ಬೆಂಗಳೂರಿನ ಕೆಎಂಎಫ್ ಕಚೇರಿ ಬಳಿ ನಡೆದ ಗೂಡ್ಸ್ ವಾಹನ ಅಪಘಾತದಲ್ಲಿ ವ್ಯಕ್ತಿಯೊಬ್ಬ ತೀವ್ರವಾಗಿ ಗಾಯಗೊಂಡಿದ್ದ. ಆದರೆ, ಆಸ್ಪತ್ರೆಗೆ ಸೇರಿಸುವ ಬದಲು ಸ್ಥಳೀಯರು ಹಾಗೂ ಸ್ನೇಹಿತ ಆತನನ್ನು ಫುಟ್‌ಪಾತ್‌ನಲ್ಲಿ ಕೂರಿಸಿ ಹೋಗಿದ್ದರಿಂದ, ರಾತ್ರಿಯಿಡೀ ನರಳಿ ಆತ ಪ್ರಾಣಬಿಟ್ಟಿದ್ದಾನೆ. 

ಬೆಂಗಳೂರು (ನ.9): ಒಂದೇ ಒಂದು ಫೋನ್‌ಕಾಲ್‌ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದರೆ, ಆತ ಬದುಕುಳಿದು ಬಿಡುತ್ತಿದ್ದ. ಇಲ್ಲವೇ ತಾವೇ ಒಂದು ಹೆಜ್ಜೆ ಮುಂದೆ ಹೋಗಿ ಆತನನ್ನು ಆಸ್ಪತ್ರೆಗೆ ಸೇರಿಸಿದ್ದರೂ, ಒಂದು ಜೀವ ಉಳಿಸಿದ ಪುಣ್ಯ ಅವರಿಗೆ ಸಿಕ್ಕಿಬಿಡುತ್ತಿತ್ತು. ಆದರೆ, ಇದಾವುದನ್ನೂ ಮಾಡದೇ ಆಕ್ಸಿಡೆಂಟ್‌ ಆಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಅವರು ಫುಟ್‌ಪಾತ್‌ನಲ್ಲಿ ಕೂರಿಸಿ ಹೋಗಿದ್ದರು. ಇದರ ಪರಿಣಾಮವಾಗಿ ವ್ಯಕ್ತಿ ರಾತ್ರಿಯಿಡೀ ಒದ್ದಾಡಿ ನರಳಿ ನರಳಿ ಪ್ರಾಣಬಿಟ್ಟಿದ್ದಾನೆ.

ಬೆಂಗಳೂರಿನ ಕೆಎಂಎಫ್‌ ಕಚೇರಿ ಮುಂದಿನ ಫುಟ್‌ಪಾತ್‌ನಲ್ಲಿಯೇ ವ್ಯಕ್ತಿಯೊಬ್ಬ ಜೀವಬಿಟ್ಟಿದ್ದಾನೆ. ಸ್ನೇಹಿತ ಮತ್ತು ಸ್ಥಳೀಯರ ನಿರ್ಲಕ್ಷ್ಯದಿಂದಾಗಿ ರಾತ್ರಿಯಿಡೀ ಒದ್ದಾಡಿ ವ್ಯಕ್ತಿ ಪ್ರಾಣಬಿಟ್ಟಿದ್ದಾನೆ. ಮೇಲ್ನೋಟಕ್ಕೆ ಆಕ್ಸಿಡೆಂಟ್‌ ರೀತಿ ಕಂಡಿರುವುದರಿಂದ ಅದೇ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಮೈಕೋ ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಡರಾತ್ರಿ ಆಗಿದ್ದ ಆಕ್ಸಿಡೆಂಟ್‌

KMF ಮುಂದೆ ಆ್ಯಕ್ಸಿಡೆಂಟ್ ಆಗಿ,ಗೂಡ್ಸ್ ವಾಹನ ಪಲ್ಟಿಯಾಗಿತ್ತು. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ ಸಾವು ಕಂಡಿದ್ದಾನೆ. ವಾಹನ ಆಕ್ಸಿಡೆಂಟ್‌ ಆಗಿರುವುದನ್ನು ನೋಡಿದ ಸ್ಥಳೀಯರು ವಾಹನ ನಿಲ್ಲಿಸಿ ಇಬ್ಬರು ಸಹಾಯ ಮಾಡಿದ್ದರು. ತೀವ್ರ ಗಾಯಗೊಂಡಿದ್ದ ಮೃತ ವ್ಯಕ್ತಿಯನ್ನು ಫುಟ್‌ಪಾತ್‌ ಮೇಲೆ ಕೂರಿಸಿದ್ದರು. ತೀವ್ರ ಗಾಯಗೊಂಡು ಒದ್ದಾಡುತ್ತಿದ್ದ ವ್ಯಕ್ತಿ ಕೆಲ ಹೊತ್ತಿನ ನಂತರ ಪ್ರಜ್ಞೆ ತಪ್ಪಿ ಬಿದ್ದಿದ್ದ.

ಅದನ್ನ ನೋಡಿ ಭಯಗೊಂಡು ಗೂಡ್ಸ್ ವಾಹನ ಚಾಲಕ ಎಸ್ಕೇಪ್ ಆಗಿದ್ದ.ಯಾರೂ ಸಹಾಯಕ್ಕೆ ಬರದ ಹಿನ್ನಲೆಯಲ್ಲಿ 30-35ರ ವಯಸ್ಸಿನ ವ್ಯಕ್ತಿ ರಾತ್ರಿಯಿಡೀ ಒದ್ದಾಡಿ ಜೀವ ಬಿಟ್ಟಿದ್ದಾನೆ. ಸ್ಥಳೀಯರು ಅಥವಾ ಸ್ನೇಹಿತ ಪೊಲೀಸರಿಗೆ ಒಂದು ಕರೆ ಮಾಡಿದ್ದರೂ ಈ ಜೀವ ಉಳಿಯುತ್ತಿತ್ತು.

ಸದ್ಯ ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚುವಲ್ಲಿ ಪೊಲೀಸರು ನಿರತರಾಗಿದ್ದಾರ. ಸದ್ಯ ಅಪಘಾತ ಪ್ರಕರಣ ದಾಖಲಿಸಿಕೊಂಡು ಮೈಕೋ ಲೇಔಟ್ ಸಂಚಾರಿ ಪೊಲೀಸರು ತನಿಖೆ ಶುರು ಮಾಡಿದ್ದಾರೆ.