ಬೆಂಗಳೂರಿಗೆ ಮುಂದಿನ ಮೂರು ಗಂಟೆ ಆರೇಂಜ್ ಅಲರ್ಟ್ ನೀಡಲಾಗಿದೆ. ಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮರ, ರೆಂಬೆ ಕೊಂಬೆಗಳು ಮುರಿದು ಬೀಳುವ ಸಾಧ್ಯತೆ ಇದೆ. ಅತೀವ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. 

ಬೆಂಗಳೂರು (ಜು.13) ಬೆಂಗಳೂರಿನಲ್ಲಿ ಮತ್ತೆ ಭಾರಿ ಮಳೆ ಆರಂಭಗೊಂಡಿದೆ. ಟೌನ್ ಹಾಲ್, ಜಯನಗರ, ಜೆಪಿ ನಗರ, ಕಾರ್ಪೋರೇಶನ್, ಮೆಜಸ್ಟಿಕ್, ಮಲ್ಲೇಶ್ವರಂ, ವಿಜಯನಗರ ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ. ಇದೇ ವೇಳೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಮುಂದಿನ ಮೂರು ಗಂಟೆ ಬೆಂಗಳೂರಿನಲ್ಲಿ ಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಸೂಚನೆ ನೀಡಲಾಗಿದೆ.

Add Asianetnews Kannada as a Preferred SourcegooglePreferred

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಬೆಂಗಳೂರಿನಲ್ಲಿ 50 ಕಿಲೋಮೀಟರ್ ವೇಗ ಬಿರುಗಾಳಿ ಸಹಿತ ಮಳೆಯಾಗಲಿದೆ. ದುರ್ಬಲ ಮರಗಳು, ಮರಗಳ ರೆಂಬೆ ಕೊಂಬೆಗಳು ಮುರಿದು ಬೀಳುವ ಸಾಧ್ಯತೆ ಹೆಚ್ಚಿದೆ. ಇತ್ತೀಚೆಗೆ ಮರ, ಮರದ ರೆಂಬೆ ಕೊಂಬೆ ಬಿದ್ದು ಹಲವು ಅನಾಹುತಗಳು ಸಂಭವಿಸಿದೆ. ಹೀಗಾಗಿ ತೀವ್ರ ಮುನ್ನಚ್ಚೆರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಆರೆೇಂಜ್ ಅಲರ್ಟ್ ನೀಡಲಾಗಿದೆ.

ಬೆಂಗಳೂರಿನಲ್ಲಿ ಮಳೆ ಕಾರಣ ಟ್ರಾಫಿಕ್

ಬೆಂಗಳೂರಿನ ಹಲೆವೆಡೆ ಮಳೆಯಾಗುತ್ತಿರುವ ಕಾರಣ ಟ್ರಾಫಿಕ್ ಸಮಸ್ಯೆಯಾಗಿದೆ. ಬೈಕ್ ಸವಾರರು ಹಲೆವೆಡೆ ನಿಂತಿದ್ದರೆ, ಇತ್ತ ಸಂಜೆಯ ಸಂಚಾರ ದಟ್ಟಣೆ ಕೂಡ ಹೆಚ್ಚಾಗಿದೆ. ಹೀಗಾಗಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ.

ಜಯನಗರದಲ್ಲಿ ಆಟೋ ಮೇಲೆ ಬಿದ್ದ ಮರ

ಜಯನಗರದ ನಾಲ್ಕನೇ ಹಂತದಲ್ಲಿ ಆಟೋ ಮೇಲೆ ಭಾರಿ ಗಾತ್ರದ ಮರ ಬಿದ್ದಿದೆ. ಅದೃಷ್ಟವಶಾತ್ ಆಟೋ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಊಟ ಮಾಡಲು ಆಟೋ ನಿಲ್ಲಿಸಿದ ಚಾಲಕ ಮಂಜುನಾಥ್ ಇಳಿದು ಹೊಟೆಲ್ ಕಡೆ ತೆರಳುತ್ತಿದ್ದಂತೆ ಆಟೋ ಮೇಲೆ ಮರ ಬಿದ್ದಿದೆ. ಘಟನೆಯಲ್ಲಿ ಒಂದು ಆಟೋ ಹಾಗೂ 2 ಬೈಕ್ ಜಖಂಗೊಂಡಿದೆ. ತಿಲಕ್ ನಗರ ಪೊಲೀಸ್ ಠಾಣಾ ‌ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆಟೋ ಇಳಿದು ತೆರಳುತ್ತಿದ್ದಂತೆ ಮರ ಬಿದ್ದಿದ. ಮರದ ರೆಂಬೆ ಕೊಂಬೆಗಳಿಂದ ಚಾಲಕ ಮಂಜುನಾಥ್ ತಲೆಗೆ ಏಟಾಗಿದೆ. ಆದರೆ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ಸ್ಥಳೀಯರು ತಕ್ಷಣವೆ ನೆರವಿಗೆ ಧಾವಿಸಿದ್ದಾರೆ. ಮಂಜುನಾಥ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಬಂದ ಬಿಬಿಎಂಪಿ ಸಿಬ್ಬಂದಿಗಳು ಮರ ತೆರವು ಮಾಡಿದ್ದಾರೆ.