ಉಕ್ರೇನ್‌ ಕುಟುಂಬದ ಅಗೇಲು ಸೇವೆ-) ಉಕ್ರೇನ್‌ ಕುಟುಂಬದಿಂದ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ಅಗೇಲು ಸೇವೆ ತಮ್ಮ ಮಗನ ಅನಾರೋಗ್ಯ ಹಿನ್ನೆಲೆಯಲ್ಲಿ ಕೊರಗಜ್ಜನಿಗೆ ಹರಕೆ ಹೊತ್ತಿದ್ದ ವಿದೇಶಿ ಕುಟುಂಬ

ಮೌನೇಶ್‌ ವಿಶ್ವಕರ್ಮ

(ನ.12) ಬಂಟ್ವಾಳ : ಕಾಂತಾರ ಸಿನಿಮಾದ ಮೂಲಕ ತುಳುನಾಡಿನ ದೈವಗಳ ಮಹತ್ವ ಜಗತ್ತಿನೆಲ್ಲೆಡೆ ಪಸರಿಸುತ್ತಿರುವ ಬೆನ್ನಲ್ಲೇ ಉಕ್ರೇನ್‌ನ ಕುಟುಂಬವೊಂದು ಶುಕ್ರವಾರ ರಾತ್ರಿ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ಅಗೇಲು ಸೇವೆ ನೀಡಿದೆ.

ಮಗುವಿನ ಅನಾರೋಗ್ಯದ ಹಿನ್ನೆಲೆಯಲ್ಲಿ ಕೊರಗಜ್ಜನ ಕೋಲದಲ್ಲಿ ಹೇಳಿದ್ದ ಹರಕೆಯನ್ನು ತೀರಿಸಿರುವ ಕುಟುಂಬ ಇದೀಗ ಸಂತೃಪ್ತ ಮನೋಭಾವದೊಂದಿಗೆ ಉಕ್ರೇನ್‌ಗೆ ಹೊರಡಲು ಸಜ್ಜಾಗಿ ನಿಂತಿದೆ.

ಕಾಂತಾರಾ ಎಫೆಕ್ಟ್?!; ಉತ್ತರ ಕರ್ನಾಟಕದಲ್ಲಿಯೂ ಶುರುವಾಯ್ತು ಕರಾವಳಿಯ ದೈವಾರಾಧನೆ!

ಕಳೆದ ಕೆಲ ತಿಂಗಳ ಹಿಂದೆ ಭಾರತ ಪ್ರವಾಸ ಕೈಗೊಂಡಿದ್ದ ಉಕ್ರೇನ್‌ ಪ್ರಜೆಗಳಾದ ಆ್ಯಂಡ್ರೋ, ಪತ್ನಿ ಎಲೆನಾ ಹಾಗೂ ಮಗ ಮ್ಯಾಕ್ಸಿಂ ಉಡುಪಿಯ ಮಲ್ಪೆ ಕಡಲ ತೀರಕ್ಕೆ ಬಂದಿದ್ದರು. ಈ ಸಂದರ್ಭ ಉಡುಪಿಯ ಗೋಶಾಲೆಗೆ ತೆರಳಿದ್ದ ಈ ಕುಟುಂಬ, ನಾಡಿ ನೋಡಿ ಔಷಧಿ ಕೊಡುವ ಭಕ್ತಿ ಭೂಷಣ್‌ ಪ್ರಭೂಜಿ ಅವರನ್ನು ಭೇಟಿ ಮಾಡಿದ್ದರು. ಅನಾರೋಗ್ಯಕ್ಕೆ ಒಳಗಾಗಿದ್ದ ಮಗನ ವಿಚಾರವನ್ನು ಉಕ್ರೇನ್‌ ದಂಪತಿ ಗುರೂಜಿ ಅವರಲ್ಲಿ ತಿಳಿಸಿದ್ದು, ಅದರಂತೆ ದೇಸಿ ದನದ ಜೊತೆಗೆ ವಿಹಾರ ಸಹಿತ ನಾಟಿ ಚಿಕಿತ್ಸೆ ಆರಂಭಿಸಿದ್ದರು. ಹಾಗಾಗಿ ಕಳೆದ ಮೂರು ತಿಂಗಳಿನಿಂದ ಕುಮ್ಡೇಲುವಿನ ಶ್ರೀರಾಧ ಸುರಭೀ ಗೋಮಂದಿರದಲ್ಲಿ ಉಕ್ರೇನ್‌ ಕುಟುಂಬ ವಾಸ್ತವ್ಯ ಹೂಡಿದ್ದರು.

ಕೊರಗಜ್ಜನಿಗೆ ಪ್ರಾರ್ಥಿಸಿ ಇರಿಸಿದ್ದ ವೀಳ್ಯದೆಲೆಯಲ್ಲಿ ಬೇರು!

ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭ ಕುಮ್ಡೇಲುವಿನ ಗೋಮಂದಿರದಲ್ಲಿ ನಡೆದ ಕೊರಗಜ್ಜನ ಕೋಲದಲ್ಲಿ ಈ ದಂಪತಿ ತಮ್ಮ ಮಗನ ಅನಾರೋಗ್ಯಕ್ಕೆ ಪರಿಹಾರ ನೀಡುವಂತೆ ಪ್ರಾರ್ಥಿಸಿ, ಅಗೇಲು ಸೇವೆ ನೀಡುವುದಾಗಿ ಹರಕೆ ಹೇಳಿದ್ದರು. ಇದೀಗ ಮಗ ಮ್ಯಾಕ್ಸಿಂ ಗುಣಮುಖನಾಗಿರುವ ಹಿನ್ನೆಲೆ ಈ ಕುಟುಂಬ ಶುಕ್ರವಾರ ರಾತ್ರಿ ಕೊರಗಜ್ಜನಿಗೆ ಅಗೇಲು ಸೇವೆ ನೀಡಿದೆ. ಭಕ್ತಿಭೂಷಣ್‌ ದಾಸ್‌ ಪ್ರಭೂಜಿ, ಪದ್ಮನಾಭ ಗೋವಿನ ತೋಟ, ರಾಮಚಂದ್ರ ಮಾರಿಪಳ್ಳ, ಯಾದವ ಕೊಡಂಗೆ, ನವೀನ್‌ ಮಾರ್ಲ ಮೊದಲಾದವರ ಉಪಸ್ಥಿತಿಯಲ್ಲಿ ಅಗೇಲು ಸೇವೆ ನಡೆದಿದ್ದು, ಉಕ್ರೇನ್‌ ಕುಟುಂಬವೂ ಸಂತೃಪ್ತ ಮನೋಭಾವದಿಂದ ಭಾಗವಹಿಸಿತ್ತು. ಈ ಕುಟುಂಬ ಇನ್ನೆರಡು ದಿನದಲ್ಲಿ ಟರ್ಕಿಗೆ ಪಯಣಿಸಿ, ಬಳಿಕ ತಮ್ಮ ತವರು ಉಕ್ರೇನ್‌ಗೆ ಪ್ರಯಾಣಿಸಲಿದ್ದಾರೆ.