Asianet Suvarna News Asianet Suvarna News

ಗಣಿಗಾರಿಕೆ ರಾಜಸ್ವ ಸಂಗ್ರಹದಲ್ಲಿ ಶೇ. 145 ಸಾಧನೆ: ಕರ್ನಾಟಕಕ್ಕೆ 5 ಸ್ಟಾರ್‌ ರೇಟಿಂಗ್‌, ಆಚಾರ್‌

2021-22ರಲ್ಲಿ .4357 ಕೋಟಿ ಗುರಿ ಪೈಕಿ 6308 ಕೋಟಿ ರಾಜಸ್ವ ಸಂಗ್ರಹ

Karnataka Got 5 Star Rating in Revenue Collection in India  Says Halappa Achar grg
Author
Bengaluru, First Published Jul 20, 2022, 10:20 PM IST | Last Updated Jul 20, 2022, 10:20 PM IST

ಅಮರೇಶ್ವರಸ್ವಾಮಿ ಕಂದಗಲ್ಲಮಠ

ಕುಕನೂರು(ಜು.20):  ರಾಜ್ಯದ ಗಣಿಗಾರಿಕೆ ಮತ್ತು ಭೂ ವಿಜ್ಞಾನ ಇಲಾಖೆ ಕಳೆದ ವರ್ಷಕ್ಕಿಂತ ಹೆಚ್ಚು ರಾಜಸ್ವ ಸಂಗ್ರಹ ಮಾಡಿ ಗಣಿಗಾರಿಕೆಯಲ್ಲಿ ಗಣನೀಯ ಸಾಧನೆ ಮಾಡಿದೆ. 2021-22ರಲ್ಲಿ 4357 ಕೋಟಿ ಸಂಗ್ರಹದ ಗುರಿ ಹೊಂದಿದ್ದರೆ ಗುರಿಗಿಂತ ಶೇ. 45ರಷ್ಟು ಹೆಚ್ಚು ಆದಾಯ ಸಂಗ್ರಹಿಸಿದೆ. ಬರೋಬ್ಬರಿ 6308 ಕೋಟಿ ರಾಜಸ್ವ ಸಂಗ್ರಹಿಸಿದೆ. 2020- 21ರಲ್ಲಿ .3893 ಕೋಟಿ ಆದಾಯ ಸಂಗ್ರಹಿಸಿದ್ದರೆ ಕಳೆದ ವರ್ಷಕ್ಕಿಂದ ಶೇ. 62ರಷ್ಟು ಹೆಚ್ಚಿಗೆ ಅಂದರೆ ಬರೋಬ್ಬರಿ .2414.87 ಕೋಟಿ ಆದಾಯ ಹೆಚ್ಚಿಗೆ ಸಂಗ್ರಹಿಸಿದೆ. 2017- 18 ರಲ್ಲಿ .2746.26 ಕೋಟಿ, 2018-19ರಲ್ಲಿ .3026.42 ಕೋಟಿ, 2019- 20ರಲ್ಲಿ .3629.02 ಕೋಟಿ, 2020-21ರಲ್ಲಿ .3893 ಕೋಟಿ, 2021- 22ರಲ್ಲಿ .6308 ಕೋಟಿ ರಾಜಸ್ವ ಸಂಗ್ರಹಿಸಲಾಗಿದೆ.

ಎಂಎಂಡಿಆರ್‌(ಮೈನ್ಸ್‌ ಆ್ಯಂಡ್‌ ಮಿನರಲ್‌ ಡೆವಲಪ್‌ಮೆಂಟ್‌ ರೆಗ್ಯುಲೇಷನ್‌ ಆ್ಯಕ್ಟ್) ಕಾಯ್ದೆ ತಿದ್ದಪಡಿ ನಂತರ ರಾಷ್ಟ್ರದಲ್ಲಿ ಗಣಿಗಾರಿಕೆ ಬ್ಲಾಕ್‌ ಹರಾಜು ಮಾಡಿದ 1ನೇ ರಾಜ್ಯ ಕರ್ನಾಟಕ ಆಗಿದೆ. ಹರಾಜಾದ ಗಣಿಗಾರಿಕೆ ಬ್ಲಾಕ್‌ಗಳನ್ನು ಕಾರ್ಯಗತಗೊಳಿಸಲು ಕರ್ನಾಟಕ ದೇಶದಲ್ಲಿ 1ನೇ ಸ್ಥಾನದಲ್ಲಿದೆ. ಗಣಿಗಾರಿಕೆಯ ಗುತ್ತಿಗೆ ಅವಧಿ ಮುಗಿಯುವ ಮುನ್ನವೇ ಹರಾಜು ಪ್ರಕಿಯೆ ಆರಂಭಿಸಿದ ದೇಶದ 1ನೇ ರಾಜ್ಯ ಕರ್ನಾಟಕ ಆಗಿದೆ. 

