ದೇಶದ ಆರ್ಥಿಕ ಬೆಳವಣಿಗೆ ಕುಂಠಿತಕ್ಕೆ ರಾಜನ್ ಕಾರಣ! ನೋಟು ನಿಷೇಧದಿಂದ ಆರ್ಥಿಕ ಬೆಳವಣಿಗೆ ಕುಂಠಿತವಾಗಿಲ್ಲ! ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅಭಿಮತ! ವಸೂಲಾಗದ ಸಾಲದ ಪ್ರಮಾಣ ಏರಿಕೆಗೆ ರಾಜನ್ ಕಾರಣ
ನವದೆಹಲಿ(ಸೆ.4): ದೇಶದ ಆರ್ಥಿಕ ಬೆಳವಣಿಗೆ ಇಳಿಮುಖವಾಗುವುದಕ್ಕೆ ಆರ್ಬಿಐ ನ ಮಾಜಿ ಗರ್ವನರ್ ರಘುರಾಮ್ ರಾಜನ್ ಅವರ ನೀತಿಗಳೇ ಕಾರಣವೇ ಹೊರತು ನೋಟು ನಿಷೇಧವಲ್ಲ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ.
ಆರ್ಥಿಕ ಬೆಳವಣಿಗೆ ಇಳಿಕೆಯಾಗುವುದಕ್ಕೆ ಎನ್ಪಿಎಗಳು ಹೆಚ್ಚುತ್ತಿರುವುದೂ ಸಹ ಕಾರಣವಾಗಿದೆ. ರಘುರಾಮ್ ರಾಜನ್ ಆರ್ಬಿಐ ಗನರ್ನರ್ ಆಗಿದ್ದ ವೇಳೆ ಜಾರಿಗೆ ತರಲಾಗಿದ್ದ ನಿಯಮಗಳಿಂದ ಬ್ಯಾಂಕಿಂಗ್ ಕ್ಷೇತ್ರ ಉದ್ಯಮ ವಲಯಕ್ಕೆ ಸಾಲ ನೀಡುವುದನ್ನು ನಿಲ್ಲಿಸುವಂತೆ ಮಾಡಿತ್ತು ಎಂದು ರಾಜೀವ್ ಕುಮಾರ್ ದೂರಿದ್ದಾರೆ.
ಒಟ್ಟು ವಸೂಲಾಗದ ಸಾಲ ಪ್ರಮಾಣ (ಜಿಎನ್ಪಿಎ) 2018 ರ ಜೂ.30 ವರೆಗೆ ಶೇ.11.52 ರಷ್ಟಿದ್ದು, ಮಾರ್ಚ್ 2019 ವೇಳೆಗೆ ಶೇ.10 ರಷ್ಟಾಗಲಿದೆ. ಬ್ಯಾಂಕಿಂಗ್ ಕ್ಷೇತ್ರದ ಅನುತ್ಪಾದಕ ಆಸ್ತಿ ಜೂನ್ ಅಂತ್ಯದ ವರೆಗೂ ಶೇ.5.92 ರಷ್ಟಿದ್ದು ವರ್ಷಾಂತ್ಯದ ವೇಳೆ ಶೇ.4.3 ರಷ್ಟಕ್ಕೆ ಇಳಿಯುವ ನಿರೀಕ್ಷೆ ಇದೆ. ವಸೂಲಾಗದೇ ಇರುವ ಸಾಲಕ್ಕೆ ಸಂಬಂಧಿಸಿದಂತೆ ಆರ್ಬಿಐ ನ್ನು ಸಂಸತ್ ಸಮಿತಿಯೂ ಪ್ರಶ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
