ಪೋಷಕರೆ ಗಮನಿಸಿ : ಖಾಸಗಿ ಶಾಲಾ ವಾಹನ ಸೇವೆ ಇರಲ್ಲ
ಪೋಷಕರೇ ಗಮನಿಸಿ. ಇಂದು ನಿಮ್ಮ ಮಕ್ಕಳ ಶಾಲಾ ವಾಹನ ಮನೆ ಬಾಗಿಲಿಗೆ ಬರುವುದಿಲ್ಲ. ಕಾರಣವೇನು ?
ಬೆಂಗಳೂರು [ಅ.23]: ರಾಜಧಾನಿಯಲ್ಲಿ ಬುಧವಾರ ಖಾಸಗಿ ಶಾಲೆಗಳ ಮಕ್ಕಳನ್ನು ಶಾಲೆಗಳಿಗೆ ಕರೆದೊಯ್ಯುವ ಖಾಸಗಿ ವಾಹನಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಎಐಯುಟಿಯುಸಿ ಸಂಯೋಜಿತ ಕರ್ನಾಟಕ ಸಂಯುಕ್ತ ಶಾಲಾ ಹಾಗೂ ಲಘು ವಾಹನ ಚಾಲಕರ ಸಂಘವು ಮಂಗಳವಾರ ಬೆಳಗ್ಗೆ 11ಕ್ಕೆ ಮಲ್ಲೇಶ್ವರಂನ ಶಿರೂರು ಪಾರ್ಕ್ನಲ್ಲಿ ಚಾಲಕರ ಸಮಾವೇಶ ಹಮ್ಮಿಕೊಂಡಿದೆ.
ಈ ಸಮಾವೇಶದಲ್ಲಿ ಚಾಲಕರು ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳನ್ನು ಕರೆದೊಯ್ಯುವ ಖಾಸಗಿ ವಾಹನಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಈಗಾಗಲೇ ಚಾಲಕರು ಮಕ್ಕಳ ಪೋಷಕರಿಗೆ ಈ ವಿಚಾರವನ್ನು ತಿಳಿಸಿದ್ದಾರೆ. ಅವರು ಸಹ ಸಮಾವೇಶಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ ಎಂದು ಸಂಘದ ಅಧ್ಯಕ್ಷ ಷಣ್ಮುಗಂ ತಿಳಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಸಮಾವೇಶ ಯಾರ ವಿರುದ್ಧದ ಪ್ರತಿಭಟನೆ ಅಥವಾ ಧರಣಿಯಲ್ಲ. ಚಾಲಕರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಬೇಡಿಕೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಲಾಗುತ್ತದೆ. ಈ ಸಮಾವೇಶದಲ್ಲಿ ಚಾಲಕರು ಪಾಲ್ಗೊಳ್ಳಲೇ ಬೇಕಿರುವುದರಿಂದ ಸೇವೆಯಲ್ಲಿ ಕೊಂಚ ವ್ಯತ್ಯಯವಾಗಲಿದೆ. ಈ ಸಮಾವೇಶಕ್ಕೆ ಜೈ ಭುವನೇಶ್ವರಿ ಶಾಲಾ ವಾಹನ ಚಾಲಕರ ಸಂಘ ಸೇರಿದಂತೆ ಹಲವು ಚಾಲಕರ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ಹೇಳಿದರು.