ಕೇವಲ 40 ಸಾವಿರ ರೂ. ವೆಚ್ಚದಲ್ಲಿ ಭೋಗ್ಯಕ್ಕೆ ಜಮೀನು ಪಡೆದ ರೈತನೊಬ್ಬ ಅದರಲ್ಲಿ ಟೊಮೆಟೊ ಬೆಳೆದು ಬರೋಬ್ಬರಿ 1 ಕೋಟಿ ರೂ. ಲಾಭ ಗಳಿಸಿ ರೈತರಿಗೆ ಮಾದರಿ ಆಗಿದ್ದಾನೆ.

ಬೆಳಗಾವಿ (ಆ.06): ಇಡೀ ದೇಶದಲ್ಲಿ ಟೊಮೆಟೊಗೆ ಬಂಗಾರದ ಬೆಲೆ ಬಂದಿದ್ದು, ಟೊಮೆಟೊ ಬೆಳದ ರೈತರು ಲಕ್ಷಾಧಿಪತಿಗಳು ಕೆಲವರು ಕೋಟ್ಯಾಧಿಪತಿಗಳಾಗಿದ್ದಾರೆ. ಆದರೆ, ಬೆಳಗಾವಿಯಲ್ಲೊಬ್ಬ ರೈತ 40 ಸಾವಿರ ರೂ.ಗೆ ಜಮೀನನ್ನು ಭೋಗ್ಯಕ್ಕೆ (ಲೀಸ್‌ಗೆ) ಹಾಕಿಸಿಕೊಂಡು ಅದರಲ್ಲಿ ಟೊಮೆಟೊ ಬೆಳೆದು ರೈತ ಬರೋಬ್ಬರಿ 1 ಕೋಟಿ ರೂ. ಆದಾಯವನ್ನು ಗಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಟೊಮೆಟೊ ಬೆಳೆದು ಕೋಟಿ ರೂ. ಗಳಿಸಿದ ರೈತ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ನನದಿ ಗ್ರಾಮದವನಾಗಿದ್ದಾನೆ. ನನದಿ ಗ್ರಾಮದಲ್ಲಿ 7 ಎಕರೆ ಜಮೀನು ಲೀಸ್ ಮೇಲೆ ಪಡೆದಿದ್ದ ಜಯಸಿಂಗಪುರದ ರೈತ ಸಾಗರ್ ಮಗದುಮ್ ಎನ್ನುವವರು 4 ತಿಂಗಳಿಗೆ ಜಮೀನನ್ನು ಭೋಗ್ಯಕ್ಕೆ (ಲೀಸ್‌ಗೆ) ಪಡೆದುಕೊಂಡಿದ್ದರು. ಒಂದು ಎಕರೆಗೆ ತಲಾ 40 ಸಾವಿರ ರೂ.ನಂತೆ ಹಣವನ್ನು ನೀಡಿದ್ದರು. ಇನ್ನು ಟೊಮೆಟೊ ಬೆಳದು ಕಟಾವು ಮಾಡಿ ಮಾರುಕಟ್ಟೆಗೆ ಮಾರಾಟ ಮಾಡಿದ್ದು, 5 ಕಟಾವುಗಳಲ್ಲಿ ಬರೋಬ್ಬರಿ 1 ಕೋಟಿ ರೂ. ಆದಾಯವನ್ನು ಗಳಿಸಿದ್ದಾರೆ. ಅಂದರೆ, ಒಟ್ಟಾರೆ 2.8 ಲಕ್ಷ ರೂ. ವೆಚ್ಚ ಮಾಡಿದ ಜಮೀನಿನಲ್ಲಿ 1 ಕೋಟಿ ರೂ. ಲಾಭ ಗಳಿಸಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಟೊಮೆಟೊ ಬೆಳೆದ ರೈತನ ಅಭಿವೃದ್ಧಿ ಸಹಿಸದೇ, ಫಲಬಿಟ್ಟ ಟೊಮೆಟೊ ಗಿಡ ಕತ್ತರಿಸಿದ ಕಿಡಿಗೇಡಿಗಳು

