ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಆರಂಭಗೊಂಡಿದೆ. ಮೆಜೆಸ್ಟಿಕ್, ಶಿವಾನಂದ ಸರ್ಕಲ್, ಶೇಷಾದ್ರಿಪುರಂ, ಮಲ್ಲೇಶ್ವರಂ ಸೇರಿದಂತೆ ಹಲವು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ.
ಬೆಂಗಳೂರು(ಜೂ.10) ಮುಂಗಾರು ಮಳೆ ಬಹುಬೇಗನೆ ಪ್ರವೇಶ ಪಡೆಯುವ ಮೂಲಕ ಮೇ ತಿಂಗಳಲ್ಲಿ ದಾಖಲೆ ಪ್ರಮಾಣದ ಮಳೆಯಾಗಿತ್ತು. ಆದರೆ ಜೂನ್ ತಿಂಗಳಲ್ಲಿ ಕೆಲ ದಿನ ಬಿಡುವು ನೀಡಿದ್ದ ಮಳೆ ಇದೀಗ ಮತ್ತೆ ಆರಂಭಗೊಂಡಿದೆ. ಬೆಂಗಳೂರಿನ ಹಲವು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಮೆಜೆಸ್ಟಿಕ್, ಶಿವಾನಂದ ಸರ್ಕಲ್, ಮಲ್ಲೇಶ್ವರಂ, ಶೇಷಾದ್ರಿಪುರಂ ಸೇರಿದಂತೆ ಹಲವು ಭಾಗದಲ್ಲಿ ಮಳೆಯಾಗುತ್ತಿದೆ. ಈಗಾಗಲೇ ಹವಾಮಾನ ಇಲಾಖೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಧಾರಾಕಾರ ಮಳೆ ಸೂಚನೆ ನೀಡಿದೆ.
ದೇಶದ ಹಲವು ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದೆ. ಈಶಾನ್ಯ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಪೈಕಿ ಕರ್ನಾಟಕದ ಕೆಲ ಜೆಲ್ಲೆಗಳಲ್ಲಿ ಅಲ್ಪ ಕಾಲ ಬಿಡುವು ನೀಡಿದ್ದ ಮಳೆರಾಯ ಈಗಾಗಲೇ ಅಬ್ಬರಿಸಲು ಆರಂಭಿಸಿದೆ. ಆದರೆ ಕಳೆದ ಕೆಲ ದಿನಗಳಿಂದ ಬೆಂಗಳೂರಿಲ್ಲಿ ಮಳೆ ಕೊಂಚ ಬಿಡುವು ನೀಡಿತ್ತು. ಇಂದು ರಾತ್ರಿಯಿಂದ ಧಾರಾಕಾರ ಮಳೆ ಆರಂಭಗೊಂಡಿದೆ.
ಮಳೆಯಿಂದ ರಸ್ತೆಗಳು ಜಲಾವೃತ
ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಕೆಲ ರಸ್ತೆಗಳು ಜಲಾವೃತಗೊಂಡಿದೆ. ತಡ ರಾತ್ರಿ ಮಳೆ ಆರಂಭಗೊಂಡ ಕಾರಣ ಜನಸಾಮಾನ್ಯರು ಪರದಾಡುವ ಸ್ಥಿತಿ ತಪ್ಪಿತ್ತು. ಕಳೆದೆರಡು ದಿನದಿಂದ ಮೋಡ ಕವಿದ ವಾತಾರಣ, ಕೆಲೆವೆಡೆ ತುಂತುರು ಮಳೆಯಾಗಿತ್ತು. ಇದೀಗ ಭಾರಿ ಮಳೆಯಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಭಾರಿ ಮಳೆ
ಕಳೆದ ಶನಿವಾರ ತಡರಾತ್ರೀ ಸುರಿದ ಧಾರಾಕಾರ ಮಳೆಗೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದಲ್ಲಿಹಲವು ಮನೆಗಳು ಜಲಾವೃತವಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ಪಿಎಸ್ಐ ಜನರಿಗೆ ಸಹಾಯ ಮಾಡಿದ್ದರು. ಆದ್ರೆ ಮಳೆ ಹೋದ ಮೇಲೆ ಕೊಡೆ ಹಿಡಿದ್ರು ಅನ್ನೋ ಹಾಗೇ ಇಂದು ಸ್ಥಳಕ್ಕೆ ಆಲಮೇಲ ತಹಶಿಲ್ದಾರ ಕೆ.ವಿಜಯಕುಮಾರ್ ಭೇಟಿ ನೀಡಿದ್ದಾರೆ. ತಡವಾಗಿ ಸ್ಥಳ ಪರಿಶೀಲನೆಗೆ ಬಂದ ತಹಶಿಲ್ದಾರ್ ಜನರೊಂದಿಗೆ ಚರ್ಚೆ ನಡೆಸಿದರು. ಇನ್ನೂ ಗ್ರಾಮ ಪಂಚಾಯತಿ ಅಧಿಕಾರಿಗಳ ಮೇಲೆ ಗರಂ ಆದ ತಹಶಿಲ್ದಾರ್, ಇಲ್ಲಿನ ವಾಸ್ತವ ಸ್ಥಿತಿ ನೋಡಿದಾಗ ಇಲ್ಲಿನ ಜನರಿಗೆ ಸಮಸ್ಯೆ ಆಗಿದ್ದು ಸತ್ಯ, ಪಂಚಾಯತಿ ವತಿಯಿಂದ ಈ ಸಮಸ್ಯೆ ಬಗೆ ಹರಿಸಬೇಕಿತ್ತು ಎಂದಿದ್ದಾರೆ. ಸಂಬಂಧಪಟ್ಟವರೊಂದಿಗೆ ಮಾತನಾಡಿ ಈ ಸಮಸ್ಯೆ ಬಗೆ ಹರಿಸುವೆ ಎಂದು ಭರವಸೆ ನೀಡಿದ್ದಾರೆ.
