Asianet Suvarna News Asianet Suvarna News

Karnataka Budget 2022-23:ಮಹಿಳಾ ಸಬಲೀಕರಣಕ್ಕೆ ಒತ್ತು; ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ಹಲವು ಕ್ರಮ

*ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಟ್ಟು 4,713 ಕೋಟಿ ರೂ. ಅನುದಾನ
*ವಿಧವಾ ವೇತನ, ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೆ ಮಾಸಿಕ ಪಿಂಚಣಿ ಹೆಚ್ಚಳ
*ಸಂಕಷ್ಟದಲ್ಲಿರೋ ಹೆಣ್ಣುಮಕ್ಕಳಿಗೆ 6 ಅನುಪಾಲನಾ ಕೇಂದ್ರಗಳ ಸ್ಥಾಪನೆ
*ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ

Karnataka Budget 2022-23 CM Basavaraj Bommai given importance to women empowerment and eradication of malnutrition in children
Author
Bangalore, First Published Mar 4, 2022, 3:11 PM IST

ಬೆಂಗಳೂರು (ಮಾ.4): ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಶುಕ್ರವಾರ (ಮಾ.4) ಮಂಡಿಸಿದ ಕರ್ನಾಟಕ ರಾಜ್ಯದ 2022-23ನೇ ಆರ್ಥಿಕ ಸಾಲಿನ  ಬಜೆಟ್ ನಲ್ಲಿ( (karnataka budget 2022-23) ಮಹಿಳಾ ಸಬಲೀಕರಣ ಮತ್ತು ಮಕ್ಕಳ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಟ್ಟು  4,713 ಕೋಟಿ ರೂ. ಅನುದಾನವನ್ನು ಬಜೆಟ್ ನಲ್ಲಿ ಮೀಸಲಿಡಲಾಗಿದೆ. 

ಮಹಿಳಾ ಉದ್ದೇಶಿತ ಯೋಜನೆಗಳಿಗೆ 43,188 ಕೋಟಿ ರೂ.
ಮಹಿಳೆಯರ ಸಂರಕ್ಷಣೆ ಹಾಗೂ ಆರ್ಥಿಕ ಸ್ವಾವಲಂಬನೆಗೆ ಸರ್ಕಾರ ಹೆಚ್ಚಿನ ಮಹತ್ವ ನೀಡಿದೆ ಎಂದು ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು, ಮಹಿಳಾ ಉದ್ದೇಶಿತ ಯೋಜನೆಗಳಿಗೆ 2022-23ನೇ ಸಾಲಿನ ಬಜೆಟ್ ನಲ್ಲಿ ಒಟ್ಟು 43,188 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು. 

ಕರ್ನಾಟಕ ರಾಜ್ಯ ಬಜೆಟ್ 2022-23 ಲೈವ್ ಅಪ್ಡೇಟ್ಸ್.ಇಲ್ಲಿ ಕ್ಲಿಕಿಸಿ

ಮಕ್ಕಳ ಯೋಜನೆಗಳಿಗೆ 40,944 ಕೋಟಿ ರೂ. 
ಸ್ವಸ್ಥ ಹಾಗೂ ಸುಶಿಕ್ಷಿತ ಸಮಾಜ ನಿರ್ಮಾಣ ಮತ್ತು ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸೋ ಉದ್ದೇಶದಿಂದ ರಾಜ್ಯ ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ಮಕ್ಕಳ ಉದ್ದೇಶಿತ ಯೋಜನೆಗಳಿಗೆ 40,944 ಕೋಟಿ ರೂ. ಅನುದಾನ ಮೀಸಲಿರಿಸಿದೆ. 

ಮಾಸಿಕ ಪಿಂಚಣಿ ಹೆಚ್ಚಳ
ವಿಧವಾ ವೇತನ, ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೆ ಮಾಸಿಕ ಪಿಂಚಣಿಯನ್ನು  800 ರೂ.ಗೆ ಹೆಚ್ಚಳ ಮಾಡಲಾಗಿದೆ. ಇದರ ಜೊತೆಗೆ ವಿಚ್ಛೇದಿತ, ಅವಿವಾಹಿತ ಮಹಿಳೆಯರ ಮಾಸಿಕ ಪಿಂಚಣಿಯನ್ನು ಕೂಡ 800ರೂ.ಗೆ ಹೆಚ್ಚಿಸಲಾಗಿದೆ. ಈ ಹಿಂದೆ ಈ ಪಿಂಚಣಿ 600 ರೂ. ಇತ್ತು. ಆಸಿಡ್ ದಾಳಿಗೊಳಗಾದ ಮಹಿಳೆಯರ ಪಿಂಚಣಿ 3 ಸಾವಿರದಿಂದ 10 ಸಾವಿರ ರೂ.ಗೆ ಹೆಚ್ಚಳ ಮಾಡಲಾಗಿದೆ. 

ರೈತ ಮಹಿಳೆಯರಿಗೆ ಪ್ರೋತ್ಸಾಹ
ರೈತ ಮಹಿಳೆಯರನ್ನು ಪ್ರೋತ್ಸಾಹಿಸಲು ಕೃಷಿ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿಗಳನ್ನು ಸರ್ಕಾರ ಘೋಷಿಸಿದೆ.

ಉದ್ಯೋಗಸ್ಥ ಮಹಿಳೆಯರಿಗೆ ವಸತಿ ನಿಲಯ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು ಹಾಗೂ ಕಲಬುರಗಿಯಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ವಸತಿ ನಿಲಯಗಳನ್ನು ಸ್ಥಾಪಿಸಲಾಗೋದು. ಇದರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತುಅಲ್ಪಸಂಖ್ಯಾತ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು.

ಹೆಣ್ಣುಮಕ್ಕಳ ಅನುಪಾಲನಾ ಕೇಂದ್ರ
18 ವರ್ಷ ಪೂರ್ಣಗೊಂಡ ಸಂಕಷ್ಟದಲ್ಲಿರುವ ಹೆಣ್ಣುಮಕ್ಕಳ ವಿದ್ಯಾಭ್ಯಾಸ ಹಾಗೂ ವೃತ್ತಿಪರ ಕೌಶಲ್ಯ ತರಬೇತಿಗೆ ಸ್ವಯಂಸೇವಾ ಸಂಸ್ಥೆ ನೆರವಿನೊಂದಿಗೆ ಪ್ರಾಯೋಗಿಕವಾಗಿ ಹೆಣ್ಣು ಮಕ್ಕಳ ಆರು  ಅನುಪಾಲನಾ ಗೃಹಗಳನ್ನು ಸ್ಥಾಪಿಸಲಾಗೋದು.

ಮೈಸೂರಿನ ಶಕ್ತಿಧಾಮಕ್ಕೆ ವಿಶೇಷ ನೆರವು
ಮಹಿಳೆ ಮತ್ತು ಮಕ್ಕಳಿಗೆ ಸಂಬಂಧಿಸಿ ಉತ್ತಮ ಕೆಲಸ ಮಾಡುತ್ತಿರುವ ಧಾರವಾಡದ ಕರ್ನಾಟಕ ಕ್ಯಾನ್ಸರ್ ಇನ್ಸಿಟಿಟ್ಯೂಟ್,ಬೆಂಗಳೂರಿನ ಬಸವನಗುಡಿಯ   ಅಮೃತ ಶಿಶು ನಿವಾಸ ತಾಯಿ ಮತ್ತು
ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬಸವ ಕಲ್ಯಾಣದಲ್ಲಿರುವ ಶ್ರೀ ನೀರಜಿ ಭುವ ವಿಸ್ವಸ್ಥ ನಿಧಿ ಹಾಗೂ ಮೈಸೂರಿನ ಶಕ್ತಿಧಾಮಸಂಸ್ಥೆಗಳಿಗೆ ವಿಶೇಷ ನೆರವು ನೀಡಲಾಗುವುದು. 

ಸ್ಫೂರ್ತಿ ಯೋಜನೆ ವಿಸ್ತರಣೆ
ಬಾಲ್ಯ ವಿವಾಹ ತಡೆ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿರೋ ಸ್ಫೂರ್ತಿ ಯೋಜನೆಯನ್ನು ಬೇರೆ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು. 

Karnataka Budget 2022-23: ನಿರೀಕ್ಷೆಯಂತೆಯೇ ಬಜೆಟ್‌ನಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್

ಮಹಿಳಾ ಉದ್ಯಮಿಗಳಿಗೆ 10ಲಕ್ಷ ರೂ. ನೇರ ಸಾಲ
KITS ವತಿಯಿಂದ 'ಎಲಿವೇಟ್' ಯೋಜನೆಯಡಿ ಗುರುತಿಸಲ್ಪಟ್ಟ ಮಹಿಳಾ ಉದ್ಯಮಿಗಳು, ಮಹಿಳೆ ನೇತೃತ್ವದ ಸ್ಟಾರ್ಟ್ ಅಪ್‌ಗಳಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 10ಲಕ್ಷ ರೂ. ನೇರ ಸಾಲ ಸೌಲಭ್ಯ ಒದಗಿಸಲಾಗೋದು.

ಶಿಶುಪಾಲನಾ ಕೇಂದ್ರ
ಪ್ರತಿ ಜಿಲ್ಲೆಯಲ್ಲಿ ಎರಡು ತಾಲೂಕು ಕೇಂದ್ರಗಳಲ್ಲಿ ಅತೀಹೆಚ್ಚು ಮಹಿಳಾ ಕಾರ್ಮಿಕರ ಸಾಂದ್ರತೆಯಿರೋ ಪ್ರದೇಶಗಳಲ್ಲಿ ಶಿಶುಪಾಲನಾ ಕೇಂದ್ರಗಳ ಸ್ಥಾಪನೆ. ಹಾಗೆಯೇ ದುಡಿಯುವ ಮಹಿಳೆಯರ ಮಕ್ಕಳ ಪಾಲನೆಗೆ ರಾಜ್ಯದ 5 ತಾಲೂಕುಗಳಲ್ಲಿ ಮಹಾತ್ಮ ಗಾಂಧಿ ಎನ್.ಆರ್.ಇ.ಜಿ.ಎ ಯೋಜನೆ ಸಹಭಾಗಿತ್ವದಲ್ಲಿ ಶಿಶುಪಾಲನಾ ಕೇಂದ್ರಗಳ ಪ್ರಾಯೋಗಿಕ ಅನುಷ್ಠಾನ ಮಾಡಲಾಗೋದು.

ಅಪೌಷ್ಟಿಕತೆ ನಿವಾರಣೆಗೆ ಕ್ರಮ
*6 ತಿಂಗಳಿಂದ 3 ವರ್ಷದ ತೀವ್ರ ಅಪೌಷ್ಟಿಕ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ, ಚುಚ್ಚುಮದ್ದು, ಆರೋಗ್ಯ ತಪಾಸಣೆ ಜೊತೆಗೆ ಕ್ಷೀರಭಾಗ್ಯದಡಿ ಕೆನೆಭರಿತ ಹಾಲಿನ ಪುಡಿ 52 ಲಕ್ಷ ಫಲಾನುಭವಿಗಳಿಗೆ
ಒದಗಿಸಲಾಗುತ್ತಿದೆ.
*3ರಿಂದ 6 ವರ್ಷ ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು  300 ದಿನಗಳ ಬಿಸಿಯೂಟದ ಜೊತೆಗೆ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ಹಾಗೂ ಹಾಲು ಒದಗಿಸಲಾಗುತ್ತಿದೆ.
*'ಪೌಷ್ಟಿಕ ಕರ್ನಾಟಕ'ವೆಂಬ ಹೊಸ ಯೋಜನೆಯಡಿ  93 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ 14 ಜಿಲ್ಲೆಗಳಲ್ಲಿ ಕಬ್ಬಿಣ, ಪೋಲಿಕ್ ಆಮ್ಲ ವಿಟಮಿನ್ ಬಿ-12 ಸೇರ್ಪಡೆಗೊಳಿಸಿದ ಸಾರವರ್ಧಿತ ಅಕ್ಕಿಯನ್ನು ಪ್ರಾಯೋಗಿಕವಾಗಿ ವಿತರಿಸಲಾಗೋದು.
*ರಾಜ್ಯದಲ್ಲಿ ಪೌಷ್ಟಿಕತಾ ಸಮೀಕ್ಷೆ ಕೈಗೊಳ್ಳಲಾಗೋದು.

ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ
20 ವರ್ಷಕ್ಕಿಂತ ಹೆಚ್ಚು ವರ್ಷ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ 1,500ರೂ., 10-20 ವರ್ಷ ಸೇವೆ ಸಲ್ಲಿಸಿದವರಿಗೆ 1,250ರೂ., 10ಕ್ಕಿಂತ ಕಡಿಮೆ ವರ್ಷ ಸೇವೆ ಸಲ್ಲಿಸಿದವರಿಗೆ 1,000ರೂ. ಹೆಚ್ಚಿಸಲಾಗೋದು. ಎನ್.ಪಿ.ಎಸ್. ಲೈಟ್ ಯೋಜನೆಯಿಂದ ವಂಚಿತರಾದ ಅಂಗನವಾಡಿ ಕಾರ್ಯಕರ್ತೆಯರಿಗೆ 50 ಸಾವಿರ ರೂ., ಅಂಗನವಾಡಿ ಸಹಾಯಕಿಯರಿಗೆ 30 ಸಾವಿರ ರೂ. ಇಡಿಗಂಟು ಪಾವತಿಸಲು ನಿರ್ಧಾರ. 


 

Follow Us:
Download App:
  • android
  • ios