ಬೆಂಗಳೂರಿನಿಂದ ಎರಡು ಮೂರು ವಾರ ಕಾಲ ವಿದೇಶಕ್ಕೆ ಹೋಗಿದ್ದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಒಮ್ಮೆ ಯಾವಾಗ ಬೆಂಗಳೂರಿಗೆ ಮರಳುತ್ತೇನೇ ಅನಿಸ್ತಾ ಇತ್ತಂತೆ. ಅದಕ್ಕೆ ಕಾರಣ ಅವರದೇ ಮಾತುಗಳಲ್ಲಿ ಕೇಳಿ. 

ಬೆಂಗಳೂರಿನ ಹವಾಮಾನದ ಬಗ್ಗೆ ಎಲ್ಲರಿಗೂ ಒಂದು ಕಣ್ಣು. ಅತ್ತ ತೆಲಂಗಾಣಕ್ಕೆ ಹೋದರೆ ಉರಿ ಬಿಸಿಲು ಸುಡುತ್ತದೆ. ತಮಿಳುನಾಡಿನಲ್ಲಿ ಎರಡು ಥರದ ವಾತಾವರಣ ಇದೆ- ಒಂದೋ ಸುಡು ಬಿಸಿಲು, ಇಲ್ಲವೇ ಕೊರೆಯುವ ಚಳಿ. ಕೇರಳದಲ್ಲೂ ಇದೇ ರೀತಿ. ಹಿಲ್‌ ಸ್ಟೇಶನ್‌ಗಳಲ್ಲಿ ಚಳಿ. ಕರಾವಳಿ ಪ್ರಾಂತ್ಯಕ್ಕೆ ಹೋದರೆ ಉರಿ ಉರಿ ಸೆಖೆ. ಹೈದರಾಬಾದ್‌ನಲ್ಲಿ ಸೆಕೆ ತಡೆಯಲಾಗುವುದಿಲ್ಲ. ಹಾಗೇ ಚೆನ್ನೈಯಲ್ಲಿ ಕೂಡ. ಇನ್ನು ಹಾಗಾದರೆ ದಕ್ಷಿಣ ಭಾರತದಲ್ಲಿ ಅತ್ಯಂತ ಆಪ್ಯಾಯಮಾನವಾದ ವಾತಾವರಣ ಇರೋದು ಎಲ್ಲಿ? ಅದು ಬೆಂಗಳೂರಿನಲ್ಲಿ ಮಾತ್ರ. ಇದಕ್ಕಾಗಿಯೇ ಎಷ್ಟೋ ಉದ್ಯಮಿಗಳು ಇಲ್ಲಿ ನೆಲೆಯೂರಿರುತ್ತಾರೆ. ರಾಜಕಾರಣಿಗಳಿಗೆ, ಹೂಡಿಕೆದಾರರಿಗೆ, ಬಾಲಿವುಡ್‌ ಸೆಲೆಬ್ರಿಟಿಗಳಿಗೂ ಈ ಊರು ನೆಲೆವೀಡು.

Add Asianetnews Kannada as a Preferred SourcegooglePreferred

ಇದನ್ನೇ ತೇಜಸ್ವಿ ಸೂರ್ಯ ತಮ್ಮ ಒಂದು ಭಾಷಣದಲ್ಲಿ ಹೇಳಿದರು. ಯೋಗ ದಿನದ ಭಾಷಣದಲ್ಲಿ ಮಾತಾಡುತ್ತ ಅವರು, ತಾನು ದೇಶದಿಂದ ಹೊರಗಡೆ ಅಥವಾ ರಾಜ್ಯದಿಂದ ಆಚೆ ಎಲ್ಲಾದರೂ ಹೋದರೆ ಯಾವಾಗ ಬೆಂಗಳೂರಿಗೆ ಮರಳುತ್ತೇನೋ ಎಂದು ತವಕಿಸುತ್ತೇನೆ ಎಂದು ಹೇಳಿಕೊಂಡದ್ದು ವಿಶೇಷವಾಗಿತ್ತು. ಇತ್ತೀಚೆಗೆ ಅವರು ಎರಡು ವಾರಕ್ಕೂ ಹೆಚ್ಚು ಕಾಲ ಕೇಂದ್ರದ ವಿಶೇಷ ನಿಯೋಗದಲ್ಲಿ, ಶಶಿ ತರೂರ್‌ ಮೊದಲಾದವರ ಜೊತೆಗೆ ಸುತ್ತಾಡಿದ್ದರು.

