ನಗರತ್ ಪೇಟೆಯ ಅಗ್ನಿ ದುರಂತದಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ. 2 ದಿನಗಳ ಹಿಂದೆ ನಡೆದ ದುರಂತದ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಅದೇ ಕಟ್ಟಡದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ.

ಬೆಂಗಳೂರು (ಆ.18) ನಗರತ್ ಪೇಟೆಯ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಐವರು ಮೃತಪಟ್ಟಿದ್ದಾರೆ. ಈ ದುರಂತದಲ್ಲಿ ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಬಲಿಯಾಗಿದ್ದರು. ಈ ದುರಂತ ನಡೆದ ಎರಡೇ ದಿನದಲ್ಲಿ ಇದೀಗ ಮತ್ತೆ ಅದೇ ಕಟ್ಟಡದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಇಂದು ಸಂಜೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಒಂದೆಡೆ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದರೆ, ಕಟ್ಟಡ ಒಳಗಿನಿಂದ ಈಗಲೂ ಹೊಗೆಯಾಡುತ್ತಿದೆ. ಯಾವುದೇ ಸಾವು ನೋವು ವರದಿಯಾಗಿಲ್ಲ. 

Add Asianetnews Kannada as a Preferred SourcegooglePreferred

ಸ್ಥಳದಲ್ಲೇ ಬೀಡು ಬಿಟ್ಟ ಅಗ್ನಿಶಾಮಕ ದಳ

ನಗರತ್ ಪೇಟೆ ಕಟ್ಟಡದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ಆರಿಸಿದ್ದರೆ. ಆದರೆ ಕಟ್ಟದ ಕೆಲ ಭಾದದಿಂದ ಹೊಗೆಯಾಡುತ್ತಿದೆ. ಹೀಗಾಗಿ ಅಗ್ನಿಶಾಮಕ ದಳ ಸ್ಥಳದಲ್ಲೇ ಬೀಡು ಬಿಟ್ಟಿದೆ. ಮುನ್ನಚ್ಚೆರಿಕಾ ಕ್ರಮವಾಗಿ ಅಗ್ನಿಶಾಮಕ ದಳ ಸ್ಥಳದಲ್ಲೇ ತಂಗಿದೆ.

ನಗರತ್ ಪೇಟೆ ದುರಂತದ ತನಿಖೆ ಚುರುಕು

ಅಗ್ನಿ ಅವಘಡದ ಬಗ್ಗೆ ಪೊಲೀಸರು, ತಾಂತ್ರಿಕ ತಜ್ಞರು ತನಿಖೆ ನಡೆಸುತ್ತಿದ್ದಾರೆ.ವಿದ್ಯುತ್ ಸ್ಪಾರ್ಕ್ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಪೊಲೀಸರು ಕಟ್ಟಟದ ವಿದ್ಯುತ್ ಸಂಪರ್ಕ, ವೈಯರ್, ಸಿಲಿಂಡರ್ ಸೇರಿದಂತೆ ಎಲ್ಲಾ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಹೊರಗಡೆ ವೈಯರ್ ನಲ್ಲಿ ಸ್ಪಾರ್ಕ್ ಆಗುತ್ತಿತ್ತು. ಈ ಕುರಿತು ಮಾಲೀಕರ ಗಮನಕ್ಕೆ ತರಲಾಗಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಮಾಲೀಕರ ವಿಚಾರಣೆ

ಘಟನೆ ಸಂಬಂಧ ಇಬ್ಬರು ಮಾಲೀಕರ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇತ್ತ ನಾಲ್ಕನೇ ಮಹಡಿಯಲ್ಲಿ ವಾಸವಿದ್ದ ಕುಟುಂಬವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಟ್ಟಡದಲ್ಲಿ ಬೆಂಕಿ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ನಾಲ್ಕನೇ ಮಹಡಿಯಿಂದ ಪಕ್ಕದ ಕಟ್ಟಡಕ್ಕೆ ಹಾರಿ ಪ್ರಾಣ ಉಳಿಸಿಕೊಂಡಿದ್ದ ಕುಟುಂಬದಿಂದ ಪೊಲೀಸರು ಮಾಹಿತಿ ಪಡೆದಿದ್ದಾರೆ. ರಾತ್ರಿ 2.30ರ ವೇಳೆಗೆ ದಟ್ಟ ಹೊಗೆ ಕಾಣಿಸಿಕೊಂಡಿತ್ತು. ನೋಡಿದಾಗ ಕೆಳಗಡೆ ಫ್ಲೋರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಹೀಗಾಗಿ ಪ್ರಾಣ ಉಳಿಸಿಕೊಳ್ಳಲು ನಾಲ್ಕನೇ ಮಹಡಿಯಿಂದ ಪಕ್ಕದ ಬಿಲ್ಡಿಂಗ್‌ಗೆ ಪ್ರಾಣ ಉಳಿಸಿಕೊಂಡಿದ್ದೇವೆ ಎಂದು 7 ಮಂದಿ ಸದಸ್ಯರ ಕುಟುಂಬ ಹೇಳಿಕೆ ನೀಡಿದೆ. ಇಡೀ ಕಟ್ಟಡವನ್ನು ಪೊಲೀಸರು ಪರಿಶೋಧಿಸಿದ್ದಾರೆ.