ಸಿಸಿಬಿ ರೇಡ್ ಎಫೆಕ್ಟ್: ಅಪಾರ್ಟ್ಮೆಂಟ್ ಗಳಿಂದ ಬೆಂಗಾಲಿ ಕೆಲಸಗಾರರು ಬ್ಯಾನ್!
ಅಪಾರ್ಟ್ ಮೆಂಟ್ ಗಳಿಂದ ಬೆಂಗಾಲಿ ಕೆಲಸಗಾರರಿಗೆ ಕೋಕ್/ ಸಿಸಿಬಿ ಪೊಳಿಸರ ಕಾರ್ಯಾಚರಣೆ ನಂತರ ಎಚ್ಚೆತ್ತುಕೊಂಡ ನಿವಾಸಿಗಳು/ ನಮಗೆ ಬೆಂಗಾಲಿ ಮಾತನಾಡುವ ಕೆಲಸಗಾರರು ಬೇಡ ಎಂದು ಏಜೆನ್ಸಿಗಳಿಗೆ ಮನವಿ
ಬೆಂಗಳೂರು(ನ. 05) ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ ನಂತರ ಅಪಾರ್ಟ್ ಮೆಂಟ್ ಗಳು ಸಹ ಎಚ್ಚೆತ್ತುಕೊಂಡಿವೆ. ಬೆಂಗಳೂರಿನ ಅನೇಕ ಅಪಾರ್ಟ್ ಮೆಂಟ್ ಗಳು ಬಾಂಗ್ಲಾ ವಲಸೆ ಕೆಲಸಗಾರರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಬ್ರೇಕ್ ಹಾಕಲು ಚಿಂತನೆ ನಡೆಸಿವೆ.
ವೈಟ್ ಫೀಲ್ಡ್, ಮಾರತ್ ಹಳ್ಳಿ, ಮತ್ತು ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ಅಪಾರ್ಟ್ ಮೆಂಟ್ ಆಡಳಿತ ಬೆಂಗಾಲಿ ಮಾತನಾಡುವ ಸೆಕ್ಯೂರಿಟಿ ಗಾರ್ಡ್ ಸೇರಿದಂತೆ ಇತರ ಕೆಲಸಗಾರರನ್ನು ಕಳುಹಿಸಬಾರದು ಎಂದು ಏಜೆನ್ಸಿಗಳಿಗೆ ಸೂಚಿಸಿದೆ.
ಈ ಅಪಾರ್ಟ್ ಮೆಂಟ್ ನಲಲ್ಲಿದ್ದ ನಿವಾಸಿಗಳು ಅಸೋಸಿಯೇಶನ್ ಮೂಲಕ ಮನವಿ ಮಾಡಿಕೊಂಡಿವೆ, ಏಜೆನ್ಸಿಗಳಿಗೆ ಹಲವಾರು ಜನ ನಿವಾಸಿಗಳು ಇ ಮೇಲ್ ಮುಖಾಂತರವೂ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ 5 ವರ್ಷ ಹೊಸ ಅಪಾರ್ಟ್ ಮೆಂಟ್ ನಿಷೇಧ
ಬಾಂಗ್ಲಾದೇಶಿ ಕೆಲಸಗಾರರನ್ನು ನೇಮಕ ಮಾಡಿಕೊಳ್ಳಬೇಕೋ? ಬೇಡವೋ ಎಂಬುದರ ಕುರಿತಾಗಿ ಆಯಾ ಅಪಾರ್ಟ್ ಮೆಂಟ್ ನಿವಾಸಿಗಳು ಸಭೆ ಸಹ ನಡೆದಿದ್ದಾರೆ. ಇಲ್ಲಿ ಮತ್ತೊಂದು ಸಮಸ್ಯೆ ಸಹ ಉದ್ಭವಿಸಿದೆ. ಬಾಂಗ್ಲಾದೇಶಿಗಳನ್ನು ಬ್ಯಾನ್ ಮಾಡುವ ಭರದಲ್ಲಿ ಬೆಂಗಾಲಿ ಅಂದರೆ ಪಶ್ಚಿಮ ಬಂಗಾಳದಿಂದ ಕೆಲಸ ಅರಸಿ ಬಂದವರು ಕೆಲಸ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ನಾವೇನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ ಎಂದು ಬೆಂಗಾಲಿ ಕೆಲಸಗಾರರೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಕೆಲವೊಂದು ಬಾಂಗ್ಲಾ ಕುಟುಂಬಗಳು ಸಹ ಬಾಂಗ್ಲಾದೇಶಿ ಕೆಲಸಗಾರನ್ನೇ ನೇಮಕ ಮಾಡಿಕೊಂಡಿದ್ದವು. ಭಾಷಾ ಸಮಸ್ಯೆ ಹೊಗಲಾಡಿಸಲು ಅವರು ಬಾಂಗ್ಲಾ ಕೆಲಸಗಾರರನ್ನೇ ನೆಚ್ಚಿಕೊಂಡಿದ್ದರು. ಆದರೆ ಈಗ ಭಿನ್ನ ಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಹೀಗೆ ಮಾಡಿದ್ರೆ ಬಿಬಿಎಂಪಿಯಿಂದ ಭಾರೀ ದಂಡ ಬೀಳಲಿದೆ
ನಾವು ಈ ಕೂಡಲೇ ಅವರೆಲ್ಲರ ದಾಖಲೆ ಅಂದರೆ ಆಧಾರ್ ಕಾರ್ಡ್, ವೋಟರ್ ಐಡಿ ಸೇರಿದಂತೆ ಎಲ್ಲವನ್ನು ಕಲೆಕ್ಟ್ ಮಾಡಲು ತಿಳಿಸಿದ್ದೇವೆ. ಸುಮಾರು 100ಕ್ಕೂ ಅಧಿಕ ಬೆಂಗಾಲಿ ಮಾತನಾಡುವ ಕುಟುಂಬಗಳ ಪತ್ತೆಯಾಗಿದ್ದು ನಮ್ಮ ಬೆಂಗಾಲಿ ಅಸೋಸಿಯೇಶನ್ ಈ ಬಗ್ಗೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಬೆಂಗಾಲಿ ಕುಟುಂಬವೊಂದು ತಿಳಿಸಿದೆ. ಬಾಂಗ್ಲಾ ಮಾತನಾಡುವ ಕೆಲಸಗಾರರ ಜಾಗದಲ್ಲಿ ಉತ್ತರ ಕರ್ನಾಟಕದ ಜನರನ್ನು ಸರ್ವೀಸ್ ಗೆ ಬಳಸಿಕೊಂಡ ಮಾಹಿತಿಯೂ ಲಭ್ಯವಾಗಿದೆ.
ಒಟ್ಟಿನಲ್ಲಿ ಬೆಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ ನಂತರ ಒಂದು ಕಡೆ ಬೆಂಗಾಲಿ ಮೂಲದ ಕೆಲಸಗಾರರಿಗೆ ತಾಪತ್ರಯ ಉಂಟಾಗಿದ್ದರೆ ಇನ್ನೊಂದು ಕಡೆ ಅಪಾರ್ಟ್ ಮೆಂಟ್ ನಿವಾಸಿಗಳಲ್ಲಿ ಅವ್ಯಕ್ತ ಭಯ ಆವರಿಸಿದೆ.