ಕರ್ನಾಟಕದಲ್ಲಿ ಮೊದಲ ಬಾರಿಗೆ ರಾಜಸ್ವ ಕೊರತೆ..!

2021- 22ರಲ್ಲಿ ಬರೋಬ್ಬರಿ 27 ಬ್ಲಾಕ್‌ಗಳನ್ನು ಹರಾಜಿಗೆ ಹಾಕಿದ್ದು, ರಾಜ್ಯದಲ್ಲಿ ಯಾವ ವರ್ಷವೂ ಇಷ್ಟೋಂದು ಹರಾಜು ಪ್ರಕ್ರಿಯೆ ಆಗಿಲ್ಲ. ರಾಜ್ಯದಲ್ಲಿ ಇದುವರೆಗೂ ಎನ್‌ಎಂಇಟಿ(ನ್ಯಾಷನಲ್‌ ಮಿನರಲ್‌ ಎಕ್ಸಫೆಲೕರೇಷನ್‌ ಟ್ರಸ್ಟ್‌) ನಿಧಿಗೆ ನೀಡದ ಕೊಡುಗೆಯನ್ನು ರಾಜ್ಯ ಗಣಿಗಾರಿಕೆ ಇಲಾಖೆ ಈ ವರ್ಷ ನೀಡಿದೆ. .52.54 ಕೋಟಿ ಕೊಡುಗೆ ನೀಡಿದೆ. ಕರ್ನಾಟಕ ಗಣಿಗಾರಿಕೆ ಪರಿಶೋಧನಾ ವಿಭಾಗ ಬಲಪಡಿಸಲು .4 ಕೋಟಿ ವೆಚ್ಚಲ್ಲಿ ಪ್ರಯೋಗಾಲಯ ಹಾಗೂ ತಾಂತ್ರಿಕ ಸಲಹೆಗಾರರು, ಸಲಹೆಗಾರರ ನೇಮಕಾತಿ ಮಾಡಿದೆ. ಖನಿಜ ಬ್ಲಾಕ್‌ಗಳ ಹರಾಜು ವೇಗಗೊಳಿಸಲು ಗಣಿಗಾರಿಕೆ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಜಂಟಿ ಕಾರ್ಯಕಾರಿ ಗುಂಪನ್ನು ಬಳಸಿಕೊಳ್ಳುತ್ತಿದೆ.

ಗಣಿಗಾರಿಕೆ ಹಾಗು ಖನಿಜ ಆಡಳಿತದಲ್ಲಿ ಸುಪ್ರೀಂ ಕೋರ್ಟ್‌ ಹಲವು ನಿರ್ಬಂಧಗಳ ಆದೇಶ ಇದ್ದರೂ ಅವುಗಳ ಹೊರತಾಗಿ ಕರ್ನಾಟಕ ಗಣಿ ಇಲಾಖೆ ಗಣನೀಯ ಸಾಧನೆ ಮಾಡುತ್ತಿದೆ. ಅಲ್ಲದೆ ಕೇಂದ್ರ ಗಣಿ ಸಚಿವಾಲಯ ರಾಜ್ಯಕ್ಕೆ 2019- 20 ಮತ್ತು 2020- 21ನೇ ಸಾಲಿನ ಕಬ್ಬಿಣದ ಅದಿರು, ಸುಣ್ಣದ ಕಲ್ಲು, ಬಾಕ್ಸೈಟ್‌ಗಳ ವಿಭಾಗದಲ್ಲಿ ಖನಿಜಾನ್ವೇಷಣೆ, ಬ್ಲಾಕ್‌ಗಳ ಹರಾಜು ಮತ್ತು ಗಣಿಗಾರಿಕೆ ಪ್ರಾರಂಭಿಸುವಲ್ಲಿ ಮಾಡಿದ ಸಾಧನೆಗಾಗಿ ‘ರಾಷ್ಟ್ರೀಯ ಖನಿಜ ವಿಕಾಸ ಪುರಸ್ಕಾರ’ ತೃತೀಯ ಬಹುಮಾನ ಪಡೆದಿದೆ.

