ಫೋನ್ ಟ್ಯಾಪಿಂಗ್: 'ಅವರಿವರ ಕಾಲಿಡಿದು ತನಿಖೆಯಿಂದ ತಪ್ಪಿಸಿಕೊಳ್ತಾರೆ, ಮೊದ್ಲು FIR ಹಾಕಿ'
ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐಗೆ ವಹಿಸಿರುವುದಕ್ಕೆ ಮಾಜಿ ಸಚಿವ ಎ.ಮಂಜು ಅವರು ಸಿಎಂ ಯಡಿಯೂರಪ್ಪ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.
ಹಾಸನ, [ಆ.18]: ಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಕೊಟ್ಟಿರೋದು ಸ್ವಾಗತಾರ್ಹ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಎ.ಮಂಜು ಸಂತಸ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಇಂದು [ಭಾನುವಾರ] ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಟಿಕಲ್ 21ರ ಪ್ರಕಾರ ನನ್ನ ಹೆಂಡತಿಯ ಫೋನ್ ಕಾಲ್ ಅನ್ನು ನಾನು ಕದ್ದಾಲಿಕೆ ಮಾಡುವಂತಿಲ್ಲ. ಇಂತಹ ಸಂದರ್ಭದಲ್ಲಿ ಈಗಾಗಲೇ 300 ಜನರದ್ದು ಫೋನ್ ಕದ್ದಾಲಿಕೆ ಮಾಡಿರೋ ಬಗ್ಗೆ ಮಾಹಿತಿ ಇದ್ದು, ಅವರ ಮೇಲೆ ಮೊದಲು ಎಫ್ ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದರು.
ಫೋನ್ ಟ್ಯಾಪಿಂಗ್: ಮಾಜಿ ಸಿಎಂ ಕುಮಾರಸ್ವಾಮಿಗೆ ಉರುಳು..?
ಯಾರ-ಯಾರ ಮೇಲೆ ಅವರಿಗೆ ಅನುಮಾನವಿದೆ ಅವರ ಫೋನ್ ಕದ್ದಾಲಿಕೆ ಮಾಡಿದ್ದು, ಯಾರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೋ ಅವರೆಲ್ಲರ ಮೇಲೆ ಪ್ರಕರಣ ದಾಖಲಿಸಬೇಕು ಎಂದರು.
ನನ್ನ ಫೋನ್ ಕದ್ದಾಲಿಕೆ ಮಾಡಿದ ಬಗ್ಗೆಯೂ ವರದಿಯಾಗಿದೆ. ರಾಮಕೃಷ್ಣ ಅವರ ಕಾಲದಲ್ಲಿ ದೇವೇಗೌಡ್ರು ದೊಡ್ಡ ಭಾಷಣ ಮಾಡಿದ್ದರು. ಈಗ ಅವರ ಮಗ ಕದ್ದಾಲಿಕೆ ಮಾಡಿದ್ರೆ ನನಗೆ ಗೊತ್ತಿಲ್ಲ ಬಿಡಿ ಅಂತಿದ್ದಾರೆ ಎಂದು ಲೇವಡಿ ಮಾಡಿದರು.
ಪಾರ್ಲಿಮೆಂಟ್ ಎಲೆಕ್ಷನ್ ಸಂದರ್ಭದಲ್ಲಿ ನನ್ನದು ಮತ್ತು ಸುಮಲತಾ ಅವರದ್ದು ಫೋನ್ ಕದ್ದಾಲಿಕೆ ಮಾಡಿದ್ದಾರೆ. ಅವರಿವರ ಕಾಲಿಡಿದು ತನಿಖೆಯಿಂದ ತಪ್ಪಿಸಿಕೊಳ್ತಾರೆ. ಹಾಗಾಗಿ ಎಫ್ ಐ ಆರ್ ಗಾಗಿ ಒತ್ತಾಯ ಮಾಡುತ್ತಿದ್ದೇನೆ ಎಂದು ಹೇಳಿದರು.