ಬೆಂಗಳೂರಿನಲ್ಲಿ 100 ಹಾಸಿಗೆಯ ಸಂಯೋಜಿತ ಆಯುಷ್ ಆಸ್ಪತ್ರೆಗೆ 125 ಕೋಟಿ ರೂ ಹೂಡಿಕೆ, ಕೈಗೆಟಕುವ ದರದಲ್ಲಿ ಆಯುಷ್ ಆರೋಗ್ಯಸೇವಾ ವಲಯ ಲಭ್ಯವಾಗುವಂತೆ ಮಾಡಲು ಸೌಖ್ಯ ಮುಂದಾಗಿದೆ. ಏನಿದರ ವಿಶೇಷತೆ
ಬೆಂಗಳೂರು (ನ.11) ಬೆಂಗಳೂರಿನಲ್ಲಿ 100 ಹಾಸಿಗೆಗಳ ಆಯುಷ್ ಆಸ್ಪತ್ರೆಗೆ ಬರೋಬ್ಬರಿ 125 ಕೋಟಿ ರೂಪಾಯಿ ಹಣವನ್ನು ಸೌಖ್ಯ ಹೂಡಿಕೆ ಮಾಡುತ್ತಿದೆ. ಇದಕ್ಕಾಗಿ ಹೊಸಕೋಟೆಯ ತನ್ನ ಕ್ಯಾಂಪಸ್ನಲ್ಲಿ ಆರು ಎಕರೆ ಜಮೀನನ್ನು ಸ್ವಾಧೀನಕ್ಕೆ ಪಡೆದುಕೊಂಡಿದೆ. ಸರ್ವಾಂಗೀಣ ಚಿಕಿತ್ಸೆಗಳಿಂದಾಗಿ ವಿಶ್ವದಾದ್ಯಂತ ಹೆಸರು ಸಂಪಾದಿಸಿರುವ ಸೌಖ್ಯ ಇಂಟರ್ನ್ಯಾಷನಲ್ ಹೋಲಿಸ್ಟಿಕ್ ಹೆಲ್ತ್ ಸೆಂಟರ್, ಬೆಂಗಳೂರಿನ ಸಂಯೋಜಿತ ಆರೋಗ್ಯಸೇವೆಗಳನ್ನು ಇನ್ನಷ್ಟು ಕೈಗೆಟಕುವಂತೆ ಮಾಡಲು ಹೂಡಿಕೆ ಮಾಡಿದೆ. ಇಡೀ ಯೋಜನೆಯ ವೆಚ್ಚವು ರೂ 125 ಕೋಟಿ ಎಂದು ಅಂದಾಜು ಮಾಡಲಾಗಿದೆ. ಜಮೀನು ಸ್ವಾಧೀನಕ್ಕೆ ರೂ 50 ಕೋಟಿ, ನಿರ್ಮಾಣ ಹಾಗೂ ಅಭಿವೃದ್ಧಿಗೆ ರೂ 75 ಕೋಟಿ ವಿನಿಯೋಗ ಇದರ ಭಾಗವಾಗಿದೆ. ನಿರ್ಮಾಣ ಆಗಲಿರುವ ಆಸ್ಪತ್ರೆಯು ಗಂಭೀರ ಸ್ವರೂಪದ, ಬಹುಕಾಲದಿಂದ ಇರುವ, ಅಪರೂಪದ, ಸಂಕೀರ್ಣವಾದ ವೈದ್ಯಕೀಯ ಸಮಸ್ಯೆಗಳಿಗೆ ಅಲೋಪಥಿ, ಆಯುರ್ವೇದ, ಹೋಮಿಯೋಪಥಿ, ನ್ಯಾಚುರೋಪಥಿ, ಸಿದ್ಧ, ಯುನಾನಿ ಮತ್ತು ಯೋಗದ ಮೂಲಕ ಸಂಯೋಜಿತವಾದ ಆರೋಗ್ಯಸೇವೆಗಳನ್ನು ಒದಗಿಸುತ್ತದೆ.
