OpenAI CEO ಸ್ಯಾಮ್ ಆಲ್ಟ್‌ಮನ್ ಅವರು ಇತ್ತೀಚೆಗೆ ದತ್ತು ಪಡೆದ ಮಗುವಿಗೆ ಬೆಂಗಳೂರು ಮೂಲದ ಕ್ರೆಡೆಲ್‌ವೈಸ್ ಕಂಪನಿಯ ಸ್ಮಾರ್ಟ್ ತೊಟ್ಟಿಲನ್ನು ಖರೀದಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಾಷಿಂಗ್ಟನ್‌: 2024ರಲ್ಲಿ ತಮ್ಮ ಬಹುಕಾಲದ ಗೆಳೆಯ ಆಲಿವರ್ ಮುಲ್ಹೆರಿನ್ ಅವರನ್ನು ವಿವಾಹವಾಗಿ ಗಮನ ಸೆಳೆದಿದ್ದ ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ಫೆಬ್ರವರಿಯಲ್ಲಿ ಮಗುವನ್ನು ದತ್ತು ಪಡೆದಿದ್ದರು. ಇದೀಗ ಮಗುವಿಗೆ ಬೆಂಗಳೂರು ಮೂಲದ ಮಹಿಳೆಯೊಬ್ಬರು ಸ್ಥಾಪಿಸಿರುವ ಕ್ರೆಡೆಲ್‌ವೈಸ್ ಎಂಬ ಕಂಪನಿಯಿಂದ ಸ್ಮಾರ್ಟ್ ತೊಟ್ಟಿಲನ್ನು ಖರೀದಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ತಿಳಿಸಿರುವ ಅವರು, ‘ಎಲ್ಲಾ ಪೋಷಕರು ಈ ಕಂಪನಿಯಿಂದಲೇ ತೊಟ್ಟಿಲನ್ನು ಖರೀದಿಸಿ’ ಎಂದು ಸಲಹೆ ನೀಡಿದ್ದಾರೆ. ಆಲ್ಟ್‌ಮನ್ ಮಾತಿಗೆ ಸಂತಸ ವ್ಯಕ್ತಪಡಿಸಿದ ಕ್ರೇಡಲ್‌ವೈಸ್ ಸಂಸ್ಥಾಪಕಿ ರಾಧಿಕಾ ಪಾಟೀಲ್ ‘ನಮ್ಮನ್ನು ಪ್ರೀತಿಸುತ್ತಿರುವುದಕ್ಕೆ ಆಲ್ಟ್‌ಮನ್ ಅವರಿಗೆ ಧನ್ಯವಾದಗಳು. ಎಐ ದೇವರು ಕ್ರೇಡಲ್‌ವೈಸ್‌ ಮೇಲೆ ನಂಬಿಕೆ ಇಟ್ಟಿರುವುದಕ್ಕೆ ಆಭಾರಿಯಾಗಿದ್ದೇವೆ. ನಿಮ್ಮೆಲ್ಲರಿಗೆ ಇನ್ನಷ್ಟು ಶುಭ ಹಾರೈಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.

ಕ್ರೇಡಲ್‌ವೈಸ್ ವಿಶೇಷತೆ:

ಬೆಂಗಳೂರು ಮೂಲದ, ಅಮೆರಿಕದ ಟೆಕ್ಸಾಸ್‌ನಲ್ಲಿ ನೆಲೆಸಿರುವ ರಾಧಿಕಾ ಪಾಟೀಲ್ ಈ ಕಂಪನಿಯನ್ನು ಹುಟ್ಟುಹಾಕಿದ್ದಾರೆ. ಅವರ ಲಿಂಕ್ಡ್‌ಇನ್ ಪ್ರಕಾರ, ಕ್ರೆಡೆಲ್‌ವೈಸ್ ಎಂಬುದು ಅಮೆರಿಕನ್ ಸಂಸ್ಥೆಯಾದ ಎಸ್‌ಒಎಸ್‌ವಿನಿಂದ ಹಣಕಾಸು ನೆರವು ಪಡೆದ ಡಿಟಿಸಿ (ನೇರವಾಗಿ ಗ್ರಾಹಕರಿಗೆ) ಬ್ರ್ಯಾಂಡ್ ಆಗಿದೆ. ಇದು ಮಗುವಿನ ನಿದ್ರೆಯ ಮಾದರಿ, ಮಗು ಎಚ್ಚರಗೊಳ್ಳುವ ಸೂಚನೆ ಮತ್ತು ಹಿತವಾದ ಸಂಗೀತದೊಂದಿಗೆ ಮಗು ನಿದ್ರಿಸುವಂತೆ ಮಾಡುವ ವ್ಯವಸ್ಥೆ ಹೊಂದಿರುವ ಸ್ಮಾರ್ಟ್ ತೊಟ್ಟಿಲನ್ನು ತಯಾರಿಸುತ್ತದೆ. ಈ ಕಂಪನಿಯ ಒಂದು ತೊಟ್ಟಿಲಿನ ಬೆಲೆ ಸುಮಾರು 1.5 ಲಕ್ಷ ರು.

