ಬ್ಯಾಂಕ್ಗೆ ವಂಚನೆ: ಮೂರು ಕಂಪನಿಗಳ ವಿರುದ್ದ ಸಿಬಿಐ ಕೇಸ್!
ಬ್ಯಾಂಕ್ಗೆ ವಂಚನೆ: ಮೂರು ಕಂಪನಿಗಳ ವಿರುದ್ದ ಕೇಸ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 136 ಕೋಟಿ ರೂ. ವಂಚನೆ
ಒಟ್ಟು ಮೂರು ಕಂಪನಿಗಳ ವಿರುದ್ದ ಕೇಸ್ ದಾಖಲಿಸಿದ ಸಿಬಿಐ
ನವದೆಹಲಿ(ಜು.11): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 136 ಕೋಟಿ ರೂ. ವಂಚಿಸಿದ ಹಿನ್ನೆಲೆಯಲ್ಲಿ ಮುಂಬೈ ಮೂಲದ ಮೂರು ಕಂಪನಿಗಳ ವಿರುದ್ದ ಸಿಬಿಐ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದೆ.
ಟಾಪ್ ವರ್ತ್ ಪೈಪ್ಸ್ ಅಂಡ್ ಟ್ಯೂಬ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾದ ಅಭಯ್ ಲೋಧಾ, ಶಿಶಿರ್ ಶಿವಾಜಿ ಹಿರಯ್, ಹರ್ಷರಾಜ್, ಶಾಂತಿಲಾಲ್ ಬಾಗ್ಮರ್ ವಿರುದ್ಧ ಸಿಬಿಐ ವಂಚನೆ ಪ್ರಕರಣ ದಾಖಲಿಸಿಕೊಂಡಿದೆ.
ಇನ್ನು ಡೆಪ್ಯುಟಿ ಮ್ಯಾನೇಜರ್ಗಳಾದ ತ್ಯಾಗರಾಜು, ವಿಲಾಸ್ ನರಹರ್ ಅಹಿರಾ, ಮಧುರಾ ಸಾವಂತ್ ವಿರುದ್ದ 56.81 ಕೋಟಿ ರೂ. ವಂಚನೆ ಆರೋಪ ಕೇಳಿ ಬಂದಿದ್ದು, ಅವರ ವಿರುದ್ದವೂ ಪ್ರಕರಣ ದಾಖಲಿಸಲಾಗಿದೆ.
ಮಹೀಪ್ ಮಾರ್ಕೆಂಟಿಂಗ್ ಪ್ರೈವೇಟ್ ಕಂಪನಿ ವಿರುದ್ಧ 2ನೇ ಪ್ರಕರಣ ದಾಖಲಾಗಿದ್ದು, ನಿರ್ದೇಶಕರುಗಳಾದ ಗಜೇಂದ್ರ ಸಂದಿಮ್, ಹೇಮಂತ್ ಸಾಂಘ್ವಿ ವಿರುದ್ಧ ಕೇಸ್ ದಾಖಲಾಗಿದೆ. ಇದೇ ವೇಳೆ ಹರ್ಷ ಸ್ಟೀಲ್ ಕಂಪನಿ ವಿರುದ್ಧ 3ನೇ ಕೇಸ್ ದಾಖಲಾಗಿದ್ದು, ನಿರ್ದೇಶಕರುಗಳಾದ, ಚೇತನ್ ಜಿತೇಂದ್ರ ಮೆಹ್ತಾ, ಮಹದೇವ ರಾಮಚಂದ್ರ ಶೃಂಗಾರೆ ಮತ್ತಿತರ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ,
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲೆಟರ್ಸ್ ಆಫ್ ಕ್ರೆಡಿಟ್ ಬಳಸಿಕೊಂಡು, ಬಿಲ್ ಡಿಸ್ಕೌಂಟ್ ಸೌಲಭ್ಯ ಬಳಸಿಕೊಂಡಿರುವ ಆರೋಪ ಕೇಳಿಬಂದಿದೆ. ಈ ಬಿಲ್ಗಳನ್ನು ಬ್ಯಾಂಕ್ಗಳಿಗೆ ವಾಪಸ್ ನೀಡಲಾಗಿದೆ. ಕಂಪನಿಗಳಿಂದ ಬ್ಯಾಂಕ್ ಹಣ ದುರುಪಯೋಗ ಹಿನ್ನೆಲೆಯಲ್ಲಿ ದೂರು ದಾಖಲಿಸಿಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಆಂತರಿಕ ವಿಚಾರಣೆ ನಡೆದಾಗ, ಈ ಅಕ್ರಮಗಳು ಬೆಳಕಿಗೆ ಬಂದಿದ್ದು, ಮುಂಬಯಿಯ 17 ಸ್ಥಳಗಳಲ್ಲಿ ದಾಳಿ ನಡೆಸಲಾಗಿದ್ದು, ದಾಖಲಾತಿಗಳನ್ನು ವಶ ಪಡಿಸಿಕೊಳ್ಳಲಾಗಿದೆ.