ಈತನಿಗೆ ಅವಮಾನವೇ ಸಾಧನೆಯ ಮೆಟ್ಟಿಲು! ಅಂಧ ಎಂದ ಜತ್ತಿಗೆ ಬೆಳಕು ತೋರಿದ ಶ್ರೀಕಾಂತ್! ಈತನಿಗೆ ತಿರಸ್ಕಾರ ಆಯ್ತು ಪುರಸ್ಕಾರ!  ಸಾಧನೆಗೆ ಕಣ್ಣಲ್ಲ, ಧೈರ್ಯ ಬೇಕೆಂದ ಧೀರ

ಹೈದರಾಬಾದ್(ಆ.5): ಹುಟ್ಟು ಕುರುಡನಾದ ಈ ಮಗು ಬದುಕಿ ಏನು ತಾನೆ ಮಾಡೀತು ಎಂದೆಲ್ಲಾ ಕುಹುಕವಾಡಿದ್ದವರು ಇದೀಗ ಈತನನ್ನು ಮರೆಯಲ್ಲಿ ನಿಂತು ನೋಡುತ್ತಾರೆ. ಇದು ಹೈದ್ರಾಬಾದ್ ಮೂಲದ ಬೊಲ್ಲಾಂಟ್ ಇಂಡಸ್ಟ್ರೀಸ್ ನ ಸಿಇಓ ಶ್ರೀಕಾಂತ್ ಬೊಲ್ಲಾ ಅವರ ಯಶೋಗಾಥೆ. 

Add Asianetnews Kannada as a Preferred SourcegooglePreferred

ಅವಿದ್ಯಾವಂತರು, ವಿಕಲಚೇತನರ ಜೊತೆ ಕೈ ಜೋಡಿಸಿ ಪರಿಸರ ಸ್ನೇಹಿ ಹಾಗೂ ಮರುಬಳಕೆ ಮಾಡುವ ಪ್ಯಾಕಿಂಗ್ ಸೊಲ್ಯುಷನ್ ಗಳನ್ನ ಉತ್ಪಾದಿಸುವ ಕಾರ್ಖಾನೆಯೊಂದನ್ನು ಶ್ರೀಕಾಂತ್ ನಡೆಸುತ್ತಾರೆ. ಇವತ್ತಿಗೆ ಬೊಲ್ಲಾ ಅವರ ಆದಾಯ 50 ಕೋಟಿ ರೂ. 

ಶ್ರೀಕಾಂತ್ ಹುಟ್ಟುವಾಗ ಕಣ್ತುಂಬ ಕನಸುಗಳನ್ನು ಹೊತ್ತು ಬರಲಿಲ್ಲ. ಬದಲಿಗೆ ಕತ್ತಲನ್ನು ತುಂಬಿಕೊಂಡು ಬಂದಿದ್ದರು. ಶಾಲೆಯಲ್ಲಿ ಹಿಂದಿನ ಬೆಂಚ್ ಗೆ ತಳ್ಳಲ್ಪಟ್ಟಿದ್ದ ಇವರನ್ನು, ಆಟ, ಪಾಠಗಳಿಂದ ದೂರ ಇಡಲಾಗಿತ್ತು. ಮಾಮೂಲಿ ಮಕ್ಕಳಂತೆ ಕಲಿಯಲು ಅವಕಾಶವಿಲ್ಲದ ಈತ 10ನೇ ತರಗತಿಯಲ್ಲಿ ಸೈನ್ಸ್ ವಿಭಾಗವನ್ನು ಆಯ್ಕೆ ಮಾಡಿಕೊಂಡರೂ ದೃಷ್ಟಿ ಸಮಸ್ಯೆ ಇದೆ ಎಂಬ ಕಾರಣಕ್ಕೆ ಈ ವಿಭಾಗದ ಬಾಗಿಲನ್ನು ಶ್ರೀಕಾಂತ್ ಗೆ ಮುಚ್ಚಲಾಗಿತ್ತು.

