ಬೆಂಗಳೂರಿನ ಮೌರ್ಯ ಸರ್ಕಲ್ನಿಂದ ರೇಸ್ ಕೋರ್ಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಆರಂಭವಾಗಿದೆ. ಇದರಿಂದಾಗಿ ಮುಂದಿನ ಎರಡು ತಿಂಗಳ ಕಾಲ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ಬೆಂಗಳೂರು (ಸೆ.17): ನಗರದ ಹೃದಯಭಾಗದಲ್ಲಿ ಪ್ರಯಾಣಿಸುವ ವಾಹನ ಸವಾರರು ಮುಂದಿನ ಕೆಲವು ದಿನಗಳ ಕಾಲ ಭಾರಿ ಸಂಚಾರ ದಟ್ಟಣೆಯನ್ನು (Traffic Jam) ಎದುರಿಸಬೇಕಾಗಬಹುದು. ಮೌರ್ಯ ಸರ್ಕಲ್ ಜಂಕ್ಷನ್ನಿಂದ ರೇಸ್ ಕೋರ್ಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ವೈಟ್ ಟಾಪಿಂಗ್ (White-topping) ಕಾಮಗಾರಿ ಆರಂಭವಾಗಿರುವ ಹಿನ್ನೆಲೆಯಲ್ಲಿ, ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಈ ಕಾಮಗಾರಿಯು ಪೂರ್ಣಗೊಳ್ಳಲು ಕನಿಷ್ಠ ಎರಡು ತಿಂಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಜಿಬಿಎ ಹಾಗೂ ನಾಗರಿಕ ಸಂಸ್ಥೆಗಳು ವೈಟ್ ಟಾಪಿಂಗ್ ಕೆಲಸವನ್ನು ಕೈಗೆತ್ತಿಕೊಂಡಿದ್ದು, ಮೌರ್ಯ ಸರ್ಕಲ್ ಜಂಕ್ಷನ್ನಿಂದ ಹಳೆಯ ಕೆಪಿಸಿಸಿ (ಕಾಂಗ್ರೆಸ್) ಕಚೇರಿಯವರೆಗಿನ ರಸ್ತೆ ಭಾಗವನ್ನು ಎಲ್ಲಾ ರೀತಿಯ ವಾಹನ ಸಂಚಾರಕ್ಕೆ ಸಂಪೂರ್ಣವಾಗಿ ಮುಚ್ಚಲಾಗಿದೆ.
ಪ್ರಮುಖ ಮಾರ್ಗಕ್ಕೆ ತಡೆ - ಹೆಚ್ಚಾಗಲಿದೆ ದಟ್ಟಣೆ
ಈ ರಸ್ತೆಯು ಮೆಜೆಸ್ಟಿಕ್ನಿಂದ ರೇಸ್ ಕೋರ್ಸ್ ರಸ್ತೆ, ಚಾಲುಕ್ಯ ವೃತ್ತ, ವಿಧಾನಸೌಧ, ಮಲ್ಲೇಶ್ವರಂ ಹಾಗೂ ಶೇಷಾದ್ರಿಪುರಂ ಕಡೆಗೆ ಸಾಗುವ ಸಾವಿರಾರು ವಾಹನ ಸವಾರರಿಗೆ ಅತ್ಯಂತ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಈ ರಸ್ತೆ ಬಂದ್ ಆಗಿರುವುದರಿಂದ ಸುತ್ತಮುತ್ತಲಿನ ಪರ್ಯಾಯ ರಸ್ತೆಗಳಲ್ಲಿ ವಾಹನ ದಟ್ಟಣೆ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ಸ್ಥಳದಲ್ಲಿ ಈಗಾಗಲೇ ಜೆಸಿಬಿಗಳು, ಬುಲ್ಡೋಜರ್ಗಳು ಹಾಗೂ ವಾಟರ್ ಟ್ಯಾಂಕರ್ಗಳನ್ನು ನಿಯೋಜಿಸಲಾಗಿದ್ದು, ಪೂರ್ವಭಾವಿ ಕಾಮಗಾರಿಗಳು ಭರದಿಂದ ಸಾಗಿವೆ.
