Asianet Suvarna News Asianet Suvarna News

Economic Survey 2022: 1.2 ಲಕ್ಷ ಬ್ಯಾಂಕ್ ಠೇವಣಿದಾರರಿಗೆ 1, 500 ಕೋಟಿ ರೂ. ಪಾವತಿಸಿದ DICGC

*DICGC ಕಾಯ್ದೆ ಅಡಿಯಲ್ಲಿ ಬ್ಯಾಂಕ್ ಠೇವಣಿದಾರರಿಗೆ 5ಲಕ್ಷ ರೂ. ವಿಮೆ ಕವರೇಜ್ ಸೌಲಭ್ಯ
*ದಿವಾಳಿ ಅಥವಾ ಆರ್ ಬಿಐ ನಿಷೇಧಕ್ಕೊಳಪಟ್ಟ ಬ್ಯಾಂಕಿನ ಗ್ರಾಹಕರಿಗೆ 5ಲಕ್ಷ ರೂ. ಪಡೆಯಲು ಅವಕಾಶ
*DICGC ಕಾಯ್ದೆಗೆ 2021ರಲ್ಲಿ ಸಂಸತ್ತಿನ ಅನುಮೋದನೆ

Economic Survey 2022 Rs 1500 crore paid to 1.2 lakh depositors after DICGC Act changes
Author
Bangalore, First Published Jan 31, 2022, 4:43 PM IST

Business Desk: 1.2ಲಕ್ಷಕ್ಕೂ ಅಧಿಕ ಬ್ಯಾಂಕ್ ಠೇವಣಿದಾರರಿಗೆ (Depositors) 2022ರ ಜನವರಿ ಪ್ರಾರಂಭದ ತನಕ 1, 500 ಕೋಟಿ ರೂ.ಗಿಂತಲೂ ಅಧಿಕ ಮೊತ್ತವನ್ನು ಡೆಪಾಸಿಟ್ ಇನ್ಯುರೆನ್ಸ್ ಆಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್ ( ತಿದ್ದುಪಡಿ) ಕಾಯ್ದೆ (DICGC Act) ಅಡಿಯಲ್ಲಿ ಪಾವತಿಸಲಾಗಿದೆ ಎಂದು ಆರ್ಥಿಕ ಸಮೀಕ್ಷೆ (Economic Survey) 2022 ಮಾಹಿತಿ ನೀಡಿದೆ.

ಡೆಪಾಸಿಟ್ ಇನ್ಯುರೆನ್ಸ್ ಆಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್ ( ತಿದ್ದುಪಡಿ) ಕಾಯ್ದೆಗೆ (DICGC Act)2021ರಲ್ಲಿ ಸಂಸತ್ತಿನ ಅನುಮೋದನೆ ಸಿಕ್ಕಿತ್ತು. ಇದು ಭಾರತದಲ್ಲಿ ಠೇವಣಿ ವಿಮೆಯ ಸ್ವರೂಪವನ್ನೇ ಬದಲಾಯಿಸಿತ್ತು. 2020- 21ನೇ ಸಾಲಿನ ಬಜೆಟ್ ನಲ್ಲಿ ಠೇವಣಿ ವಿಮೆ ಕವರೇಜ್ ಮೊತ್ತವನ್ನು ಒಂದು ಲಕ್ಷ ರೂ.ನಿಂದ 5ಲಕ್ಷ ರೂ.ಗೆ ಹೆಚ್ಚಿಸಲಾಗಿತ್ತು. ಠೇವಣಿ ವಿಮೆ ಕವರೇಜ್ ಮೊತ್ತ 1961ರಲ್ಲಿ ಪ್ರಾರಂಭಗೊಂಡಿದ್ದು,1,500ರೂ. ಆಗಿತ್ತು. ಈ ಮೊತ್ತ ನಿಧಾನವಾಗಿ ಹೆಚ್ಚಳಗೊಳ್ಳುತ್ತ 1993 ರಲ್ಲಿ ಒಂದು ಲಕ್ಷ ರೂ. ತಲುಪಿತ್ತು. 2020ರ ತನಕ ಈ ಮೊತ್ತದಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. 

Economic Survey 2022:ಪ್ರಸಕ್ತ ಸಾಲಿನಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರ ಶೇ. 9.2 ನಿರೀಕ್ಷೆ

ದಿವಾಳಿಯಾದ  ಅಥವಾ ಆರ್ ಬಿಐನಿಂದ ನಿಷೇಧಕ್ಕೊಳಪಟ್ಟ  ಬ್ಯಾಂಕುಗಳ ಠೇವಣಿದಾರರಿಗೆ  DICGC ಮಧ್ಯಂತರ ಪಾವತಿ ಮಾಡಲು ಡೆಪಾಸಿಟ್ ಇನ್ಯುರೆನ್ಸ್ ಆಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್ ( ತಿದ್ದುಪಡಿ) ಕಾಯ್ದೆ ಅವಕಾಶ ಕಲ್ಪಿಸುತ್ತದೆ. ಇಂಥ ಬ್ಯಾಂಕುಗಳ ಠೇವಣಿದಾರರಿಗೆ ನಿಷೇಧದ ಹಿನ್ನೆಲೆಯಲ್ಲಿ ತಮ್ಮ ಉಳಿತಾಯವನ್ನು ಹಿಂಪಡೆಯಲು ಸಾಧ್ಯವಾಗೋದಿಲ್ಲ. 

