ಕೇಂದ್ರದಿಂದ ರೈತರಿಗೆ ಬಂಪರ್ ಕೊಡುಗೆ| ಸಚಿವ ಸಂಪುಟ ಬಳಿಕ ಕೇಂದ್ರ ಸಚಿವರ ಜಂಟಿ ಸುದ್ದಿಗೋಷ್ಠಿ| ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ವಿಸ್ತರಣೆ| ಎಲ್ಲಾ ರೈತರಿಗೂ ಕಿಸಾನ್ ಸಮ್ಮಾನ್ ಯೋಜನೆ ವಿಸ್ತರಣೆಗೆ ಅಸ್ತು| 15 ಕೋಟಿ ರೈತ ಕುಟುಂಬಗಳಿಗೆ ಕಿಸಾನ್ ಸಮ್ಮಾನ್ ಯೋಜನೆ ವಿಸ್ತರಣೆ|
ನವದೆಹಲಿ(ಮೇ.31): ಪ್ರಧಾನಿ ಮೋದಿ 2.0 ಸರ್ಕಾರ ಅಧಿಕೃತವಾಗಿ ಕಾರ್ಯಾರಂಭ ಮಾಡಿದೆ. ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೇ ಕಾರ್ಯೋನ್ಮುಖರಾಗಿರುವ ಪ್ರಧಾನಿ ಮೋದಿ, ತಮ್ಮ ಮೊದಲ ಸಂಪುಟ ಸಭೆಯಲ್ಲಿ ಭರ್ಜರಿ ಕೊಡುಗೆಗಳನ್ನು ಘೋಷಿಸಿದ್ದಾರೆ.
ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಈ ಹಿಂದೆ ಘೋಷಿಸಲಾಗಿದ್ದ ವಾರ್ಷಿಕ 6,000 ರೂ. ಸಹಾಯಧನವನ್ನು ಎಲ್ಲಾ ರೈತರಿಗೆ ವಿಸ್ತರಿಸಿ ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ.
ಇದರಿಂದ ದೇಶದ ಸುಮಾರು 15 ಕೋಟಿ ರೈತರಿಗೆ ಅನುಕೂಲವಾಗಲಿದ್ದು, ಒಟ್ಟು ಮೂರು ಕಂತುಗಳಲ್ಲಿ ವಾರ್ಷಿಕ 6,000 ರೂ ಸಹಾಯಧನ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇನ್ನು ಕೇಂದ್ರದ ಈ ನಿರ್ಧಾರದಿಂದ ಬೊಕ್ಕಸಕ್ಕೆ ವಾರ್ಷಿಕ 87,217.50 ಕೋಟಿ ರೂ. ಹೊರೆ ಬೀಳಲಿದ್ದು, ರೈತರ ಆರ್ಥಿಕ ಸ್ಥಿತಿ ಸುಧಾರಿಸುವ ತನ್ನ ವಾಗ್ದಾನಕ್ಕೆ ಬದ್ಧ ಎಂಬ ಸಂದೇಶವನ್ನು ಮೋದಿ ಸರ್ಕಾರ ರವಾನಿಸಿದೆ.
ಇದೇ ವೇಳೆ ವ್ಯಾಪಾರಸ್ಥರಿಗೆ ಪಿಂಚಣಿ ಯೋಜನೆ ಘೋಷಿಸಿರುವ ಮೋದಿ ಸರ್ಕಾರ, ದೇಶದ ಸುಮಾರು 3 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಭರ್ಜರಿ ಕೊಡುಗೆ ನೀಡಿದೆ.
