ವೈಟ್ಫೀಲ್ಡ್ನ ಹೋಪ್ಫಾರ್ಮ್ ಅಂಡರ್ಪಾಸ್ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ₹40 ಕೋಟಿ ಮೌಲ್ಯದ ಸರ್ಕಾರಿ ಜಮೀನನ್ನು 10 ವರ್ಷಗಳ ಹೋರಾಟದ ನಂತರ ನಗರ ಪಾಲಿಕೆ ವಶಕ್ಕೆ ಪಡೆದಿದೆ. ಈ ಒತ್ತುವರಿ ತೆರವಿನಿಂದ ವೈಟ್ಫೀಲ್ಡ್ ರಸ್ತೆಯ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಸಿಗಲಿದ್ದು, ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಬೆಂಗಳೂರು: ವೈಟ್ಫೀಲ್ಡ್ನ ಹೋಪ್ಫಾರ್ಮ್ ಅಂಡರ್ಪಾಸ್ ನಿರ್ಮಾಣ ಕಾಮಗಾರಿಗೆ ಅಗತ್ಯವಿದ್ದ 24 ಗುಂಟೆ ಸರ್ಕಾರಿ ಜಮೀನನ್ನು ಖಾಸಗಿ ಒತ್ತುವರಿದಾರರೊಂದಿಗಿನ 10 ವರ್ಷಗಳ ಹೋರಾಟದ ಬಳಿಕ ಪೂರ್ವ ನಗರ ಪಾಲಿಕೆ ವಶಕ್ಕೆ ಪಡೆದಿದೆ.
ಪಟ್ಟಂದೂರು ಅಗ್ರಹಾರ ಗ್ರಾಮದ ಸರ್ವೇ ಸಂಖ್ಯೆ 40/2ರಲ್ಲಿನ ₹40 ಕೋಟಿ ಮೌಲ್ಯದ ಈ ಸರ್ಕಾರಿ ಜಾಗವನ್ನು ಕಂದಾಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ಒತ್ತುವರಿ ತೆರವು ಮಾಡಿ ವಶಕ್ಕೆ ಪಡೆಯಲಾಗಿದೆ. ಇದರಿಂದ ವೈಟ್ಫೀಲ್ಡ್ ರಸ್ತೆಯಲ್ಲಿನ ಒಂದು ಪ್ರಮುಖ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಒದಗಿಸಲು ಸಾಧ್ಯವಾಗಿದೆ ಎಂದು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್.ರಮೇಶ್ ತಿಳಿಸಿದ್ದಾರೆ.
ಅಂಡರ್ಪಾಸ್ ಯೋಜನೆಯ ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿನ ಮೂರ್ನಾಲ್ಕು ತಿಂಗಳೊಳಗೆ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಸಂಚಾರ ಮುಕ್ತಗೊಳಿಸಲು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಒತ್ತುವರಿಯಾಗದಂತೆ ಕ್ರಮಕ್ಕೆ ಸೂಚನೆ
ಚನ್ನಸಂದ್ರ ಗ್ರಾಮದ ಸರ್ವೇ ನಂಬರ್ 115ರಲ್ಲಿ ಇರುವ ಸರ್ಕಾರಿ ಗೋಮಾಳ ಹಾಗೂ ಸರ್ಕಾರಿ ಸ್ವತ್ತಿನ ಸ್ಥಳ ಪರಿಶೀಲಿಸಿದ ಆಯುಕ್ತರು ಅಂದಾಜು 34 ಎಕರೆ ಸರ್ಕಾರಿ ಗೋಮಾಳ ಮತ್ತು ಇನ್ನೊಂದು 4 ಎಕರೆ ಸರ್ಕಾರಿ ಸ್ವತ್ತಿನ ಗಡಿಯನ್ನು ಗುರುತಿಸಿ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರಸ್ತೆ ಅಭಿವೃದ್ಧಿ
ಬ್ರಿಗೇಡ್ ಲೇಕ್ಫ್ರಂಟ್ ಅಪಾರ್ಟ್ಮೆಂಟ್ ಸಮೀಪದ ಔಟರ್ ರಿಂಗ್ ರಸ್ತೆಯಿಂದ ಸೀತಾರಾಮಪಾಳ್ಯ ಕೆರೆಯವರೆಗೆ ಪ್ರಸ್ತಾಪಿತ ರಸ್ತೆ ಅಭಿವೃದ್ಧಿಗೆ ಅಗತ್ಯವಿರುವ ಇರುವ ಸುಮಾರು 7,225 ಚದರ ಮೀಟರ್ ವಿಸ್ತೀರ್ಣದ ಪಾಲಿಕೆ ಜಾಗವನ್ನು ಆಯುಕ್ತರು ಪರಿಶೀಲಿಸಿದರು. ಜಾಗದ ಗಡಿ ಗುರುತಿಸಿ ಒತ್ತುವರಿಯಾಗಿದ್ದರೆ ತೆರವುಗೊಳಿಸುವಂತೆ ಆಯುಕ್ತ ಡಿ.ಎಸ್. ರಮೇಶ್ ಸೂಚಿಸಿದರು.