"ಸುಮಾರು 18 ದಿನಗಳ ಬಳಿಕ ನಾನು ಡೆಲ್ಲಿಗೆ ಬಂದು ಲ್ಯಾಂಡ್‌ ಆದೆ. ಮೂರು ದಿನ ದಿಲ್ಲಿಯಲ್ಲಿದ್ದೆ. ಮೂರೂ ದಿವಸ, ಯಾವಾಗ ಮೂರು ಮೀಟಿಂಗ್‌ಗಳು ಮುಗಿದು ಬೆಂಗಳೂರಿನ ವಿಮಾನ ಹತ್ತುತ್ತೇನೋ ಅಂತ ಪರಿತಪಿಸ್ತಾ ಇದ್ದೆ. ಹೊರಗಡೆ ಹೋಗೋಕೆ ಆಗ್ತಾ ಇರಲಿಲ್ಲ. ಅಷ್ಟು ಸೆಕೆ. ನಲುವತ್ತೆಂಟು ಡಿಗ್ರಿ, ಐವತ್ತು ಡಿಗ್ರಿಯ ಹತ್ತಿರ. ರೂಮಿನೊಳಗೆ ಕೂತುಕೊಂಡು, ಎರಡೆರಡು ಎಸಿ ಆನ್‌ ಮಾಡಿಟ್ಟರೂ ಆಗ್ತಾ ಇಲ್ಲ. ಮೂರು ದಿವಸ ಹೊರಗೆ ಬರಲಿಲ್ಲ, ಜೆಟ್‌ ಲ್ಯಾಗ್‌ ಬೇರೆ. ಯಾವಾಗ ಬೆಂಗಳೂರಿಗೆ ಹೋಗ್ತೀನಿ ಅಂತ ಐ ವಾಸ್‌ ಸೋ ಹೋಮ್‌ಸಿಕ್.‌ ಮಧ್ಯರಾತ್ರಿ ವಿಮಾನ ಮಾಡಿಕೊಂಡು ಹೋಗಿಬಿಡೋಣ ಅಂದುಕೊಂಡಿದ್ದೆ. ಮೀಟಿಂಗ್‌ ಇದ್ದದ್ದರಿಂದ ಅಲ್ಲಿ ಉಳಿದುಕೊಂಡೆ. ಹನ್ನೆರಡೂವರೆಗೆ ಮೀಟಿಂಗ್‌ ಮುಗಿದರೆ ಎರಡು ಗಂಟೆಗೆ ವಿಮಾನ ಹತ್ತಿ ಓಡಿ ಬಂದು ಬೆಂಗಳೂರಿನಲ್ಲಿ ಇಳಿದು ನಾನು ಮಾಡಿದ ಮೊದಲ ಕೆಲಸ, ನಾಲ್ಕೈದು ನಿಮಿಷ ಅಲ್ಲೇ ನಿಂತು ನನ್ನ ಊರಿನ ವೆಲ್‌ಕಮಿಂಗ್‌ ತಂಗಾಳಿಯನ್ನು ಆಸ್ವಾದಿಸಿದ್ದು" ಅಂತಾರೆ ತೇಜಸ್ವಿ.

ವೀಕೆಂಡ್‌ನಲ್ಲಿ ಪೋಷಕರನ್ನು ಖುಷಿಯಾಗಿಸಲು BMTCಯಿಂದ ಸುಂದರವಾದ ಅದ್ಭುತ ಪ್ಯಾಕೇಜ್

"ಬಹುಶಃ ನಾವು, ನಮ್ಮ ನಗರ ಎಷ್ಟು ಸುಂದರ ಎನ್ನುವುದನ್ನು ಇನ್ನೂ ಅರ್ಥ ಮಾಡಿಕೊಂಡಿಲ್ಲ. ಇದು ಎಷ್ಟು ಶ್ರೀಮಂತ, ಇಲ್ಲಿ ಇರೋಕೆ ನಾವು ಎಷ್ಟು ಪುಣ್ಯ ಮಾಡಿದ್ದೀವಿ. ಎಂಥ ಹವಾಮಾನವನ್ನು ನಾವು ಉಸಿರಾಡುತ್ತಿದ್ದೇವೆ. ಬೆಂಗಳೂರಿನಂಥ ನಗರ ಇಲ್ಲ, ಇಲ್ಲಿನವರಂಥ ಜನ ಇಲ್ಲ" ಎಂದಿದ್ದಾರೆ ತೇಜಸ್ವಿ.