ಅತ್ಯಾಧುನಿಕ ಸೌಲಭ್ಯದ ಆಸ್ಪತ್ರೆ
ಸರ್ವಾಂಗೀಣವಾದ ಆರೋಗ್ಯಸೇವೆಗಳನ್ನು ಒದಗಿಸುವ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಹೊಸ ಮಾನದಂಡಗಳನ್ನು ರೂಪಿಸಿಕೊಟ್ಟ ಕಾರಣದಿಂದಾಗಿ ಖ್ಯಾತಿ ಪಡೆದಿರುವ ʼಸೌಖ್ಯʼ, ಬಹಳ ವಿಶಿಷ್ಟವಾದ ಮಾದರಿಯೊಂದನ್ನು ಸೃಷ್ಟಿಸಿದೆ. ಇದು ವೈದ್ಯಕೀಯ ವಿಜ್ಞಾನವನ್ನು ಸಾಂಪ್ರದಾಯಿಕ ಚಿಕಿತ್ಸೆ, ನೈಸರ್ಗಿಕ ಉಪಶಮನ ಕ್ರಮಗಳು ಮತ್ತು ರೋಗತಡೆ ಕ್ರಮಗಳ ಜೊತೆ ಬಹಳ ಸುಲಲಿತವಾಗಿ ಬೆರೆಸುತ್ತದೆ. ಈ ವಿಸ್ತರಣೆಯು ಕಂಪನಿಯ ಪಯಣದಲ್ಲಿ ಒಂದು ತಿರುವು ಇದ್ದಂತಿದೆ. ಭಾರತದ ಆಯುಷ್ ವ್ಯವಸ್ಥೆಯು ಹಿಂದೆಂದೂ ಕಾಣದಂತಹ ಬೆಳವಣಿಗೆಯನ್ನು ಹಾಗೂ ನೀತಿಗಳ ಬೆಂಬಲವನ್ನು ಕಾಣುತ್ತಿರುವ ಸಂದರ್ಭದಲ್ಲಿ ದೊಡ್ಡ ಸಮುದಾಯಕ್ಕೆ ಸಂಯೋಜಿತವಾದ ಆರೋಗ್ಯಸೇವೆಯನ್ನು ಸಂಸ್ಥೆ ಒದಗಿಸಲಿದೆ.
ಅಯುಷ್ ಸಚಿವಾಲಯದ ನೆರವು
ಆಯುಷ್ ಸಚಿವಾಲಯಕ್ಕೆ 2025-26ನೇ ಹಣಕಾಸು ವರ್ಷಕ್ಕೆ ನೀಡಿರುವ ಅನುದಾನವು 14.2%ನಷ್ಟು ಹೆಚ್ಚಳವಾಗಿದ್ದು, ರೂ 3,992.9 ಕೋಟಿಗೆ ತಲುಪಿದೆ. ಭಾರತದ ಆಯುಷ್ ಮಾರುಕಟ್ಟೆಯ ಗಾತ್ರವು 2024ರಲ್ಲಿ 43.3 ಬಿಲಿಯನ್ ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದೆ. 