ಇನ್ನೂ ವಿಚಿತ್ರ ಎಂದರೆ ಬೊಲ್ಲಾಗೆ ವಿಜ್ಞಾನ ವಿಭಾಗ ನಿರಾಕರಿಸಿದ್ದು, ಖುದ್ದು ಆಂಧ್ರ ಪ್ರದೇಶ ಶಿಕ್ಷಣ ಮಂಡಳಿ. ಮುಂದೆ ಐಐಟಿಗೆ ಅರ್ಜಿ ಸಲ್ಲಿಸಿದಾಗ ಕುರುಡ ಎಂಬ ಕಾರಣಕ್ಕೆ ಶ್ರೀಕಾಂತ್ ಅವರಿಗೆ ಪ್ರವೇಶ ನಿರಾಕರಿಸಿತ್ತು. 

ಆದರೆ ತಮಗಾದ ಅವಮಾನವನ್ನೇ ಸಾಧನೆಯ ಮೆಟ್ಟಿಲನ್ನಾಗಿ ಮಾಡಿಕೊಂಡ ಬೊಲ್ಲಾ, ಅಮೆರಿಕದ ಪ್ರತಿಷ್ಠಿತ ಮಸ್ಕ್ಯೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ( ಎಂಐಟಿ ) ಗೆ ಪ್ರವೇಶ ಪಡೆಯುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದರು. ಈ ಸಂಸ್ಥೆಗೆ ಸೇರಿದ ಮೊಟ್ಟ ಮೊದಲ ಅಂತರಾಷ್ಟ್ರೀಯ ಅಂಧ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೂ ಬೊಲ್ಲಾ ಪಾತ್ರರಾಗಿದ್ದಾರೆ. ಈ ಸಾಧನೆ ಮಾಡಿದಾಗ ಬೊಲ್ಲಾ ಅವರಿಗೆ ಕೇವಲ 18 ವರ್ಷ.

ಎಂಐಟಿ ಇಂದ ಪದವಿಧರರಾಗಿ ಸ್ವದೇಶಕ್ಕೆ ಮರಳಿದ ಬೊಲ್ಲಾ, ಇಂದು ಪರಿಸರ ಸ್ನೇಹಿ ಹಾಗೂ ಮರುಬಳಕೆ ಮಾಡುವ ಪ್ಯಾಕಿಂಗ್ ಸೊಲ್ಯುಷನ್ ಉತ್ಪಾದಕ ಘಟಕ ಸ್ಥಾಪಿಸಿದ್ದಾರೆ. ಕರ್ನಾಟಕದ ಹುಬ್ಬಳ್ಳಿ, ತೆಲಂಗಾಣದ ನಿಜಾಮಾಬಾದ್, ಹಾಗೂ ಹೈದ್ರಾಬಾದ್ ನಲ್ಲಿ ಎರಡು ಘಟಕಗಳನ್ನು ಬೊಲ್ಲಾ ಸ್ಥಾಪಿಸಿದ್ದಾರೆ. ಇದೀಗ ಆಂಧ್ರಪ್ರದೇಶ ಹಾಗೂ ಚೆನ್ನೈಗೆ ಸಮೀಪದಲ್ಲಿರುವ ಶ್ರೀಸಿಟಿನಲ್ಲಿ ಮತ್ತೊಂದು ಘಟಕ ಶುರುಮಾಡುವ ಯೋಜನೆಯಲ್ಲಿದ್ದಾರೆ. 

ಭಾರತದಲ್ಲಿ ವಿಕಲಚೇತನ ಮಕ್ಕಳನ್ನು ದೂರ ತಳ್ಳಲಾಗುತ್ತದೆ. ಭಾರತದ ಜನಸಂಖ್ಯೆಲ್ಲಿ ಶೇಕಡಾ 10ರಷ್ಟು ಜನ ವಿಕಲಚೇತನರಿದ್ದು ಅವರು ಅನುತ್ಪಾದಕರೆಂದು ಭಾವಿಸಲಾಗಿದೆ. ಆದರೆ ಈ ಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿದೆ ಎಂಬುದು ಶ್ರೀಕಾಂತ್ ಬೊಲ್ಲಾ ಅವರ ನಂಬಿಕೆ.