Asianet Suvarna News Asianet Suvarna News

Rajakaluve Encroachment ತೆರವಿಗೆ ಬಿಬಿಎಂಪಿ ಸ್ಪೆಷಲ್‌ ಡ್ರೈವ್‌; ನಿಮ್ಮ ಮನೆಯೂ ನೆಲಸಮವಾಗತ್ತಾ?

Bengaluru Rajakaluve Encroachment: ರಾಜಕಾಲುವೆಯನ್ನು ಒತ್ತುವರಿ ಮಾಡಿ ಕಟ್ಟಿದ ಕಟ್ಟಡಗಳನ್ನು ತೆರವುಗೊಳಿಸಲು ಬಿಬಿಎಂಪಿ ಈ ಬಾರಿ ಕಠಿಣ ನಿರ್ಧಾರ ತಳೆದಿದೆ. ಇಂದಿನಿಂದ ಒತ್ತವರಿ ತೆರವು ಕಾರ್ಯಾಚರಣೆ ಆರಂಭವಾಗಿದ್ದು ಹಲವು ಮನೆಗಳು, ಟೆಕ್‌ ಪಾರ್ಕ್‌ಗಳು ಮತ್ತು ಬಡಾವಣೆಗಳನ್ನು ತೆರವುಗೊಳಿಸುವುದಾಗಿ ಪಾಲಿಕೆ ತಿಳಿಸಿದೆ. 

BBMP to bulldoze rajakaluve encroachment in bengaluru check status of your home
Author
First Published Sep 12, 2022, 2:02 PM IST

ಬೆಂಗಳೂರು: ಮಹದೇವಪುರ ವಲಯದ ರೈನ್‌ ಬೋ ಡ್ರೈವ್‌, ಇಕೋ ಸ್ಪೇಸ್‌, ಅನುಗ್ರಹ ಲೇಔಟ್‌, ಸಾಯಿಲೇಔಟ್‌ ಸೇರಿದಂತೆ ಇನ್ನಿತರೆ ಕಡೆ ಇಂದಿನಿಂದ ದೊಡ್ಡ ಮಟ್ಟದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವುದಕ್ಕೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ. ಪ್ರತಿ ಬಾರಿ ಅತೀವೃಷ್ಟಿಯಾದಾಗಲೂ ರಾಜಕಾಲುವೆ ಒತ್ತುವರಿ ತೆರವಿನ ಬಗ್ಗೆ ಮಾತುಗಳು ಕೇಳಿ ಬರುತ್ತವೆಯೇ ಹೊರತು ಅದು ಸರಿಯಾದ ರೀತಿಯಲ್ಲಿ ಕಾರ್ಯರೂಪಕ್ಕೆ ಬರುವುದಿಲ್ಲ. ಆದರೆ ಈ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಅಪಖ್ಯಾತಿಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತೆರವು ಕಾರ್ಯಾಚಾರಣೆಯನ್ನು ಶತಾಯಗತಾಯ ಮಾಡಿಯೇ ಸಿದ್ಧ ಎಂಬ ನಿರ್ಧಾರಕ್ಕೆ ಬಂದಂತಿದೆ. ನಗರದ ಹಲವೆಡೆ ಈಗಾಗಲೇ ಒತ್ತುವರಿಯಾದ ಕೆಲ ಟೆಕ್‌ ಪಾರ್ಕ್‌ಗಳು, ಮನೆಗಳನ್ನು ತೆರವುಗೊಳಿಸಲಾಗಿದೆ. 