2030ರ ವೇಳೆಗೆ 200 ಬಿಲಿಯನ್ ಅಮೆರಿಕನ್ ಡಾಲರ್ ಆಗುವ ನಿರೀಕ್ಷೆ ಇದೆ. ಇದೇ ವೇಳೆ ಭಾರತದ ಆರೋಗ್ಯ-ಆರೈಕೆ ಪ್ರವಾಸೋದ್ಯಮ ವಲಯವು ರೂ 1.64 ಲಕ್ಷ ಕೋಟಿಯಿಂದ 2031ರ ವೇಳೆಗೆ ರೂ 2.57 ಲಕ್ಷ ಕೋಟಿಗೆ ಏರಿಕೆ ಆಗುವ ನಿರೀಕ್ಷೆ ಇದೆ. ಇದು ಆಯುರ್ವೇದ, ಯೋಗ ಮತ್ತು ಸರ್ವಾಂಗೀಣವಾದ ಪುನಶ್ಚೇತನ ಕ್ರಮಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆಯು ಹೆಚ್ಚಳವಾಗುವುದನ್ನು ತೋರಿಸುತ್ತಿದೆ. ಇವೆಲ್ಲವೂ ಸಂಯೋಜಿತ ಆರೋಗ್ಯಸೇವೆಗಳ ವಿಚಾರದಲ್ಲಿ ಭಾರತವನ್ನು ಜಾಗತಿಕ ಮಟ್ಟದ ಕೇಂದ್ರವನ್ನಾಗಿ ಗಟ್ಟಿಯಾಗಿ ನಿಲ್ಲಿಸುತ್ತವೆ ಹಾಗೂ ಸೌಖ್ಯ ಸಂಸ್ಥೆಯ ಹೊಸ ಉಪಕ್ರಮವು ಎಷ್ಟರಮಟ್ಟಿಗೆ ಸಮಯೋಚಿತ ಹಾಗೂ ಪ್ರಸ್ತುತ ಎಂಬುದನ್ನು ಹೇಳುತ್ತಿವೆ.
ಸರ್ವಾಂಗೀಣ ಆರೋಗ್ಯಸೇವೆಗಳಿಗೆ ಸಂಬಂಧಿಸಿದ ಜಾಗತಿಕ ಮಟ್ಟದ ಗುಣಮಟ್ಟ, ಭಾರತದ ಅತ್ಯುತ್ತಮ ನೈಸರ್ಗಿಕ ಚಿಕಿತ್ಸಾ ಸಂಪ್ರದಾಯಗಳು ಪರಸ್ಪರ ಸಂಧಿಸುವ ಜಾಗವನ್ನಾಗಿ ಸೌಖ್ಯ ಸಂಸ್ಥೆಯನ್ನು ಯಾವಾಗಲೂ ಕಾಣಲಾಗುತ್ತದೆ. ಬ್ರಿಟನ್ನಿನ ರಾಜ ಚಾರ್ಲ್ಸ್, ರಾಣಿ ಕ್ಯಾಮಿಲ್ಲಾ ಸೇರಿದಂತೆ ಜಾಗತಿಕ ಮಟ್ಟದ ಹಾಗೂ ಭಾರತದ ಹಲವು ಗಣ್ಯರು ಇದನ್ನು ವಿಶ್ವಾಸದಿಂದ ದಶಕಗಳಿಂದ ಕಂಡಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಬೆಳವಣಿಗೆಯು ಎರಡು ಬಗೆಯ ಭಿನ್ನ ಹಾಗೂ ಪರಸ್ಪರ ಪೂರಕವಾದ ನೆಲೆಗಳನ್ನು ಆಧರಿಸಿರಲಿದೆ ಎಂದು ಈ ಸೌಖ್ಯ ಸಂಸ್ಥೆಯ ಸಂಸ್ಥಾಪಕ ಡಾ. ಇಸಾಕ್ ಮಥಾಯಿ ಹೇಳಿದ್ದಾರೆ.
