*  ವಿದ್ಯುತ್‌ಚಾಲಿತ ವಾಹನಗಳ ಚಾರ್ಜಿಂಗ್‌ ಕೇಂದ್ರಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ *  ಇವಿ ಜಾಗೃತಿ ಪೋರ್ಟಲ್‌*  ಜೂ.23ರಿಂದ ಜೂ.30ರವರೆಗೆ ವಿಶೇಷ ಅಭಿಯಾನ 

ಬೆಂಗಳೂರು(ಜೂ.10): ರಾಜ್ಯದಲ್ಲಿ ಎಲೆಕ್ಟ್ರಿಕ್‌ ವಾಹನ ಬಳಕೆಗೆ ಸರಕಾರ ಉತ್ತೇಜನ ನೀಡುತ್ತಿದ್ದು, ರಾಜ್ಯಾದ್ಯಂತ 1000ಕ್ಕೂ ಹೆಚ್ಚು ವಿದ್ಯುತ್‌ಚಾಲಿತ ವಾಹನಗಳ (ಇವಿ) ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಿದೆ. ಈ ಸಂಖ್ಯೆಯನ್ನು 3 ಸಾವಿರಕ್ಕೆ ಹೆಚ್ಚಳ ಮಾಡಲು ಗುರಿ ಹೊಂದಿದೆ ಎಂದು ಇಂಧನ ಸಚಿವ ವಿ. ಸುನಿಲ್‌ಕುಮಾರ್‌ ಹೇಳಿದ್ದಾರೆ. ಅಲ್ಲದೆ, ವಿದ್ಯುತ್‌ಚಾಲಿತ ವಾಹನಗಳ ಚಾರ್ಜಿಂಗ್‌ ಕೇಂದ್ರಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಜೂ.23ರಿಂದ ಜೂ.30ರವರೆಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಗುರುವಾರ ಬೆಸ್ಕಾಂ ಪ್ರಧಾನ ಕಚೇರಿಯಲ್ಲಿ ಕರ್ನಾಟಕ ಇವಿ ಜಾಗೃತಿ ಪೋರ್ಟಲ್‌ ಮತ್ತು ಬೆಂಗಳೂರು ನಗರವನ್ನು ಜಾಗತಿಕ ಇವಿ ವಲಯವನ್ನಾಗಿ ಪರಿವರ್ತಿಸುವ ದಿಕ್ಸೂಚಿ ವರದಿ ಬಿಡುಗಡೆ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಎಲೆಕ್ಟ್ರಿಕ್‌ ವಾಹನಗಳಿಗೆ 500 ಚಾರ್ಜಿಂಗ್‌ ಕೇಂದ್ರ: ಸುನೀಲ್‌

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ.ರಾಜೇಂದ್ರ ಚೋಳನ್‌, ಭಾರತದ ಬ್ರಿಟಿಷ್‌ ಹೈಕಮಿಷನರ್‌ ಆಲೆಕ್ಸ್‌ ಇಲ್ಲಿಸ್‌, ಕರ್ನಾಟಕ ಮತ್ತು ಕೇರಳದ ಬ್ರಿಟಿಷ್‌ ಉಪ ಹೈ-ಕಮಿಷನರ್‌ ಅನ್ನಾ ಶೋಟ್‌ ಬೋಲ್ಟ್‌, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ. ಕುಮಾರ್‌ ನಾಯಕ್‌, ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎನ್‌.ಮಂಜುಳಾ ಹಾಜರಿದ್ದರು.

ಇವಿ ಜಾಗೃತಿ ಪೋರ್ಟಲ್‌

ವಿದ್ಯುತ್‌ಚಾಲಿತ ವಾಹನ ಬಳಕೆ ಉತ್ತೇಜನಕ್ಕೆ ಇವಿ ಜಾಗೃತಿ ಪೋರ್ಟಲ್‌ಗೆ (www.evkarnataka.co.in) ಚಾಲನೆ ನೀಡಲಾಗಿದೆ. ಸಾರ್ವಜನಿಕರು ರಾಜ್ಯ ಸರ್ಕಾರದ ಇವಿ ನೀತಿ, ರಾಜ್ಯದಲ್ಲಾಗುವ ಇವಿ ಸಂಬಂಧಿತ ಬೆಳವಣಿಗೆಗಳು, ಇವಿ-ಸ್ಟಾರ್ಚ್‌ ಅಪ್‌, ಎಲೆಕ್ಟ್ರಿಕ್‌ ವಾಹನಗಳ ಬಗ್ಗೆ ಪೋರ್ಟಲ್‌ನಲ್ಲಿ ಮಾಹಿತಿ ಪಡೆಯಬಹುದು. ಗ್ರಾಹಕರು ಎಲೆಕ್ಟ್ರಿಕ್‌ ವಾಹನ ಖರೀದಿಸಿದರೆ ಸಿಗುವ ಸರಕಾರದ ಸಹಾಯಧನ, ಚಾರ್ಜಿಂಗ್‌ ಸ್ಟೇಷನ್‌ಗಳ ವ್ಯವಸ್ಥೆ ಬಗ್ಗೆ ಮಾಹಿತಿ ಸಿಗಲಿದೆ.