'ನ.1 ರೊಳಗೆ ಚಿಕ್ಕೋಡಿ ಜಿಲ್ಲೆ ಘೋಷಿಸದಿದ್ದರೆ ಉಗ್ರ ಚಳವಳಿ'
ಅಭಿವೃದ್ಧಿ ದೃಷ್ಠಿಯಿಂದ ಅಖಂಡ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಹೊಸ ಜಿಲ್ಲೆಯನ್ನಾಗಿ ಬರುವ ನ.1 ರೊಳಗಾಗಿ ಘೋಷಣೆ ಮಾಡಬೇಕು| ಇಲ್ಲದಿದ್ದರೆ ಅಥಣಿ ತಾಲೂಕು ತೇಲಸಂಗದಿಂದ ಯಮಕನಮರಡಿ ಕೊನೆ ಹಳ್ಳಿಯವರಿಗೆ ಜಿಲ್ಲಾ ಹೋರಾಟ ಸಮಿತಿ ಪಾದಯಾತ್ರೆ ಕೈಗೊಳ್ಳಲಾಗುವುದು| ಜಿಲ್ಲೆಗೆ ಅಡ್ಡಗಾಲು ಹಾಕುವ ನಾಯಕರ ವಿರುದ್ಧ ಚಳವಳಿ ಆರಂಭಿಸಲಾಗುತ್ತದೆ | ಅಭಿವೃದ್ಧಿ ದೃಷ್ಠಿಯಿಂದ ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಕಳೆದ 25 ವರ್ಷಗಳಿಂದ ನಿರಂತರ ಹೋರಾಟ ಮಾಡಲಾಗುತ್ತಿದೆ|
ಚಿಕ್ಕೋಡಿ(ಅ.14): ಅಭಿವೃದ್ಧಿ ದೃಷ್ಠಿಯಿಂದ ಅಖಂಡ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಹೊಸ ಜಿಲ್ಲೆಯನ್ನಾಗಿ ಬರುವ ನ.1 ರೊಳಗಾಗಿ ಘೋಷಣೆ ಮಾಡಬೇಕು ಇಲ್ಲದಿದ್ದರೆ ಅಥಣಿ ತಾಲೂಕು ತೇಲಸಂಗದಿಂದ ಯಮಕನಮರಡಿ ಕೊನೆ ಹಳ್ಳಿಯವರಿಗೆ ಜಿಲ್ಲಾ ಹೋರಾಟ ಸಮಿತಿ ಪಾದಯಾತ್ರೆ ಕೈಗೊಂಡು ಜಿಲ್ಲೆಗೆ ಅಡ್ಡಗಾಲು ಹಾಕುವ ನಾಯಕರ ವಿರುದ್ಧ ಚಳವಳಿ ಆರಂಭಿಸಲಾಗುತ್ತದೆ ಎಂದು ಜಿಲ್ಲಾ ಹೋರಾಟ ಸಮಿತಿ ಮುಖಂಡ ಬಿ.ಆರ್.ಸಂಗಪ್ಪಗೋಳ ಅವರು ಹೇಳಿದ್ದಾರೆ.
ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಭಿವೃದ್ಧಿ ದೃಷ್ಠಿಯಿಂದ ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಕಳೆದ 25 ವರ್ಷಗಳಿಂದ ನಿರಂತರ ಹೋರಾಟ ಮಾಡಲಾಗುತ್ತಿದೆ. ಆದರೆ ಇನ್ಮೇಲೆ ಹೋರಾಟದ ರೂಪುರೇಷೆ ಉಗ್ರರೂಪ ತಾಳಲಿದೆ ಎಂದು ಹೇಳಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಳೆದ ಒಂದು ವಾರದ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಬೆಳಗಾವಿಗೆ ಆಗಮಿಸಿದಾಗ ಜಿಲ್ಲಾ ಹೋರಾಟ ಸಮಿತಿ ಭೇಟಿ ಮಾಡಿ ಮನವಿ ಮಾಡುವ ವೇಳೆಯಲ್ಲಿ ಮುಖ್ಯಮಂತ್ರಿಗಳು ಸಕಾರಾತ್ಮಕ ಸ್ಪಂದನೆ ನೀಡಿದ್ದರು. ನಾನು ಹೋರಾಟದ ಮತ್ತು ಜಿಲ್ಲೆಯ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗೆ ಮನವರಿಕೆ ಮಾಡುವ ವೇಳೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಮಧ್ಯಸ್ಥಿಕೆ ವಹಿಸಿದಾಗ ಕೆಲಹೊತ್ತು ಮಾತಿನ ಚಕಮಕಿ ನಡೆದಿದೆ. ಸವದಿ ಅವರ ಮನಸ್ಸಿಗೆ ನೋವಾಗಿದ್ದರೆ ಜಿಲ್ಲಾ ಹೋರಾಟ ಸಮಿತಿ ಕ್ಷಮೆಯಾಚಿಸುತ್ತದೆ. ಆದರೆ ಜಿಲ್ಲೆ ಮಾಡಲು ಹಿಂದೆ ಸರಿಬಾರದು ಎಂದು ಒತ್ತಾಯಿಸಿದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡುತ್ತೇನೆ ಎಂದು ಭರವಸೆ ನೀಡಿದ ಸಂಸದ ಅಣ್ಣಾಸಾಹೇಬ ಜೊಲ್ಲೆ ಪ್ರಯತ್ನ ದೊಡ್ಡದಿದೆ. ಜಿಲ್ಲೆಯಲ್ಲಿ ಇಬ್ಬರು ಪ್ರಭಾವಿ ಸಚಿವರು, ರಾಜ್ಯಸಭೆ ಸದಸ್ಯರು ಮತ್ತು ಶಾಸಕರು ಇರುವುದರಿಂದ ಜಿಲ್ಲೆ ಘೋಷಣೆಗೆ ಒತ್ತಾಯ ಮಾಡಬೇಕು. ಬಳ್ಳಾರಿ ಜಿಲ್ಲೆಯ ಒಬ್ಬ ಶಾಸಕ ಜಿಲ್ಲೆಗಾಗಿ ರಾಜೀನಾಮೆ ನೀಡಿದ ಬಳಿಕ ವಿಜಯನಗರ ಜಿಲ್ಲೆ ಮಾಡಲು ಸರ್ಕಾರ ಹೊರಟಿದೆ. ಆದರೆ ಬೆಳಗಾವಿ ಜಿಲ್ಲೆಯ ನಾಯಕರಿಗೆ ಏನಾಗಿದೆ ಎಂದು ಪ್ರಶ್ನಿಸಿದರು.
ಬರುವ ನವೆಂಬರ್ ಒಳಗಾಗಿ ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು. ಇಲ್ಲದೇ ಹೋದರೆ ಜಿಲ್ಲಾ ಹೋರಾಟ ಸಮಿತಿಯು ಅಥಣಿ ತಾಲೂಕಿನ ತೇಲಸಂಗದಿಂದ ಯಮಕನರಡಿ ಕ್ಷೇತ್ರದ ಕೊನೆ ಹಳ್ಳಿಯವರಿಗೆ ಪಾದಯಾತ್ರೆ ಕೈಗೊಂಡು ಜಿಲ್ಲೆಗೆ ಅಡ್ಡಗಾಲು ಹಾಕುವ ಮುಖಂಡರ ಗುಟ್ಟು ರಟ್ಟು ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ಪೊ›.ಎಸ್.ವೈ.ಹಂಜಿ, ಕರವೇ ಜಿಲ್ಲಾ ಸಂಚಾಲಕ ಸಂಜು ಬಡಿಗೇರ, ತುಕರಾಮ ಕೋಳಿ ಮುಂತದವರು ಇದ್ದರು.