ಸೇವೆ ಸಂಪೂರ್ಣ ಸ್ತಬ್ಧ| ಇಂದು ಕೂಡ ಮುಂದುವರಿಯಲಿದೆ ಮುಷ್ಕರ
ನವದೆಹಲಿ(ಮಾ.16): ಸಾರ್ವಜನಿಕ ವಲಯದ ಬ್ಯಾಂಕ್ಗಳ ಖಾಸಗೀಕರಣ ವಿರೋಧಿಸಿ ಕರೆÜ ನೀಡಲಾದ ಎರಡು ದಿನಗಳ ಬ್ಯಾಂಕ್ ಮುಷ್ಕರದಿಂದಾಗಿ ಸೋಮವಾರ ದೇಶದೆಲ್ಲೆಡೆ ಬ್ಯಾಂಕಿಂಗ್ ಸೇವೆ ವ್ಯತ್ಯಯಗೊಂಡಿದೆ. 10 ಲಕ್ಷ ಉದ್ಯೋಗಿಗಳು (ಶೇ.90ರಷ್ಟು) ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.
ಇದರಿಂದಾಗಿ ಹಣ ವಿತ್ಡ್ರಾ ಮಾಡಲು, ಚೆಕ್ ಪಾವತಿಸಲು, ಹಣಕಾಸು ವರ್ಗಾವಣೆಗೆ ಜನರು ಪರದಾಡಬೇಕಾಯಿತು. ಮಂಗಳವಾರೂ ಬ್ಯಾಂಕ್ ಮುಷ್ಕರ ಮುಂದುವರಿಯಲಿರುವ ಹಿನ್ನೆಲೆಯಲ್ಲಿ ಬ್ಯಾಂಕಿಂಗ್ ಸೇವೆಗಳಲ್ಲಿ ಇನ್ನಷ್ಟುವ್ಯತ್ಯಯ ಆಗುವ ಎಲ್ಲಾ ಸಾಧ್ಯತೆ ಇದೆ.
ಇದೇ ವೇಳೆ ಸಾರ್ವಜನಿಕ ವಲಯದ ಬ್ಯಾಂಕ್ ನೌಕರರರು ವಿವಿಧೆಡೆ ರಾರಯಲಿಗಳಲ್ಲಿ ಭಾಗಿಯಾಗಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ದೇಶದೆಲ್ಲೆಡೆ ಬ್ಯಾಂಕ್ ಮುಷ್ಕರ ಯಶಸ್ವಿಯಾಗಿದೆ. ಒಂದು ವೇಳೆ ಸರ್ಕಾರ ನಮ್ಮ ಬೇಡಿಕೆಗೆ ಮಣಿಯದೇ ಇದ್ದರೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸೌಮ್ಯ ದತ್ತಾ ಹೇಳಿದ್ದಾರೆ.
ಕೇಂದ್ರ ಸರ್ಕಾರ ಸಾರ್ವಜನಿಕ ವಲಯದ ಎರಡು ಬ್ಯಾಂಕುಗಳ ಖಾಸಗಿಕರಣಕ್ಕೆ ಉದ್ದೇಶಿಸಿರುವುದನ್ನು ವಿರೋಧಿಸಿ ಬ್ಯಾಂಕ್ ಯೂನಿಯನ್ಗಳ ಸಂಯುಕ್ತ ವೇದಿಕೆ (ಯುಎಫ್ಬಿಯು) ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದ್ದು, 10 ಲಕ್ಷಕ್ಕೂ ಅಧಿಕ ಉದ್ಯೋಗಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿಕೊಂಡಿದೆ.
ಮಾ.13ರಂದು ಎರಡನೇ ಶನಿವಾರ ಹಾಗೂ ಮಾ.14ರಂದು ಭಾನುವಾರ ಆಗಿದ್ದ ಕಾರಣ ಬ್ಯಾಂಕ್ ಇರಲಿಲ್ಲ. ಎರಡು ದಿನಗಳ ಮುಷ್ಕರದಿಂದಾಗಿ ಒಟ್ಟಾರೆ ನಾಲ್ಕು ದಿನಗಳ ಕಾಲ ಬ್ಯಾಂಗಳು ಬಂದ್ ಆಗಿರಲಿವೆ.