ಹೊಸ ಆಸ್ಪತ್ರೆಯ ನಿರ್ಮಾಣವು ಮುಂದಿನ 6-9 ತಿಂಗಳಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಇದು ಎರಡು ಹಂತಗಳಲ್ಲಿ ಅನುಷ್ಠಾನಗೊಳ್ಳಲಿದೆ. ಮೊದಲ ಹಂತದಲ್ಲಿ 50 ಹಾಸಿಗಳು, ಒಂದಿಷ್ಟು ಪ್ರಮುಖ ವೈಶಿಷ್ಟ್ಯಗಳ ಸೇವೆಗಳು ಇರಲಿವೆ. ಎರಡನೆಯ ಹಂತದಲ್ಲಿ ಆಸ್ಪತ್ರೆಯ ಸಾಮರ್ಥ್ಯವನ್ನು ಹೆಚ್ಚು ಮಾಡಲಾಗುತ್ತದೆ ಹಾಗೂ ಲಭ್ಯವಿರುವ ಸೇವೆಗಳ ಸಂಖ್ಯೆಯನ್ನು ಕೂಡ ಹೆಚ್ಚು ಮಾಡಲಾಗುತ್ತದೆ. ಈ ಆಸ್ಪತ್ರೆಯು 2026-27ನೇ ಹಣಕಾಸು ವರ್ಷದ ಅಂತ್ಯದ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆಗೆ ಸಿದ್ಧವಾಗುವ ನಿರೀಕ್ಷೆ ಹೊಂದಲಾಗಿದೆ. ಈ ಆಸ್ಪತ್ರೆಯು ಸೌಖ್ಯ ಸಂಸ್ಥೆಯ ಸರ್ವಾಂಗೀಣ ತತ್ವವನ್ನು ಪ್ರತಿನಿಧಿಸಲಿದೆ. ಸಾವಯವ ಆಹಾರ, ಒಂದು ಕಿ.ಮೀ. ಉದ್ದದ ಕಾಲ್ನಡಿಗೆ ಪಥ, ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ ಸಾವಯವ ತೋಟ, ಉನ್ನತ ಮಟ್ಟದ ಮಳೆನೀರಿನ ಕೊಯ್ಲು ವ್ಯವಸ್ಥೆಯು ಇಲ್ಲಿರಲಿವೆ. ಸಮಗ್ರ ಸ್ವರೂಪದ ಎಲ್ಲ ಬಗೆಯ ಚಿಕಿತ್ಸೆಗಳಿಗೆ ಸಮಗ್ರ ಸ್ವರೂಪದ ವಿಮಾ ಸೌಲಭ್ಯ ಸಿಗಲಿದೆ.
ಬೆಂಗಳೂರಿನಲ್ಲಿನ 100 ಹಾಸಿಗೆಗಳ ಆಸ್ಪತ್ರೆಯು ಆರೈಕೆಯನ್ನು ಅತ್ಯಾಧುನಿಕ ಬಗೆಯಲ್ಲಿ ನೀಡಲಿದೆ. ಕ್ಯಾನ್ಸರ್ ಆರೈಕೆ, ಉಸಿರಾಟದ ಸಮಸ್ಯೆಗಳಿಗೆ ಚಿಕಿತ್ಸೆ, ಜೀವನಶೈಲಿಯ ಸಮಸ್ಯೆ ಹಾಗೂ ಚಯಾಪಚಯಕ್ಕೆ ಸಂಬಂಧಿಸಿದ ಸಮಸ್ಯೆಗಳು, ಮಕ್ಕಳ ಬೆಳವಣಿಗೆಯಲ್ಲಿನ ಸಮಸ್ಯೆಗಳು, ನರಸಂಬಂಧಿ ಆರೋಗ್ಯ, ಗ್ಯಾಸ್ಟ್ರಿಕ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಚಿಕಿತ್ಸೆ ಇರಲಿದೆ. ಪ್ರತಿಯೊಂದು ಚಿಕಿತ್ಸಾ ಕ್ರಮ ಕೂಡ ಆಧುನಿಕ ವೈದ್ಯಕೀಯ ಪರಿಣತಿ ಮತ್ತು ಸಾಂಪ್ರದಾಯಿಕ ವ್ಯವಸ್ಥೆಯನ್ನು ಒಗ್ಗೂಡಿಸಲಿದೆ. ಈ ಮೂಲಕ ಅದು ಸಮಗ್ರವಾದ, ರೋಗಿ ಕೇಂದ್ರಿತ ನಡೆಯನ್ನು ಅನುಸರಿಸಲಿದೆ.
