ಶ್ರೀವಾರಿ ದರ್ಶನಕ್ಕೆ ಈಗ 12 ಗಂಟೆ ಸಮಯ ತೆಗೆದುಕೊಳ್ಳುತ್ತಿದ್ದು, ಶ್ರೀವಾರಿ ದರ್ಶನಕ್ಕೆ ಯಾವುದೇ ಟೋಕನ್ ಇಲ್ಲದೆ ಕಾಯುತ್ತಿರುವವರ ಭಕ್ತರು ವೈಕುಂಠ ಕ್ಯೂ ಕಾಂಪ್ಲೆಕ್ಸ್ 2ರ ವರೆಗೂ ಕಾಯುತ್ತಿದ್ದಾರೆ. 300 ರೂಪಾಯಿ ಟಿಕೆಟ್ ಖರೀದಿಸಿದ ಬಂದ ಭಕ್ತರಿಗೆ ಕೇವಲ 3 ಗಂಟೆಯಲ್ಲಿ ದರ್ಶನ ಆಗುತ್ತಿದೆ.

ಕಲಿಯುಗ ಪ್ರತ್ಯಕ್ಷ ದೈವ ತಿರುಮಲ ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಆಗಮಿಸಬೇಕು ಎಂಬ ಆಸೆ ಇರುತ್ತದೆ. ಆದರೆ ಸದ್ಯ ಇರುವ ಬ್ಯುಸಿ ಲೈಫ್‌ನಲ್ಲಿ ಪ್ರತಿಯೊಬ್ಬರು ವಾರಾಂತ್ಯದಲ್ಲಿ ತಿರುಮಲಕ್ಕೆ ಹೋಗಬೇಕು ಎಂದು ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಶ್ರೀವಾರಿ ದರ್ಶನಕ್ಕೆ ಈ ಹಿಂದಿಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ತಿಮ್ಮಪ್ಪನ ದರ್ಶನ ಪಡೆದುಕೊಳ್ಳುವುದಕ್ಕಿಂತ ತಿರುಮಲಕ್ಕೆ ಎಂಟ್ರಿ ಆಗೋದೇ ಈಗ ಅತ್ಯಂತ ದೊಡ್ಡ ಸಮಸ್ಯೆಯಾಗಿ ಬದಲಾವಣೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಟ್ರಾಫಿಕ್, ಟ್ರಾಫಿಕ್..

ತಿರುಪತಿಯಲ್ಲಿ ಬದಲಾದ ಸ್ಥಿತಿ

ಒಂದು ಸಂದರ್ಭದಲ್ಲಿ ತಿರುಮಲಕ್ಕೆ ಹೋಗಬೇಕು ಎಂದರೆ, ಬಸ್, ರೈಲುಗಳನ್ನು ಜನರು ಆಯ್ಕೆ ಮಾಡಿಕೊಳ್ಳುತ್ತಿದ್ದರು. ತಿರುಪತಿಯಲ್ಲಿ ಇಳಿದು ಆ ಬಳಿಕ ಆಟೋದಲ್ಲಿ ತೆರಳುವ ಮಂದಿ ಹೆಚ್ಚಿದ್ದರು ಅಥವಾ ಅಲ್ಲಿಂದಲೇ ಬಸ್ ಹತ್ತಿ ತಿರುಮಲಕ್ಕೆ ಹೋಗುತ್ತಿದ್ದರು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾವಣೆಯಾಗಿದೆ. ವ್ಯಕ್ತಿಗೆ ಒಂದು ಕಾರಿನಂತೆ ಈಗ ವಾಹನಗಳು ಆಗಮಿಸುತ್ತಿದೆ. ಪ್ರತಿ ನಾಲ್ವರು ಒಂದು ಕಾರು ತೆಗೆದುಕೊಂಡು ತಿರುಮಲಕ್ಕೆ ಆಗಮಿಸುತ್ತಿರುವುದರಿಂದ ಟ್ರಾಫಿಕ್ ಜಾಮ್ ಹೆಚ್ಚಾಗಿದೆ.

ಪ್ರತಿ ದಿನ 10-12 ಸಾವಿರ ವಾಹನಗಳ ಆಗಮನ

ಕಳೆದ ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಬರೋಬ್ಬರಿ 33 ಸಾವಿರ ವಾಹನಗಳು ತನಿಖಾ ಕೇಂದ್ರದಿಂದ ತಿರುಮಲಕ್ಕೆ ಹೋಗಿದೆ. ಸ್ವತಃ ವಾಹನಗಳಲ್ಲಿ ಬರುವವರ ಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚಾಗಿದ್ದು, ಇದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಸದ್ಯ ತಿರುಮಲಕ್ಕೆ ಆಗಮಿಸುತ್ತಿರುವ ವಾಹನಗಳ ಸಂಖ್ಯೆ ದಿನಕ್ಕೆ 10-12 ಸಾವಿರಕ್ಕೆ ಹೆಚ್ಚಳವಾಗಿದೆ. ಇದರೊಂದಿಗೆ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ.

ತಿಮ್ಮಪ್ಪನ ದರ್ಶನಕ್ಕೆ 12 ಗಂಟೆ ಸಮಯ

ಕೇವಲ ವೀಕ್‌ಎಂಡ್‌ಗಳಲ್ಲಿ ಮಾತ್ರವಲ್ಲದೇ, ಸಾಮಾನ್ಯ ದಿನಗಳಲ್ಲಿಯೂ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಶ್ರೀವಾರಿ ದರ್ಶನಕ್ಕೆ ಈಗ 12 ಗಂಟೆ ಸಮಯ ತೆಗೆದುಕೊಳ್ಳುತ್ತಿದ್ದು, ಶ್ರೀವಾರಿ ದರ್ಶನಕ್ಕೆ ಯಾವುದೇ ಟೋಕನ್ ಇಲ್ಲದೆ ಕಾಯುತ್ತಿರುವವರ ಭಕ್ತರು ವೈಕುಂಠ ಕ್ಯೂ ಕಾಂಪ್ಲೆಕ್ಸ್ 2ರ ವರೆಗೂ ಕಾಯುತ್ತಿದ್ದಾರೆ. ನಾರಾಯಣಗಿರಿ ಶೇಡ್‌ನಿಂದ ರಿಂಗ್ ರೋಡ್, ಶೀಲತೋರಣದ ವರೆಗೂ ಕ್ಯೂಲೈನ್‌ನಲ್ಲಿ ನಿಂತಿದ್ದಾರೆ. 300 ರೂಪಾಯಿ ಟಿಕೆಟ್ ಖರೀದಿಸಿದ ಬಂದ ಭಕ್ತರಿಗೆ ಕೇವಲ 3 ಗಂಟೆಯಲ್ಲಿ ದರ್ಶನ ಆಗುತ್ತಿದೆ. ಭಾನುವಾರ 87,179 ಮಂದಿ ಭಕ್ತರು ದರ್ಶನ ಪಡೆದುಕೊಡಿದ್ದು, ಹುಂಡಿ ಮೂಲಕ 4.59 ಕೋಟಿ ಆದಾಯ ಹರಿದು ಬಂದಿದೆ.