ನಗರದಲ್ಲಿ ನಿರಂತವಾಗಿ ಸುರಿದ ಮಳೆಗೆ ಮಹದೇವಪುರದ 20ಕ್ಕೂ ಹೆಚ್ಚಿನ ಬಡಾವಣೆಗಳು ಜಲಾವೃತವಾಗಿದ್ದವು. ಅಲ್ಲಿದ್ದ ರಾಜಕಾಲುವೆಗಳ ಒತ್ತುವರಿಯಿಂದಲೇ ಪ್ರವಾಹ ಸೃಷ್ಟಿಯಾಗಲು ಕಾರಣ ಎಂದು ತಿಳಿದಿರುವ ಬಿಬಿಎಂಪಿ ಅದಕ್ಕಾಗಿ ಕಾರ್ಯಾಚರಣೆ ಮಾಡಲು ನಿರ್ಧರಿಸಿದೆ. ಕಳೆದ ಸೆ.1ರಿಂದ 9ರವರೆಗೆ ಕೇವಲ ಖಾಲಿ ಜಾಗ, ಕಾಂಪೌಡ್‌ಗಳನ್ನು ಕೆಡವಿ ತೆರವು ಮಾಡಲಾಗಿತ್ತು. ಬಿಬಿಎಂಪಿ ಅಧಿಕಾರಿಗಳು ಸೋಮವಾರದಿಂದ ರಾಜಕಾಲುವೆ ಮೇಲೆ ನಿರ್ಮಿಸಲಾದ ಕಟ್ಟಡಗಳನ್ನು ತೆರವು ಮಾಡಲು ಮುಂದಾಗಿದ್ದಾರೆ.

ರೈನ್‌ಬೋ ಡ್ರೈವ್‌ ಲೇಔಟ್‌ನಲ್ಲಿ 15ಕ್ಕೂ ಹೆಚ್ಚಿನ ಕಟ್ಟಡಗಳು ರಾಜಕಾಲುವೆ ಮುಚ್ಚಿ ನಿರ್ಮಾಣವಾಗಿರುವುದನ್ನು ಪತ್ತೆ ಮಾಡಲಾಗಿದೆ. ಜತೆಗೆ ಹೊರವರ್ತುಲ ರಸ್ತೆಯ ಇಕೋ ಸ್ಪೇಸ್‌ನಲ್ಲಿನ ದೊಡ್ಡ ಕಟ್ಟಡಗಳು ಕೂಡ ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಲಾಗಿದೆ. ಈ ಕುರಿತು ವರದಿ ಸಿದ್ಧಪಡಿಸಿರುವ ಬಿಬಿಎಂಪಿ ಅಧಿಕಾರಿಗಳು ಸೋಮವಾರ ಆ ಭಾಗದಲ್ಲಿ ತೆರವು ಕಾರ್ಯಾಚರಣೆ ಆರಂಭಿಸಲಿದೆ.

ಸೋಮವಾರದಿಂದ ಸರ್ವೇ ಸಿಬ್ಬಂದಿಯನ್ನು ಜತೆಗೆ ಕರೆದುಕೊಂಡು ಸ್ಥಳದಲ್ಲೇ ಒತ್ತುವರಿ ಗುರುತಿಸಿ, ನಂತರ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ. ಇನ್ನು ಮುಂದೆ ಯಾರಿಗೂ ನೋಟಿಸ್‌ ನೀಡುವುದಿಲ್ಲ, ಬದಲಿಗೆ ನಕ್ಷೆಯಂತೆ ರಾಜಕಾಲುವೆ ಒತ್ತುವರಿಯನ್ನು ಪತ್ತೆ ಮಾಡಿ ತೆರವು ಕಾರ್ಯಾಚರಣೆ ನಡೆಸಲಾಗುವುದು. ಆ ಮೂಲಕ ಮುಂಚೆಯೇ ಒತ್ತುವರಿದಾರರು ತೆರವು ಕಾರ್ಯಾಚರಣೆಗೆ ಅಡ್ಡಿಯುಂಟು ಮಾಡುವ ಕ್ರಮಗಳನ್ನು ಕೈಗೊಳ್ಳಲು ಬಿಡುವುದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

"ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಮತ್ತೆ ಪ್ರವಾಹ ಸೃಷ್ಟಿಯಾಗದಂತೆ ಎಲ್ಲ ಕ್ರಮ ಕೊಳ್ಳಲಾಗುತ್ತಿದ್ದು, ಈ ನಿಟ್ಟಿನಲ್ಲಿ ಸೋಮವಾರದಿಂದ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳಿಸುವುದಕ್ಕೆ ನಿರ್ಧರಿಸಲಾಗಿದೆ," ಎಂದು ಬಿಬಿಎಂಪಿ ಮಹದೇವಪುರ ವಲಯ ಮುಖ್ಯ ಇಂಜಿನಿಯರ್‌ ಬಸವರಾಜ ಕಬಾಡೆ ತಿಳಿಸಿದ್ದಾರೆ. 

