ಮಾವು ಮೇಳದಿಂದ ಬೆಳೆಗಾರರು ಮತ್ತು ಗ್ರಾಹಕರ ನಡುವೆ ಸಂಪರ್ಕ ಸೇತುವೆಯಾಗುವ ಜತೆಗೆ ಕಡಿಮೆ ದರದಲ್ಲಿ ಗ್ರಾಹಕರಿಗೆ ಗುಣಮಟ್ಟದ ತಾಜಾ ಮಾವಿನ ಹಣ್ಣು ಲಭ್ಯವಾಗಲಿವೆ ಎಂದು ತೋಟಗಾರಿಕಾ ಇಲಾಖೆ ನಿರ್ದೇಶಕ ಡಿ.ಎಸ್‌. ರಮೇಶ್‌ ತಿಳಿಸಿದ್ದಾರೆ.

ಬೆಂಗಳೂರು : ಮಾವು ಮೇಳದಿಂದ ಬೆಳೆಗಾರರು ಮತ್ತು ಗ್ರಾಹಕರ ನಡುವೆ ಸಂಪರ್ಕ ಸೇತುವೆಯಾಗುವ ಜತೆಗೆ ಕಡಿಮೆ ದರದಲ್ಲಿ ಗ್ರಾಹಕರಿಗೆ ಗುಣಮಟ್ಟದ ತಾಜಾ ಮಾವಿನ ಹಣ್ಣು ಲಭ್ಯವಾಗಲಿವೆ ಎಂದು ತೋಟಗಾರಿಕಾ ಇಲಾಖೆ ನಿರ್ದೇಶಕ ಡಿ.ಎಸ್‌. ರಮೇಶ್‌ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ‘ಮಾವು ಮೇಳ’ಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಮೇಳದಲ್ಲಿ ಗ್ರಾಹಕರಿಗೆ ತಮಗಿಷ್ಟವಾದ ತಳಿಯ ಮಾವನ್ನು ಆರಿಸಿಕೊಳ್ಳಲೂ ಅವಕಾಶವಿದೆ. ಮೇಳದಿಂದಾಗಿ ಮಾವು ಬೆಳೆದ ಬೆಳೆಗಾರರು ಮಧ್ಯವರ್ತಿಗಳ ಸಹಾಯವಿಲ್ಲದೆ ಮಾರಾಟದಲ್ಲಿ ತೊಡಗುತ್ತಾರೆ. ಇದರಿಂದಾಗಿ ಕಡಿಮೆ ಬೆಲೆಗೆ ಮಾವಿನ ಹಣ್ಣು ಸಿಗಲಿವೆ ಎಂದರು.

ಬೀದರ್‌ನ ಕರ್ನಾಟಕ ಪಶುಸಂಗೋಪನಾ ವಿವಿ ಕುಲಪತಿ ಡಾ.ಕೆ.ಸಿ.ವೀರಣ್ಣ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಸಿ.ಜಿ.ನಾಗರಾಜು, ಆಡಳಿತ ಮಂಡಳಿ ಸದಸ್ಯ ಡಾ.ಎಚ್.ಎಲ್.ಹರೀಶ್, ಕಾರ್ಯಕಾರಿ ಸಮಿತಿ ಸದಸ್ಯ ಡಾ.ಕೆ.ಶಿವರಾಮು ಮತ್ತಿತರರು ಹಾಜರಿದ್ದರು.

ತೋತಾಪುರಿ, ದಸೇರಿ, ಸಿಂಧೂರ, ಬಂಗನ್‌ಪಲ್ಲಿ, ಆಲ್ಫೋನ್ಸಾ, ಮಲ್ಲಿಕಾ ಸೇರಿದಂತೆ ಹಲವು ತಳಿಯ ಮಾವಿನ ಹಣ್ಣುಗಳು ಮೇಳದಲ್ಲಿ ಲಭ್ಯವಿವೆ.

ಗಮನಸೆಳೆದ ದುಬಾರಿ ‘ಮಿಯಾಜಾಕಿ’ ಮಾವು

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಳೆಗಾರ ಗಣೇಶ್‌ ಮೇಳಕ್ಕೆ ತಂದಿರುವ ಜಪಾನ್‌ ಮೂಲದ ದುಬಾರಿ ಬೆಲೆಯ ‘ಮಿಯಾಜಾಕಿ’ ತಳಿ ಮಾವು ಮೇಳದಲ್ಲಿ ವಿಶೇಷ ಗಮನ ಸೆಳೆಯಿತು.

‘ಈ ಮಿಯಾಜಾಕಿ ಹಣ್ಣು ಭಾರೀ ಸಿಹಿಯಾಗಿದ್ದು ಒಂದು ಮಾವಿನಹಣ್ಣು 700 ರಿಂದ 800 ಗ್ರಾಂ ತೂಕವಿದೆ. ಒಂದು ಹಣ್ಣಿಗೆ ಎರಡು ಸಾವಿರ ರುಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ. ಜಪಾನ್‌ನಲ್ಲಿ ಈ ಮಾವಿನಹಣ್ಣು ಕೆ.ಜಿ.ಗೆ 2.5 ಲಕ್ಷ ರುಪಾಯಿಗೆ ಮಾರಾಟವಾಗುತ್ತದೆ. ತಿಂಗಳಾದರೂ ಈ ಹಣ್ಣು ಕೆಟ್ಟು ಹೋಗುವುದಿಲ್ಲ. ಆರೋಗ್ಯಕ್ಕೂ ಬಹಳ ಒಳ್ಳೆಯದು’ ಎನ್ನುತ್ತಾರೆ ಗಣೇಶ್‌.