ಜಿಎಸ್ಟಿ, ತೈಲ ದರ ಏರಿಕೆ ವಿರೋಧಿಸಿ ದೇಶವ್ಯಾಪಿ ಮಾರುಕಟ್ಟೆ ಬಂದ್!
ಇಂದು ದೇಶವ್ಯಾಪಿ ಮಾರುಕಟ್ಟೆ ಬಂದ್| ಜಿಎಸ್ಟಿ, ತೈಲ ದರ ಏರಿಕೆ ವಿರೋಧಿಸಿ ಸಿಎಐಟಿಯಿಂದ ಬಂದ್ಗೆ ಕರೆ| 8 ಕೋಟಿ ವರ್ತಕರು ಭಾರತ್ ಬಂದ್ನಲ್ಲಿ ಭಾಗವಹಿಸುವ ಸಾಧ್ಯತೆ
ನವದೆಹಲಿ(ಫೆ.26): ಜಿಎಸ್ಟಿಯಲ್ಲಿ ಕೆಲ ವಿವಾದಾತ್ಮಕ ಅಂಶಗಳು ಮತ್ತು ತೈಲ ದರ ಏರಿಕೆ ಖಂಡಿಸಿ ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಶುಕ್ರವಾರ ಭಾರತ್ ಬಂದ್ಗೆ ಕರೆ ಕೊಟ್ಟಿದೆ.
ಈ ಬಂದ್ ವೇಳೆ ದೇಶದ ಕನಿಷ್ಠ 1500 ಸ್ಥಳಗಳಲ್ಲಿ ಧರಣಿ ನಡೆಸಲಾಗುವುದು, ಇದರಲ್ಲಿ ಕನಿಷ್ಠ 8 ಕೋಟಿ ವರ್ತಕರು ಭಾಗಿಯಾಗಲಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ಶುಕ್ರವಾರ ಎಲ್ಲಾ ವಾಣಿಜ್ಯ ವಹಿವಾಟುಗಳು ಬಂದ್ ಆಗಿರಲಿವೆ ಎಂದು ಸಂಘಟನೆ ತಿಳಿಸಿದೆ.
ಜಿಎಸ್ಟಿ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಬೇಕು, ತೆರಿಗೆ ಸ್ತರವನ್ನು ಇನ್ನಷ್ಟುಸರಳೀಕರಣಗೊಳಿಸಬೇಕು, ಅದನ್ನು ಬಳಕೆದಾರರ ಸ್ನೇಹಿಯಾಗಿ ಮಾಡಬೇಕು, ಇ- ವೇ ಬಿಲ್ ಪದ್ಧತಿ ರದ್ದು ಮಾಡಬೇಕು, ಇ- ಇನ್ವಾಯ್್ಸಗಳ ಬದಲಾಗಿ ಫಾಸ್ಟ್ಟ್ಯಾಗ್ ಮೂಲಕವೇ ವಾಹನಗಳ ಮೇಲೆ ಕಣ್ಗಾವಲು ಇಡುವ ವ್ಯವಸ್ಥೆ ಜಾರಿಯಾಗಬೇಕು, ದೇಶವ್ಯಾಪಿ ಒಂದೇ ರೀತಿಯಲ್ಲಿ ಡೀಸೆಲ್ ದರ ನಿಗದಿ ಮಾಡಬೆಕು ಎಂಬುದು ನಮ್ಮ ಪ್ರಮುಖ ಬೇಡಿಕೆ.
ಈ ಹಿನ್ನೆಲೆಯಲ್ಲಿ ಶುಕ್ರವಾರ ಬಂದ್ಗೆ ಕರೆ ಕೊಡಲಾಗಿದೆ. ಇದಕ್ಕೆ 40000ಕ್ಕೂ ಹೆಚ್ಚು ಉದ್ಯಮ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ತಿಳಿಸಿದ್ದಾರೆ.