ಇದನ್ನೂ ಓದಿ: Bengaluru: 51 ವರ್ಷಗಳಲ್ಲಿ ದಾಖಲೆಯ 709 ಎಂ.ಎಂ ಮಳೆ ಸುರಿದಿದೆ: ಬಿಬಿಎಂಪಿ ಮುಖ್ಯ ಆಯುಕ್ತ

ದಶಕಗಳ ನಂತರ ದಾಖಲೆ ಮಳೆಗೆ ಸಾಕ್ಷಿಯಾದ ಸಿಲಿಕಾನ್‌ ಸಿಟಿ:

 

ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಸಂಜೆಯ ನಂತರ ನಿರಂತರವಾಗಿ ಮಳೆಯಾಗುತ್ತಿದ್ದು, ನಗರದ ಜೀವನ ಅಸ್ತವ್ಯಸ್ತವಾಗಿದೆ. ಮಹಾಮಳೆ ಗೆ ಜನರು ನಲುಗಿ ಹೋಗಿದ್ದಾರೆ. ಹಲವೆಡೆ ಮರದ ಕೊಂಬೆಗಳು ಮುರಿದು ರಸ್ತೆಗೆ ಬಿದ್ದಿದೆ. 1998ರ ಬಳಿಕ ಬೆಂಗಳೂರಿನಲ್ಲಿ ಆಗಿರುವ ಮಹಾಮಳೆ  ಇದಾಗಿದೆ. ಈ ಬಗ್ಗೆ ಮಾತನಾಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್,  ಆಗಸ್ಟ್ 30 ಮತ್ತು 31 ರ ರಾತ್ರಿ ಬೆಂಗಳೂರಿನಲ್ಲಿ ಬಹಳ ಮಳೆ ಆಗಿತ್ತು. ಆದರೆ ಹೆಚ್ಚೇನು ಹಾನಿ ಆಗಿರಲಿಲ್ಲ. ಆದ್ರೇ ಭಾನುವಾರ ಸುರಿದ ಮಳೆಯಿಂದ ಬಹಳಷ್ಟು ಹಾನಿಯಾಗಿದೆ. ಬೊಮ್ಮನಹಳ್ಳಿ, ಮಹಾದೇವ ಪುರದಲ್ಲಿ ಈಸ್ಟ್ ಝೋನ್ ನಲ್ಲಿ ಹೆಚ್ಚಿನ ಮಳೆ ಆಗಿದೆ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ 330mm ಮಳೆ ಆಗಬೇಕಿತ್ತು. ಆದರೆ ಭಾನುವಾರ 709mm ಮಳೆ ಆಗಿದೆ. ಇದು 1998ರ ಬಳಿಕ ಸುರಿದ ಸೆಕೆಂಡ್ ಹೈಯಸ್ಟ್ ಮಳೆ. 1998ರಲ್ಲಿ 725mm ಮಳೆ ಆಗಿತ್ತು ಎಂದು ಮಾಹಿತಿ ನೀಡಿದ್ದಾರೆ. ಸೆ. 3ರಂದು ಕೂಡ  ತುಷಾರ್ ಗಿರಿನಾಥ್ ಸಿಟಿ ರೌಂಡ್ಸ್ ಹೊಡೆದು ಮಳೆ ಹಾನಿ ಸಂಬಂಧ ತಪಾಸಣೆ ನಡೆಸಿದ್ದರು. ಕೆ.ಆರ್.ಪುರಂ, ಗೊರುಗುಂಟೆಪಾಳ್ಯ, ಸುಮನಹಳ್ಳಿ ಸೇರಿ ಹಲವೆಡೆ  ಭೇಟಿ ನೀಡಿದ್ದರು. ಆಯುಕ್ತರಿಗೆ ಅಧಿಕಾರಿಗಳು ಸಾಥ್ ನೀಡಿದ್ದರು.  