ಕೇಂದ್ರ ಗಣಿ ಸಚಿವಾಲಯವು ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಖನಿಜ ಬ್ಲಾಕ್‌ ಹರಾಜು ಪ್ರಕ್ರಿಯೆಗೊಳಪಡಿಸಿದ ಕಾರಣಕ್ಕಾಗಿ .2.05 ಕೋಟಿಗಳ ಪ್ರೋತ್ಸಾಹಧನವನ್ನು ನೀಡಿದೆ ಎಂದು ಸಚಿವ ಹಾಲಪ್ಪ ಆಚಾರ್‌ ಅವರು ಇತ್ತೀಚೆಗೆ ತಿಳಿಸಿದ್ದಾರೆ. 

ಪಿಎಂ ಸ್ವನಿಧಿ ಸಾಲಕ್ಕೆ ಸಿಬಿಲ್‌ ಸ್ಕೋರ್‌ ವಿನಾಯಿತಿ: ಜಗದೀಶ್‌ ಶೆಟ್ಟರ್‌

ಕರ್ನಾಟಕ ರಾಜ್ಯ ಉತ್ತಮ ಗಣಿ ಚಟುವಟಿಕೆ ನಿರ್ವಹಣೆ ಮಾಡುತ್ತಿರುವ ಕಾರಣ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡಲಾಗುವ 5- ಸ್ಟಾರ್‌ ರೇಟಿಂಗ್‌ ಪಡೆದ ತಲಾ 8 ಗಣಿ ಮೂಲಕ ಗುಜರಾತ್‌ ರಾಜ್ಯದೊಂದಿಗೆ ಪ್ರಥಮ ಸ್ಥಾನವನ್ನು ಹಂಚಿಕೊಂಡಿದೆ. ಕೇಂದ್ರ ಗಣಿ ಸಚಿವಾಲಯ 6 ಖನಿಜ ಬ್ಲಾಕ್‌ಗಳ ಭೂವೈಜ್ಞಾನಿಕ ವರದಿಗಳನ್ನು ಸಹ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಿದೆ. ಸದ್ಯದಲ್ಲಿಯೇ ಅವುಗಳನ್ನು ಹರಾಜು ಪ್ರಕ್ರಿಯೆಗೆ ಸಹ ಜರುಗಲಿದೆ. 5 ಚಿನ್ನ ಮತ್ತು 1 ಸುಣ್ಣದ ಕಲ್ಲು ಖನಿಜ ಬ್ಲಾಕ್‌ಗಳ ವರದಿಯನ್ನು ರಾಜ್ಯಕ್ಕೆ ನೀಡಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಸರ್ಕಾರ ನಿಗದಿಪಡಿಸಿದ ಗುರಿಗಿಂತ ಹೆಚ್ಚು ಸಾಧನೆ ಮಾಡಲಾಗಿದೆ. ರಾಜಸ್ವ ಸಂಗ್ರಹಣೆಯಲ್ಲಿ ಶೇ. 145ರಷ್ಟು ಸಾಧನೆ ಮಾಡಲಾಗಿದೆ. ಸರ್ಕಾರ ನೀಡಿದ ಇಲಾಖೆ ಜವಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ಹಾಗೂ ರಾಜ್ಯ ಸರ್ಕಾರಕ್ಕೆ ಇಲಾಖೆಯಿಂದ ಹೆಸರು ತರಲು ಪ್ರಾಮಾಣಿಕವಾಗಿ, ಶಿಸ್ತುಬದ್ಧವಾಗಿ ಶ್ರಮಿಸುತ್ತಿದ್ದೇನೆ. ಗಣಿ ಆದಾಯ ಸೋರಿಕೆ ಆಗದಂತೆ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಅಂತ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್‌ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios