* ಮಹಾಮಾರಿ ಕೊರೋನಾ ವೈರಸ್‌ ಸೃಷ್ಟಿಸಿದ ಆರ್ಥಿಕ ಸಂಕಷ್ಟ* 2021ನೇ ಆರ್ಥಿಕ ವರ್ಷದಲ್ಲಿ ದೇಶಾದ್ಯಂತ ಶೇ.25ರಷ್ಟು ರೆಸ್ಟೋರೆಂಟ್‌ಗಳು ಬಂದ್‌ 

ನವದೆಹಲಿ(ಅ.27): ಮಹಾಮಾರಿ ಕೊರೋನಾ ವೈರಸ್‌ ಸೃಷ್ಟಿಸಿದ ಆರ್ಥಿಕ ಸಂಕಷ್ಟದಿಂದ 2021ನೇ ಆರ್ಥಿಕ ವರ್ಷದಲ್ಲಿ ದೇಶಾದ್ಯಂತ ಶೇ.25ರಷ್ಟುರೆಸ್ಟೋರೆಂಟ್‌ಗಳು ಬಂದ್‌ ಆಗಿರುವ ಸಾಧ್ಯತೆಯಿದೆ. ಅಲ್ಲದೆ ಈ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಕನಿಷ್ಠ 23 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.

Add Asianetnews Kannada as a Preferred SourcegooglePreferred

ಭಾರತದ ರಾಷ್ಟ್ರೀಯ ರೆಸ್ಟೋರೆಂಟ್‌ ಅಸೋಸಿಯೇಷನ್‌(ಎನ್‌ಆರ್‌ಎಐ) ಮತ್ತು ವ್ಯವಸ್ಥಾಪನೆ ಸಲಹಾ ಕಂಪನಿಯಾಗಿರುವ ಟೆಕ್ನೋಪಾರ್ಕ್ ಅಧ್ಯಯನ ನಡೆಸಿದೆ. ಈ ಪ್ರಕಾರ ಕೊರೋನಾ ಕಾರಣದಿಂದಾಗಿ ಒಂದು ವರ್ಷದ ಅವಧಿಯಲ್ಲಿ ಸರಾಸರಿ 100 ದಿನಗಳ ಕಾಲ ಹೋಟೆಲ್‌ ತೆರೆಯಲು ಅವಕಾಶ ನೀಡಿರಲಿಲ್ಲ. ಇದರಿಂದ ಆರ್ಥಿಕ ಸಂಕಷ್ಟಕ್ಕೀಡಾದ ಹೋಟೆಲ್‌ ಉದ್ಯಮಗಳು ಮುಚ್ಚಿ ಹೋಗಿವೆ.

2020ರ ಮಾಚ್‌ರ್‍ನಲ್ಲಿ ಕೋವಿಡ್‌ ಶಕೆ ಆರಂಭವಾದ ಬಳಿಕ 2020ರ ಆರ್ಥಿಕ ವರ್ಷದ 3ನೇ ತ್ರೈಮಾಸಿಕ ಅವಧಿಯಲ್ಲಿ ಭಾರತದಲ್ಲಿ ರೆಸ್ಟೋರೆಂಟ್‌ ಮತ್ತು ಹೋಟೆಲ್‌ಗಳ ಸಂಖ್ಯೆ ಕುಸಿತ ಆರಂಭವಾಯಿತು. ಏಪ್ರಿಲ್‌ ನಂತರದ ಅವಧಿಯಲ್ಲಿ ಆಹಾರ ಉದ್ಯಮದ ಶೇ.90ರಷ್ಟುಮಾರಾಟ ಕುಸಿತ ಕಂಡಿತು ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಪ್ರತಿಕ್ರಿಯಿಸಿದ ಎನ್‌ಆರ್‌ಎಐ ಅಧ್ಯಕ್ಷ ಕಬೀರ್‌ ಸೂರಿ ಅವರು, ‘2021ರ ಆರ್ಥಿಕ ವರ್ಷದಲ್ಲಿ ಭಾರತದ ಆಹಾರ ಸೇವೆ ಉದ್ಯಮ 4.95 ಲಕ್ಷ ಕೋಟಿ ರು. ವರಮಾನದ ಗುರಿ ಹಾಕಿಕೊಂಡಿತ್ತು. ಆದರೆ ಈ ಪೈಕಿ ಈ ವರ್ಷದಲ್ಲಿ ಶೇ.40ರಷ್ಟುಗುರಿ ಮಾತ್ರವೇ ತಲುಪಿದ್ದೇವೆ. 2022ನೇ ಆರ್ಥಿಕ ವರ್ಷದಲ್ಲಿ 5.48 ಲಕ್ಷ ಕೋಟಿ ವರಮಾನದ ಪೈಕಿ ಶೇ.85ರಷ್ಟುಗುರಿ ಮುಟ್ಟಲು ಯೋಜಿಸಲಾಗಿದೆ. ಹೀಗಾಗಿ ಸರ್ಕಾರದಿಂದ ನೆರವು ಪಡೆಯಲು ಈ ವರದಿಯು ಬಹುಮುಖ್ಯ ಪಾತ್ರ ವಹಿಸಲಿದೆ’ ಎಂದು ಹೇಳಿದರು.