ಇದನ್ನೂ ಓದಿ: Heavy Rain in Bengaluru: ನಗರದಲ್ಲಿ ಮಳೆರಾಯನ ಆರ್ಭಟ: ಯೆಲ್ಲೋ ಅಲರ್ಟ್

ರಸ್ತೆಗಳು ಜಲಾವೃತ: ನಗರದ ಕಸ್ತೂರಿ ಬಾ ರಸ್ತೆ, ರಿಚ್‌ಮಂಡ್‌ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದ್ದವು. ತುಮಕೂರು ರಸ್ತೆ, ಮಲ್ಲೇಶ್ವರ, ಎಂಜಿ ರಸ್ತೆ, ಡಬ್ಬಲ್‌ ರೋಡ್‌, ಆನಂದ್‌ ರಾವ್‌ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ಹಾಗೂ ಅಂಡರ್‌ ಪಾಸ್‌ನಲ್ಲಿ ನೀರು ನಿಂತುಕೊಂಡ ಪರಿಣಾಮ ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಯಿತು. ಶಿವಾನಂದ ವೃತ್ತದ ಬಳಿ ಮ್ಯಾನ್‌ ಹೋಲ್‌ನಿಂದ ನೀರು ಹೊರ ಬಂದು ಸಮಸ್ಯೆ ಉಂಟಾಯಿತು.

ಯೆಲ್ಲೋ ಅಲರ್ಚ್‌: ನಗರದಲ್ಲಿ ಮುಂದಿನ ಮೂರ್ನಾಲ್ಕು ದಿನ ಭರ್ಜರಿ ಮಳೆಯಾಗುವ ಸಾಧ್ಯತೆಯಿದೆ. ಬುಧವಾರ ಬೆಳಗ್ಗೆ 8.30ರ ತನಕ ನಗರಕ್ಕೆ ‘ಯೆಲ್ಲೋ ಅಲರ್ಚ್‌’ (6.45 ಸೆಂ. ಮೀ ನಿಂದ 11.55 ಸೆಂ.ಮೀ) ಎಚ್ಚರಿಕೆ ನೀಡಲಾಗಿದೆ.

ರಾಜಮಹಲ್‌ ಗುಟ್ಟಹಳ್ಳಿ 8ಸೆಂ.ಮೀ, ಬಾಣಸವಾಡಿ ಮತ್ತು ವಿದ್ಯಾಪೀಠ 7.2, ಸಂಪಂಗಿರಾಮನಗರ 6.8, ಸೆಂ.ಮೀ, ಬೆಳ್ಳಂದೂರು 6.7 ಸೆಂ.ಮೀ, ವರ್ತೂರು 5.8, ಮಾರತಹಳ್ಳಿ 5.6, ಹಂಪಿನಗರ 4.4 ಸೆಂ.ಮೀ.

ಇದನ್ನೂ ಓದಿ: Heavy Rain in Bengaluru: ಇನ್ನೂ ಮೂರು ಗಂಟೆ ಭಾರಿ ಮಳೆ; ಹವಾಮಾನ ಇಲಾಖೆ ಎಚ್ಚರಿಕೆ

ಬಾಗಲಕುಂಟೆ ಮತ್ತು ರಾಜರಾಜೇಶ್ವರಿ ನಗರ (2), ಎಚ್‌ಎಎಲ್‌ ತಲಾ 6.4, ದೊಡ್ಡನೆಕ್ಕುಂದಿ 5.4, ಹೆಮ್ಮಿಗೆಪುರ 3.3, ಕೊನೇನ ಅಗ್ರಹಾರ 4.9, ದೊಡ್ಡಬಿದಿರಕಲ್ಲು 2.8, ದಯಾನಂದನಗರ 2.5, ಕಮ್ಮನಹಳ್ಳಿ ಮತ್ತು ಎಚ್‌.ಗೊಲ್ಲಹಳ್ಳಿ ತಲಾ 2.3, ಮನೋರಾಯನಪಾಳ್ಯ ಮತ್ತು ಶೆಟ್ಟಿಹಳ್ಳಿ ತಲಾ 2.1 ಸೆಂ.ಮೀ ಮಳೆಯಾಗಿದೆ.

Follow Us:
Download App:
  • android
  • ios