30 ವರ್ಷದಿಂದ ಟೊಮೆಟೊ ಬೆಳೆಯುತ್ತಿದ್ದ ರೈತ: ರೈತ ಸಾಗರ್‌ ಗ್ರಾಮೀಣ ಪ್ರದೇಶದಲ್ಲಿ ಬೆಳೆದ ಟೊಮೆಟೋವನ್ನು ದೆಹಲಿ ಮೂಲದ ವ್ಯಾಪಾರಸ್ಥರು ರೈತರ ಜಮೀನಿಗೆ ಆಗಮಿಸಿ ಟೊಮ್ಯಾಟೊವನ್ನು ವಾಹನದಲ್ಲಿ ಭರ್ತಿ ಮಾಡಿಕೊಂಡು ಹೋಗುತ್ತಿದ್ದರು. ಇನ್ನು ಪ್ರತಿ ವರ್ಷ ಗಡಿ ಭಾಗದಲ್ಲಿ ಜಮೀನು ಲೀಸ್ (ಭೋಗ್ಯಕ್ಕೆ) ಪಡೆದು ಟೊಮ್ಯಾಟೊ ಬೆಳೆಯುವ ಸಾಗರ್ ಮಗದುಮ್ ಕುಟುಂಬಸ್ಥರು, ಈ ಬಾರಿ ಭರ್ಜರಿ ಲಾಭವನ್ನೇ ಗಳಿಸಿದ್ದಾರೆ. ಕಳೆದ 30 ವರ್ಷಗಳಿಂದ ಟೊಮ್ಯಾಟೊ ಬೆಳೆಯುತ್ತಿರುವ ಮಗದುಮ್ ಕುಟುಂಬಸ್ಥರನ್ನು ಈ ಬಾರಿ ಭೂತಾಯಿ ಹಾಗೂ ಕೆಂಪು ಸುಂದರಿ ಟೊಮೆಟೊ ಕೈ ಹಿಡಿದು ಕೋಟ್ಯಾಧಿಪತಿಗಳನ್ನಾಗಿ ಮಾಡಿದ್ದಾರೆ. 

ಟೊಮೆಟೋ ಮಾರಿ 3 ಕೋಟಿ ಗಳಿಸಿದ ರೈತ..!

ಇನ್ನೂ 5 ಬಾರಿ ಕಟಾವು ಬರಲಿದ್ದು 1.5 ಕೋಟಿ ರೂ. ಲಾಭ ಬರಲಿದೆ: ಕಳೆದ 30 ವರ್ಷದಲ್ಲಿ ಟೊಮೆಟೊಗೆ ಇಷ್ಟೊಂದು ರೇಟ್ ಎಂದೂ ಬಂದಿರಲಿಲ್ಲ. ಇದೇ ಮೊದಲ ಬಾರಿ ಟೊಮೆಟೊಗೆ ಇಷ್ಟೊಂದು ಡಿಮ್ಯಾಂಡ್ ಬಂದಿದೆ. ಇನ್ನು 5 ಬಾರಿ ಕಟಾವು ಮಾಡಿದಲ್ಲಿ ಇನ್ನೂ 1.5 ಕೋಟಿ ರೂ. ಲಾಭ ಬರುವ ನಿರೀಕ್ಷೆ ಇದೆ ಎಂದ ರೈತ ಹೇಳಿದ್ದಾರೆ. ಈವರೆಗೆ 7 ಎಕರೆ ಜಮೀನು ಲೀಸ್‌ಗೆ ಹಾಕಿಕೊಳ್ಳುವುದು, ಟೊಮೆಟೊ ನಾಟಿ, ಗೊಬ್ಬರ, ಔಷಧಿ ಸಿಂಪಡಣೆ ಸೇರಿ ಒಟ್ಟು 20 ಲಕ್ಷ ಖರ್ಚು ಮಾಡಲಾಗಿತ್ತು. ಈಗ 1 ಕೋಟಿ ರೂ. ಆದಾಯ ಬಂದಿದ್ದು, 20 ಲಕ್ಷ ರೂ. ಖರ್ಚು ಎಂದು ಕಳೆದರೂ 80 ಲಕ್ಷ ರೂ. ಲಾಭವಾಗಿದೆ ಎಂದು ರೈತ ಸಾಗರ್ ಹೇಳಿದ್ದಾನೆ.