ರೈಲಿಗಿಂತ ಕಡಿಮೆ ಬೆಲೆಯಲ್ಲಿ ದೆಹಲಿ-ಬೆಂಗಳೂರು ವಿಮಾನ ಪ್ರಯಾಣ

ತೇಜಸ್ವಿ ಹೇಳಿದ್ದು ನಿಜ ಅನ್ನಿಸುತ್ತದೆ. ಮೊನ್ನೆ ಮೊನ್ನೆಯವರೆಗೂ ಇದಕ್ಕೆ ʼಉದ್ಯಾನಗಳ ನಗರʼ ಎಂಬ ಹೆಸರಿತ್ತು. ಇಂದಿಗೂ ಸಾಕಷ್ಟು ಪಾರ್ಕುಗಳಿವೆ. ʼನಿವೃತ್ತರ ಸ್ವರ್ಗʼ ಎಂದು ಹೇಳಲಾಗುತ್ತಿತ್ತು. ವಯಸ್ಕರಿಗೆ ಇಂದು ರಸ್ತೆ ದಾಟುವುದು ಸ್ವಲ್ಪ ಕಷ್ಟವಾಗಿದ್ದರೂ, ಸ್ವಚ್ಛವಾದ ಹವೆಯನ್ನು ಉಸಿರಾಡುತ್ತ ಪಾರ್ಕುಗಳಿಗೆ ವಾಕಿಂಗ್‌ ಹೋಗುವಷ್ಟು ಚೆನ್ನಾಗಿದೆ. ಎಂಥ ಬೇಸಿಗೆಯಲ್ಲೂ ಇಲ್ಲಿನ ಸೆಕೆ ಮೂವತ್ತೈದು ಡಿಗ್ರಿ ದಾಟಿದ್ದೇ ಇಲ್ಲ. ದಾಟಿದರೂ ಒಂದು ಮಳೆ ಬಂದು ನಗರವನ್ನು ಕೂಲ್‌ ಕೂಲ್‌ ಆಗಿಸುತ್ತದೆ. ಮಳೆಗಾಲದ ಆರಂಭದಲ್ಲಿ ಎಷ್ಟೋ ಜೋರಾಗಿ ಮಳೆ ಸುರಿದು, ಕೆಲವು ಏರಿಯಾಗಳು ಮುಳುಗುತ್ತವೆ ನಿಜ, ಆದರೆ ಮರುದಿನ ನಗರ ಮತ್ತೆ ನಾರ್ಮಲ್‌ ಆಗುತ್ತದೆ. ಮುಂಬಯಿಯಂತೆ ದಿನಗಟ್ಟಲೆ ಕೆಲಸಕ್ಕಾಗಿ ಟ್ರಾವೆಲ್‌ ಮಾಡಬೇಕಿಲ್ಲ, ಮೆಟ್ರೋ ಈಗ ಒಂದು ತುದಿಯಿಂದ ಇನ್ನೊಂದು ತುದಿಯನ್ನು ಬೆಸೆಯುತ್ತದೆ. ದಿಲ್ಲಿಯಂತೆ ಉಸಿರುಗಟ್ಟಿಸುವ ಹೊಗೆ, ಮೈಕೊರೆಯುವ ಚಳಿ, ಸುಡುವ ಸೆಖೆ ಇಲ್ಲಿ ಇಲ್ಲ. ಇನ್ನು ಚಳಿಗಾಲದ ಹವೆಯೋ! ಕೆಲವೊಮ್ಮೆ ಊಟಿಯಂತೆ, ಮಲೆನಾಡಿನಂತೆ ಫೀಲ್‌ ಕೊಡುತ್ತದೆ. ಇಂಥ ನಗರವನ್ನು ಹೀಗೇ ಉಳಿಸಿಕೊಳ್ಳಲು ನಾವು ಎಲ್ಲ ಪ್ರಯತ್ನ ಮಾಡಬೇಕು ಅನಿಸುತ್ತದೆ.

View post on Instagram