ರೇಣುಕಾಸ್ವಾಮಿ ಕೊಲೆ ಪ್ರಕರಣದ 13 ಮತ್ತು 14ನೇ ಆರೋಪಿಗಳಾದ ದೀಪಕ್ ಮತ್ತು ಪ್ರದೂಷ್, ತಮ್ಮನ್ನು ಪ್ರಕರಣದಿಂದ ಕೈಬಿಡುವಂತೆ ಬಿಡುಗಡೆ ಅರ್ಜಿ ಸಲ್ಲಿಸಿದ್ದಾರೆ. ಹಲ್ಲೆಯಲ್ಲಿ ನೇರ ಭಾಗಿಯಾಗಿಲ್ಲ, ಬದಲಿಗೆ ದರ್ಶನ್‌ಗೆ ಹಲ್ಲೆ ಮಾಡದಂತೆ ಹೇಳಿದ್ದೆ ಎಂದು ವಾದಿಸಿದ್ದಾರೆ.

ಬೆಂಗಳೂರು (ಸೆ.17): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ 13 ಮತ್ತು 14ನೇ ಆರೋಪಿಗಳಾದ ದೀಪಕ್ ಮತ್ತು ಪ್ರದೂಷ್, ತಮ್ಮನ್ನು ಆರೋಪಗಳಿಂದ ಕೈಬಿಡುವಂತೆ ಕೋರಿ ಸಲ್ಲಿಸಿದ್ದ ಬಿಡುಗಡೆ ಅರ್ಜಿಗಳ (discharge applications) ವಿಚಾರಣೆ ನಡೆಸಲಾಯಿತು. ಅದರೊಂದಿಗೆ ರೇಣುಕಾಸ್ವಾಮಿ ಕೊಲೆ ಮಾಡುವ ಸಮಯದಲ್ಲಿ ಒಟ್ಟಾಗಿದ್ದ ದರ್ಶನ್‌ರ ಸಹಚರರು ಪ್ರಕರಣ ಬಿಗುವಾಗುತ್ತಿದ್ದಂತೆ ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಡಿಶ್ಚಾರ್ಜ್‌ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಆರೋಪಿ ಪ್ರದೂಷ್ ಪರ ಹಿರಿಯ ವಕೀಲ ದಿವಾಕರ್ ಅವರು ವಾದ ಮಂಡಿಸಿದ್ದು, ಚಾರ್ಜ್‌ಶೀಟ್‌ನಲ್ಲಿರುವ ವಿವರಗಳ ಪ್ರಕಾರ, ತಮ್ಮ ಕಕ್ಷಿದಾರ ಹಲ್ಲೆಯಲ್ಲಿ ನೇರವಾಗಿ ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ. ಸಾಕ್ಷಿ ನಾಶಪಡಿಸಲು ಹಣ ಸಂಗ್ರಹಿಸಿದ ಆರೋಪ ಮಾತ್ರ ಅವರ ಮೇಲಿದೆ. ಘಟನಾ ಸ್ಥಳದಲ್ಲಿ ಮೆಸೇಜ್‌ಗಳನ್ನು ಓದಿರುವ ಆರೋಪ ಕೂಡ ಇದೆ. ಆದರೆ, ಹಲ್ಲೆಯಲ್ಲಿ ಪ್ರದೂಷ್ ಭಾಗಿಯಾಗಿರುವುದನ್ನು ಯಾವುದೇ ಪ್ರತ್ಯಕ್ಷದರ್ಶಿ ಹೇಳಿಲ್ಲ ಎಂದು ಅವರು ವಾದಿಸಿದರು.

ರೇಣುಕಾಸ್ವಾಮಿಗೆ ಹಲ್ಲೆ ಮಾಡಬೇಡಿ ಎಂದು ದರ್ಶನ್‌ಗೆ ಹೇಳಿದ್ದ ಪ್ರದೂಷ್‌

ಪ್ರದೂಷ್, ದರ್ಶನ್‌ಗೆ ಹಲ್ಲೆ ಮಾಡದಂತೆ ಹೇಳಿದ್ದರು ಮತ್ತು ರೇಣುಕಾಸ್ವಾಮಿಗೆ ಊಟ ತಂದುಕೊಡುವಂತೆಯೂ ಸೂಚಿಸಿದ್ದರು. ಈ ಅಂಶಗಳು ಅವರ ವಾದಕ್ಕೆ ಬಲ ತುಂಬಿವೆ ಎಂದು ವಕೀಲರು ತಿಳಿಸಿದ್ದಾರೆ. ಅಲ್ಲದೆ, ಪ್ರದೂಷ್ ವಿರುದ್ಧ ಕೊಲೆ ಆರೋಪ ಇಲ್ಲ ಮತ್ತು ರೇಣುಕಾಸ್ವಾಮಿಗೂ ಪ್ರದೂಷ್‌ಗೂ ಯಾವುದೇ ನೇರ ಪರಿಚಯ, ಫೋನ್ ಕರೆ ಅಥವಾ ಸಂಪರ್ಕವಿರಲಿಲ್ಲ ಎಂದು ವಕೀಲರು ನ್ಯಾಯಾಲಯಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಿದರು.

ಆದರೆ, 13ನೇ ಆರೋಪಿ ದೀಪಕ್‌ ಪರ ವಕೀಲರು ಮತ್ತು ಎಎಸ್‌ಪಿಪಿ ಸಚಿನ್‌ ಅವರು ತಮ್ಮ ವಾದ ಮಂಡಿಸಲು ಹೆಚ್ಚಿನ ಕಾಲಾವಕಾಶ ಕೋರಿದ್ದರಿಂದ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.