ಕಲ್ಲಿದ್ದಲು ಸರ್ಕಾರಕ್ಕೆ ಹರಾಜಿಂದ 7000 ಕೋಟಿ ರು. ಆದಾಯ!
ವಾಣಿಜ್ಯಿಕ ಕಲ್ಲಿದ್ದಲು ಹರಾಜಿಂದ 7000 ಕೋಟಿ ರು. ಆದಾಯ| 69 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ: ಜೋಶಿ
ನವದೆಹಲಿ(ನ.10): ವಾಣಿಜ್ಯಿಕ ಉದ್ದೇಶಕ್ಕೆ ಕಲ್ಲಿದ್ದಲು ಗಣಿಗಾರಿಕೆಗೆ ಅವಕಾಶ ನೀಡಿರುವ ಕೇಂದ್ರ ಸರ್ಕಾರ 19 ಕಲ್ಲಿದ್ದಲು ನಿಕ್ಷೇಪಗಳನ್ನು ಹರಾಜು ಹಾಕಿದ್ದು, ನಿಕ್ಷೇಪಗಳ ಬಿಡ್ಡಿಂಗ್ ಪಡೆಯಲು ಖಾಸಗಿ ಕಂಪನಿಗಳಿಂದ ಭಾರೀ ಪೈಪೋಟಿ ಏರ್ಪಟ್ಟಿದೆ.
ಈ ಹರಾಜಿನಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕ 7000 ಕೋಟಿ ರು. ಆದಾಯ ಹರಿದುಬರುವ ನಿರೀಕ್ಷೆ ಇದೆ. ಅಲ್ಲದೇ ಅವುಗಳ ಕಾರ್ಯನಿರ್ವಹಣೆ ಆರಂಭ ಆದ ಬಳಿಕ 69,000ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಆಗಲಿವೆ ಎಂದು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಸೋಮವಾರ ತಿಳಿಸಿದ್ದಾರೆ. ಜೂನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ 41 ಕಲ್ಲಿದ್ದಲು ನಿಕ್ಷೇಪಗಳ ಹರಾಜಿಗೆ ಚಾಲನೆ ನೀಡಿದ್ದರು.
ಈ ಪೈಕಿ 3 ನಿಕ್ಷೇಪಗಳಿಗೆ ಒಂದೇ ಬಿಡ್ಗಳು ಸಲ್ಲಿಕೆ ಆಗಿದ್ದವು. ಉಳಿದ 38 ಗಣಿಗಳ ಪೈಕಿ 19 ಗಣಿಗಳ ಹರಾಜು ಪ್ರಕ್ರಿಯೆ ಯಶಸ್ವಿಯಾಗಿದೆ. ಹರಾಜು ಪ್ರಕ್ರಿಯೆಯಲ್ಲಿ 42 ಕಂಪನಿಗಳು ಭಾಗವಹಿಸಿವೆ. ಇವು ಶೀಘ್ರವೇ ಕಾರಾರಯರಂಭ ಮಾಡಲಿವೆ. ನಂತರ ರಾಜ್ಯ ಸರ್ಕಾರಗಳಿಗೂ ಆದಾಯ ಹರಿದುಬರಲಿದೆ. ಹಾಗಾಗಿ ಬಿಡ್ಡರ್ಗಳಿಗೆ ರಾಜ್ಯ ಸರ್ಕಾರಗಳು ಸಹಕಾರ ನೀಡಬೇಕು ಎಂದು ಪ್ರಹ್ಲಾದ್ ಜೋಶಿ ಮನವಿ ಮಾಡಿದ್ದಾರೆ.
ಇದೇ ವೇಳೆ ಎಲ್ಲ ರೀತಿಯ ಕಲ್ಲಿದ್ದಲು ಆಮದನ್ನು ಮುಂದಿನ ವರ್ಷದಿಂದ ನಿಲ್ಲಿಸುವ ಸಾಧ್ಯತೆ ಇದೆ ಎಂದೂ ತಿಳಿಸಿದರು.