ಕೋಪದ ಕೈಗೆ ಬುದ್ಧಿಕೊಟ್ಟ ಗಂಡ: 8 ತಿಂಗಳ ಗರ್ಭಿಣಿ ಹೆಂಡ್ತಿನ ಕೊಂದೇ ಬಿಟ್ಟ

ವಿಶಾಖಪಟ್ಟಣ: ಕೆಲವೊಮ್ಮ ಕೋಪ ಎಂತಹ ದೊಡ್ಡ ಅನಾಹುತವನ್ನು ತಂದಿಡುತ್ತದೆ ಎಂದು ಊಹಿಸಲೂ ಕೂಡ ಆಗದು. ಅದೇ ರೀತಿ ಇಲ್ಲೊಂದು ಕಡೆ ಗಂಡ ಹೆಂಡ್ತಿ ನಡುವಿನ ಕದನ ಕೊಲೆಯಲ್ಲಿ ಅಂತ್ಯವಾಗಿದೆ. ಇನ್ನೇನು ಒಂದು ತಿಂಗಳು ಕಳೆದರೆ ಅವರ ಪ್ರೀತಿಯ ಸಂಕೇತವಾಗಿ ಮುದ್ದು ಮಗುವೊಂದು ಮಡಿಲಲ್ಲಿರುತ್ತಿತ್ತು. ಆದರೆ ಗಂಡ ಹೆಂಡತಿ ನಡುವಿನ ಸಣ್ಣ ವಾಗ್ವಾದವೊಂದು ವಿಕೋಪಕ್ಕೆ ತಿರುಗಿದ್ದು, ಸಿಟ್ಟಿನ ಕೈಗೆ ಬುದ್ದಿಕೊಟ್ಟ ಗಂಡ 8 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದೇ ಬಿಟ್ಟಿದ್ದಾನೆ. ಇದರಿಂದ ಜಗತ್ತು ನೋಡದ ಕಂದನೂ ತಾಯಿ ಹೊಟ್ಟೆಯಲ್ಲೇ ಸಾವನ್ನಪ್ಪಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಈ ದುರಂತ ನಡೆದಿದೆ. 8 ತಿಂಗಳ ಗರ್ಭಿಣಿ ಅನುಷಾ ಹಾಗೂ ಪತಿ ಜ್ಞಾನೇಶ್ವರ್‌ ಮಧ್ಯೆ ನಿನ್ನೆ ಮುಂಜಾನೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ತಾಳ್ಮೆ ಕಳೆದುಕೊಂಡ ಗಂಡ ಹೆಂಡ್ತಿ ಗರ್ಭಿಣಿ ಎಂಬುದನ್ನೂ ಮರೆತು ಕತ್ತು ಹಿಸುಕಿದ್ದಾನೆ. ಇದರಿಂದ ಕೂಡಲೇ ಆಕೆ ಪ್ರಜ್ಞೆ ಕಳೆದುಕೊಂಡು ಕೆಳಗೆ ಬಿದ್ದಿದ್ದಾಳೆ. ಕೂಡಲೇ ಭಯಬೀತನಾದ ಆತ ಹೆಂಡತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಆದರೆ ಅಲ್ಲಿ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.

ನಂತರ ಆರೋಪಿ ಗಂಡ ಸೀದಾ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ. ಒಂದು ಕ್ಷಣದ ಸಿಟ್ಟಿಗೆ ಆತ ದೊಡ್ಡ ಬೆಲೆಯನ್ನೇ ತೆರಬೇಕಾಗಿ ಬಂದಿದೆ. ವಿಶಾಖಪಟ್ಟಣಂನ ಪಿಎಂ ಪಾಲೇಂ ಬಳಿ ಉಡ ಕಾಲೋನಿಯಲ್ಲಿ ಈ ಅವಘಡ ಸಂಭವಿಸಿದೆ. ಪತ್ನಿ ಕೊಲೆ ಮಾಡಿರುವ ಜ್ಞಾನೇಶ್ವರ್‌, ನಗರದ ಸಾಗರನಗರ ವೀವ್‌ ಪಾಯಿಂಟ್ ಬಳಿ ಪಾಸ್ಟ್ ಫುಡ್‌ ಶಾಪ್ ನಡೆಸುತ್ತಿದ್ದ. ದುರಂತ ಎಂದರೆ ಈ ಜೋಡಿ ಕೇವಲ ಮೂರು ವರ್ಷಗಳ ಹಿಂದಷ್ಟೇ ಪ್ರೇಮ ವಿವಾಹವಾಗಿದ್ದರು. ಆದರೆ ಹಲವಾರು ವಿಷಯಗಳಲ್ಲಿ ತಮ್ಮ ನಡುವೆ ಭಿನ್ನಭಿಪ್ರಾಯಗಳು ಬರುತ್ತಿದ್ದುದ್ದರಿಂದ ಜಗಳವಾಡಿಕೊಂಡು ಸಮಾಧಾನಿಸಿಕೊಂಡು ಬದುಕುತ್ತಿದ್ದರು. ಆದರೆ ಈ ಬಾರಿಯ ಕಿತ್ತಾಟ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.