ಮಧ್ಯಂತರ ಪಾವತಿಗೆ  DICGCಗೆ ಕಾಯ್ದೆ 90 ದಿನಗಳ ಕಾಲಾವಕಾಶವನ್ನು ನೀಡುತ್ತದೆ. ಮೊದಲ 45 ದಿನಗಳ ಅವಧಿಯಲ್ಲಿ ವಿಮೆಗೊಳಪಟ್ಟ ಬ್ಯಾಂಕು ತನ್ನ ಎಲ್ಲ ಠೇವಣಿದಾರರ ಮಾಹಿತಿಗಳನ್ನು ನಿಗಮಕ್ಕೆ ನೀಡಬೇಕು. ಮಾಹಿತಿಗಳನ್ನು ಪಡೆದ 30 ದಿನಗಳೊಳಗೆ ನಿಗಮವು ಕ್ಲೈಮ್ಸ್ ನಲ್ಲಿ ಬ್ಯಾಂಕು ನಮೂದಿಸಿರೋ ಮಾಹಿತಿಗಳನ್ನು ಪರಿಶೀಲಿಸಬೇಕು. ಇನ್ನು ಪರಿಶೀಲನೆ ನಡೆಸಿದ 15 ದಿನಗಳೊಳಗೆ ಪಾವತಿ ಮಾಡಬೇಕು. ಇದರರ್ಥ  ದಿವಾಳಿಯಾದ ಅಥವಾ ಯಾವುದೇ ಕಾರಣದಿಂದ ಬಂದ್ ಆದ ಬ್ಯಾಂಕ್ ಗ್ರಾಹಕರಿಗೆ 90 ದಿನಗಳೊಳಗೆ ವಿಮಾ ಮೊತ್ತವನ್ನು  DICGC ಪಾವತಿಸಬೇಕು. ಡೆಪಾಸಿಟ್ ಇನ್ಯುರೆನ್ಸ್ ಆಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್ ( ತಿದ್ದುಪಡಿ) ಕಾಯ್ದೆಯಿಂದ ಶೇ.98.3 ರಷ್ಟು ಬ್ಯಾಂಕ್ ಖಾತೆದಾರರಿಗೆ ಸಂಪೂರ್ಣ ಸುರಕ್ಷತೆ ಸಿಕ್ಕಿದೆ. 

2022-23ನೇ ಸಾಲಿನ ಕೇಂದ್ರ ಬಜೆಟ್ ಅಧಿವೇಶನ ಸೋಮವಾರ (ಜ.31) ಪ್ರಾರಂಭಗೊಂಡಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021-22ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. ಸಮೀಕ್ಷೆಯು  2022ನೇ ಸಾಲಿನಲ್ಲಿ ದೇಶದ ಜಿಡಿಪಿ ಶೇ. 9.2 ಪ್ರಗತಿ  ದಾಖಲಿಸೋ ನಿರೀಕ್ಷೆ ವ್ಯಕ್ತಪಡಿಸಿದೆ. 

Economic Survey 2022: 2021-22ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಆದಾಯದಲ್ಲಿ ಚೇತರಿಕೆ; ಮಾಸಿಕ 1ಲಕ್ಷ ಕೋಟಿ ರೂ. GST ಸಂಗ್ರಹ

2023ನೇ ಆರ್ಥಿಕ ಸಾಲಿನಲ್ಲಿ ದೇಶದ ಜಿಡಿಪಿ ಶೇ.8-8.5 ಪ್ರಗತಿ  ದಾಖಲಿಸೋ ನಿರೀಕ್ಷೆಯನ್ನು ಸಮೀಕ್ಷೆ ವ್ಯಕ್ತಪಡಿಸಿದೆ. 2022ನೇ ಸಾಲಿನಲ್ಲಿ ಕೃಷಿ ಕ್ಷೇತ್ರದ ಬೆಳವಣಿಗೆ ದರ 3.9% ಹಾಗೂ ಕೈಗಾರಿಕಾ ಕ್ಷೇತ್ರದ ಬೆಳವಣಿಗೆ ದರ 11.8%  ಆಗಿರಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ.  ಇನ್ನು ಸೇವಾ ವಲಯ 2022ನೇ ಸಾಲಿನಲ್ಲಿ ಶೇ.8.2ರಷ್ಟು ಬೆಳವಣಿಗೆ ದಾಖಲಿಸಲಿದೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದೆ. 

ಭಾರತದಲ್ಲಿ ಆರ್ಥಿಕ ಸಮೀಕ್ಷೆಯನ್ನು 1950-51ರಲ್ಲಿ ಮೊದಲ ಬಾರಿಗೆ ಮಂಡಿಸಲಾಗಿತ್ತು. 1964ರ ತನಕ ಕೇಂದ್ರ ಬಜೆಟ್ ಜೊತೆಗೆ ಲೋಕಸಭೆಯಲ್ಲಿ ಮಂಡಿಸಲಾಗುತ್ತಿತ್ತು. 1964ನೇ ಸಾಲಿನಿಂದ  ಪ್ರತಿ ವರ್ಷ ಕೇಂದ್ರ ಬಜೆಟ್ ಮಂಡನೆ ಹಿಂದಿನ ದಿನ  ಆರ್ಥಿಕ ಸಮೀಕ್ಷೆ ಮಂಡಿಸಲಾಗುತ್ತಿದೆ. ಕಳೆದ ವರ್ಷ ಮಾತ್ರ ಕೆಂದ್ರ ಬಜೆಟ್ ಗೆ ಎರಡು ದಿನ ಮುಂಚಿತವಾಗಿ ಆರ್ಥಿಕ ಸಮೀಕ್ಷೆ ಮಂಡಿಸಲಾಗಿತ್ತು. 
 

Follow Us:
Download App:
  • android
  • ios