ಸಾರ್ವಜನಿಕರ ಪರದಾಟ - 20 ನಿಮಿಷ ಹೆಚ್ಚುವರಿ ಪ್ರಯಾಣ!
ಮೆಜೆಸ್ಟಿಕ್ ಭಾಗದಿಂದ ಕೆಆರ್ ಸರ್ಕಲ್ ಹಾಗೂ ಮೌರ್ಯ ಸರ್ಕಲ್ ಮಾರ್ಗವಾಗಿ ವಿವಿಧ ಪ್ರದೇಶಗಳಿಗೆ ತೆರಳುತ್ತಿದ್ದ ಸವಾರರು ಈಗ ಕಡ್ಡಾಯವಾಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ. ಈ ಕುರಿತು ಪ್ರತಿಕ್ರಿಯಿಸಿದ ದಿನನಿತ್ಯದ ಪ್ರಯಾಣಿಕ ರಮೇಶ್ ಕೆ, 'ಪೀಕ್ ಹವರ್ಗಳಲ್ಲಿ (ಸಂಚಾರ ದಟ್ಟಣೆಯ ಸಮಯ) ಈಗಾಗಲೇ ರಸ್ತೆಗಳು ಜ್ಯಾಮ್ ಆಗಿರುತ್ತವೆ. ಈಗ ಮಾರ್ಗ ಬದಲಾವಣೆಯಿಂದಾಗಿ ಪ್ರತಿದಿನ ನನ್ನ ಕಚೇರಿ ಪ್ರಯಾಣಕ್ಕೆ ಕನಿಷ್ಠ 20 ನಿಮಿಷಗಳ ಹೆಚ್ಚುವರಿ ಸಮಯ ಬೇಕಾಗುತ್ತದೆ' ಎಂದು ಅಳಲು ತೋಡಿಕೊಂಡಿದ್ದಾರೆ.
ಸಂಚಾರ ಪೊಲೀಸರ ಸಲಹೆ: ಆನಂದ್ ರಾವ್ ಸರ್ಕಲ್ ಫ್ಲೈಓವರ್ ಬಳಸಿ
ಟ್ರಾಫಿಕ್ ಸಮಸ್ಯೆ ಎದುರಾಗದಂತೆ ತಡೆಯಲು ಸಂಚಾರ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಮೆಜೆಸ್ಟಿಕ್ ಕಡೆಯಿಂದ ರೇಸ್ ಕೋರ್ಸ್ ರಸ್ತೆಗೆ ತೆರಳುವ ವಾಹನ ಸವಾರರು ಆನಂದ್ ರಾವ್ ಸರ್ಕಲ್ ಫ್ಲೈಓವರ್ (Anand Rao Circle Flyover) ಅನ್ನು ಬಳಸುವಂತೆ ಸೂಚನೆ ನೀಡಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಹಿರಿಯ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು, "ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಬಾಟಲ್ನೆಕ್ (ಸಂಚಾರ ಅಡಚಣೆ) ತಡೆಯಲು ಸ್ಥಳದಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ. ವಾಹನ ಸವಾರರು ಆನಂದ್ ರಾವ್ ಸರ್ಕಲ್ ಫ್ಲೈಓವರ್ ಬಳಸಿದರೆ ದಟ್ಟಣೆಯಿಂದ ಪಾರಾಗಬಹುದು" ಎಂದು ಮನವಿ ಮಾಡಿದ್ದಾರೆ. ಮುಂದಿನ 2 ತಿಂಗಳ ಅವಧಿಯಲ್ಲಿ ಈ ವೈಟ್ ಟಾಪಿಂಗ್ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿಯನ್ನು ಅಧಿಕಾರಿಗಳು ಇಟ್ಟುಕೊಂಡಿದ್ದಾರೆ.


