ಪೊಲೀಸರು ಸಂಚಾರ ನಿಯಮ ಪಾಲಿಸದರೆ ಹೋದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುವಂತೆ ನಗರ ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ.ಬಿ.ಆರ್‌.ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು [ಅ.19]: ಸರ್ಕಾರಿ ವಾಹನಗಳ ಚಾಲಕರು ಹಾಗೂ ಪೊಲೀಸರು ಸಂಚಾರ ನಿಯಮ ಪಾಲಿಸದರೆ ಹೋದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುವಂತೆ ನಗರ ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ.ಬಿ.ಆರ್‌.ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ವಾಹನಗಳ ಅದರಲ್ಲೂ ಪೊಲೀಸ್‌ ಇಲಾಖೆಯ ಚಾಲಕರು, ಬಹಳ ಜವಾಬ್ದಾರಿಯುತವಾಗಿ ಇಲಾಖೆ ನೀಡಿರುವ ವಾಹನಗಳನ್ನು ಚಾಲನೆ ಮಾಡಬೇಕು. ಪೊಲೀಸ್‌ ವಾಹನಗಳನ್ನು ಸಾರ್ವಜನಿಕರು ಗಮನಿಸುತ್ತಿರುತ್ತಾರೆ. ಅಲ್ಲದೆ ಈ ವಾಹನಗಳು ಸಂಚಾರ ನಿಯಮ ಉಲ್ಲಂಘನೆಗಳನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಹರಿಬಿಡುತ್ತಿದ್ದಾರೆ. ಇವುಗಳು ವೈರಲ್‌ ಆಗಿ ಇಲಾಖೆಗೆ ತೀವ್ರ ಮುಜುಗರ ತರುತ್ತಿವೆ ಎಂದು ಜಂಟಿ ಆಯುಕ್ತರು ಬೇಸರ ವ್ಯಕ್ತಪಡಿಸಿದ್ದಾರೆ.

ಕೆಲವು ಸಾರ್ವಜನಿಕರು ಪೋಟೋಗಳ್ನು ಇ ಮೇಲ್‌, ಪಬ್ಲಿಕ್‌ ಐ ಆ್ಯಪ್‌, ವಾಟ್ಸಪ್‌ ಮುಖಾಂತರ ಸಹ ದೂರು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾನೂನು ಪಾಲನೆಗೆ ಪೊಲೀಸರು ಸೇರಿದಂತೆ ಸರ್ಕಾರಿ ವಾಹನ ಚಾಲಕರು ಉದಾಸೀನತೆ ತೋರಿಸಿದರೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸರ್ಕಾರಿ ನೌಕರರು ಪ್ರಮುಖವಾಗಿ ಸೀಟ್‌ ಬೆಲ್ಟ್‌ ಧರಿಸದಿರುವುದು, ಹೆಲ್ಮಟ್‌ ಧರಿಸದೆ ಚಾಲನೆ, ಪ್ರವೇಶ ನಿಷಿದ್ಧ ಮಾರ್ಗದಲ್ಲಿ ಚಾಲನೆ, ಚಾಲನೆ ವೇಳೆ ಮೊಬೈಲ್‌ ಬಳಕೆ, ವಾಹನಗಳಿಗೆ ದೋಷಪೂರಿತ ನಂಬರ್‌ ಪ್ಲೇಟ್‌ಗಳ ಬಳಕೆ ಹಾಗೂ ಅತಿವೇಗದ ಚಾಲನೆ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಸಾರ್ವಜನಿಕರಿಗೆ ಮಾದರಿಯಾಗುವಂತೆ ಸರ್ಕಾರಿ ನೌಕರರು ನಡೆದುಕೊಳ್ಳಬೇಕು. ಕಾನೂನು ಉಲ್ಲಂಘಿಸುವ ಸರ್ಕಾರಿ ವಾಹನಗಳ ಚಾಲಕರ ವಿರುದ್ಧ ಮೋಟಾರು ಕಾಯ್ದೆ ಅನ್ವಯ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದ್ದಾರೆ.